ಸತತ ಆರು ಗಂಟೆ ಕಾದು ನಾಮಪತ್ರ ಸಲ್ಲಿಸಿದ ಸಿಎಂ ಕೇಜ್ರಿವಾಲ್
ನವದೆಹಲಿ, ಜನವರಿ 21: ಸತತ ಆರು ಗಂಟೆ ಕಾದ ನಂತರ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರು ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ.
ನಿನ್ನೆಯೇ ಅರವಿಂದ ಕೇಜ್ರಿವಾಲ್ ಅವರು ದೆಹಲಿ ವಿಧಾನಸಭೆ ಚುನಾವಣೆಗೆ ನವದೆಹಲಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಬೇಕಾಗಿತ್ತು. ಆದರೆ ಅವರ ರೋಡ್ ಶೋ ದಿಂದಾಗಿ ನಿಗದಿತ ಸಮಯದ ಒಳಗೆ ನಾಮಪತ್ರ ಸಲ್ಲಿಸಲು ಸಾಧ್ಯವಾಗಿರಲಿಲ್ಲ.
ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದ ಇಂದು ಅರವಿಂದ ಕೇಜ್ರಿವಾಲ್ ಅವರು ನಾಮಪತ್ರ ಸಲ್ಲಿಸಲು ಕಚೇರಿಗೆ ತೆರಳಿದರು. ಆದರೆ ಅವರು ಸತತ ಆರು ಗಂಟೆ ಕಾಲ ಕಚೇರಿಯಲ್ಲಿಯೇ ಕಾದಿದ್ದು, ಕೊನೆಗೂ ನಾಮಪತ್ರ ಸಲ್ಲಿಸಿದರು.

ಕೇಜ್ರಿವಾಲ್ ಅವರಿಗಿಂತಲೂ ಮುಂಚೆ ಬಂದಿದ್ದ ನಲವತ್ತಕ್ಕೂ ಹೆಚ್ಚು ಮಂದಿ ನಾಮಪತ್ರ ಸಲ್ಲಿಸುತ್ತಿದ್ದರು ಹಾಗಾಗಿ ಕೇಜ್ರಿವಾಲ್ ಅವರು ಆರು ಗಂಟೆ ಕಾಯಬೇಕಾಗಿ ಬಂತು.
ಕಚೇರಿಯಲ್ಲಿದ್ದಾಗಲೇ ಟ್ವೀಟ್ ಮಾಡಿದ್ದ ಕೇಜ್ರಿವಾಲ್, 'ನನ್ನ ಟೋಕನ್ ಸಂಖ್ಯೆ 45, ಇಲ್ಲಿ ಹಲವರು ಚುನಾವಣೆಗೆ ನಾಮಪತ್ರ ಸಲ್ಲಿಸುತ್ತಿದ್ದಾರೆ. ಪ್ರಜಾಪ್ರಭುತ್ವದ ಹಬ್ಬದಲ್ಲಿ ಇಷ್ಟೋಂದು ಮಂದಿ ಭಾಗಿಯಾಗುತ್ತಿರುವುದು ಸಂತಸ ತಂದಿದೆ' ಎಂದಿದ್ದರು.
ತಮ್ಮ ನಾಯಕ ಸತತ ಆರು ಗಂಟೆ ಕಾಯುವಂತಾದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಎಎಪಿಯು, ಕೊನೆಯದಿನವಾದ ಇಂದು ಅರವಿಂದ ಕೇಜ್ರಿವಾಲ್ ಅವರು ನಾಮಪತ್ರ ಸಲ್ಲಿಸದಿರಲೆಂದು ಹೀಗೆ ಮಾಡಲಾಗಿದೆ. ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಸುಮಾರು 35 ಕ್ಕೂ ಹೆಚ್ಚು ಮಂದಿ ಸೂಕ್ತ ಕಾಗದ ಪತ್ರಗಳಿಲ್ಲದೆ ಸುಮ್ಮನೆ ಕೂತಿದ್ದಾರೆ' ಎಂದು ಹೇಳಿತ್ತು.
ಗ್ಯಾಲರಿ: ದಿಲ್ಲಿ ಗಲ್ಲಿಗಲ್ಲಿಗಳಲ್ಲಿ ಚುನಾವಣೆ ರಂಗೋ ರಂಗು
ಕೇಜ್ರಿವಾಲ್ ಅವರನ್ನು ಕಾಯಿಸುವ ಉದ್ದೇಶದಿಂದ ಅಥವಾ ಅವರು ನಾಮಪತ್ರ ಸಲ್ಲಿಸಲು ಆಗದಂತೆ ಮಾಡುವ ಉದ್ದೇಶದಿಂದಲೇ ಕೊನೆಯ ದಿನವಾದ ಇಂದು ಹೆಚ್ಚು ಮಂದಿ ನಾಮಪತ್ರ ಸಲ್ಲಿಸಲು ಚುನಾವಣಾಧಿಕಾರಿಗಳ ಕಚೇರಿಗೆ ಆಗಮಿಸಿದ್ದರು ಎಂಬ ಆರೋಪ ಕೇಳಿಬರುತ್ತಿದೆ.
ಎಎಪಿ ಪಕ್ಷದ ಮುಖಂಡ ಅರವಿಂದ ಕೇಜ್ರಿವಾಲ್ ಅವರು ನವದೆಹಲಿ ಕ್ಷೇತ್ರದಿಂದ ಚುನಾವಣೆ ಸ್ಪರ್ಧಿಸುತ್ತಿದ್ದು, ಎದುರಾಳಿಯಾಗಿ ಬಿಜೆಪಿಯ ಸುನಿಲ್ ಯಾದವ್ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್ನಿಂದ ರಮೇಶ್ ಸಬರ್ವಾಲ್ ಸ್ಪರ್ಧಿಸಿದ್ದಾರೆ.












Click it and Unblock the Notifications