ಅತ್ಯಾಚಾರಿ ಪರ ಲಾಯರ್ ಹುಚ್ಚುಚ್ಚು ಹೇಳಿಕೆಗಳು!
ನವದೆಹಲಿ, ಸೆ. 14 : ಯುವತಿಯ ಮೇಲೆ ಪೈಶಾಚಿಕ ಕೃತ್ಯವೆಸಗಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ನಾಲ್ವರು ದೆಹಲಿ ಅತ್ಯಾಚಾರಿಗಳು ಅಷ್ಟೊಂದು ವಿಚಲಿತರಾಗಿದ್ದಾರೋ ಇಲ್ಲವೋ, ಅವರನ್ನು ಪ್ರತಿನಿಧಿಸಿದ್ದ ವಕೀಲ ಎಪಿ ಸಿಂಗ್ ಮಾತ್ರ ಆಕಾಶ ಕಳಚಿಬಿದ್ದವರ ಹಾಗೆ ಆಡುತ್ತಿದ್ದಾರೆ. ಮನಸ್ಸಿನ ಸ್ಥಿಮಿತ ಕಳೆದುಕೊಂಡವರಂತೆ ಹುಚ್ಚುಚ್ಚು ಹೇಳಿಕೆಗಳನ್ನು ನೀಡುತ್ತ ಎಲ್ಲ ಆಕ್ರೋಶಕ್ಕೆ ಗುರಿಯಾಗುತ್ತಿದ್ದಾರೆ.
ಅವರ ಮಾತಿನ ಕೆಲ ನಮೂನೆ ಹೀಗಿವೆ ನೋಡಿ, "ಸೆಷನ್ಸ್ ಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಇರುವ 2-3 ತಿಂಗಳ ಅವಧಿಯಲ್ಲಿ ಭಾರತದಲ್ಲಿ ಯಾವುದೇ ಅತ್ಯಾಚಾರ ನಡೆಯದಿದ್ದರೆ, ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸುವುದಿಲ್ಲ. ಆದರೆ, ಒಂದು ವೇಳೆ ಎಲ್ಲಿಯಾದರೂ ಅತ್ಯಾಚಾರಗಳಾದರೆ ಮೇಲ್ಮನವಿ ಸಲ್ಲಿಸದೆ ಬಿಡುವುದಿಲ್ಲ" ಎಂದು ಶನಿವಾರ ಅಸಂಬದ್ಧ ಹೇಳಿಕೆ ನೀಡಿದ್ದಾರೆ.
"ಪಾಲಕರು ಮೊದಲು ತಮ್ಮ ಮಕ್ಕಳನ್ನೇಕೆ ಹದ್ದುಬಸ್ತಿನಲ್ಲಿ ಇಡುವುದಿಲ್ಲ? ನನ್ನ ಮಗಳೇನಾದರೂ ಯಾವುದೇ ಪುರುಷನೊಂದಿಗೆ ಮದುವೆಗೆ ಮೊದಲೇ ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ ಅಥವಾ ರಾತ್ರಿ ಹೊತ್ತಿನಲ್ಲಿ ಬಾಯ್ ಫ್ರೆಂಡ್ ಜೊತೆ ಸುತ್ತಾಡುವುದು ತಿಳಿದರೆ ಆಕೆಯನ್ನು ಸುಟ್ಟು ಬಿಸಾಡುತ್ತೇನೆ" ಎಂದು ಶುಕ್ರವಾರ ಹೇಳಿಕೆ ನೀಡಿ ಮಾಧ್ಯಮದ ಮುಂದೆ ಕಣ್ಣೀರುಗರೆದ ನಾಟಕವಾಡಿದ್ದರು.
ಇದು ಇಲ್ಲಿಗೇ ನಿಲ್ಲುವುದಿಲ್ಲ. ಸರಕಾರ ಮತ್ತು ನ್ಯಾಯಾಲಯದ ವಿರುದ್ಧವೂ ಅವರು ಹರಿಹಾಯ್ದಿದ್ದಾರೆ. "ಡಿಸೆಂಬರ್ 16ರ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಕೇಂದ್ರ ಸರಕಾರವೇ ತನಗೆ ತಿಳಿದಂತೆ ತಿರುಚಿರುವುದು ದುರಾದೃಷ್ಟಕರ. ನ್ಯಾಯಾಧೀಶರು ಕೂಡ ರಾಜಕೀಯ ಒತ್ತಡಕ್ಕೆ ಮಣಿದು, ಸಾಕ್ಷಿಯನ್ನು ಸರಿಯಾಗಿ ಪರಿಗಣಿಸದೆ ಎಲ್ಲ ನಾಲ್ವರಿಗೂ ಮರಣದಂಡನೆ ಶಿಕ್ಷೆ ವಿಧಿಸಿದ್ದಾರೆ" ಎಂದು ಮಾಧ್ಯಮದ ಮುಂದೆ ಕಿರುಚಿದ್ದಾರೆ.
ಬಾರ್ ಕೌನ್ಸಿಲ್ ನಿಂದ ಸಿಂಗ್ ಹೇಳಿಕೆಗೆ ವಿರೋಧ
ದೇಶದಲ್ಲಿ ಅತ್ಯಾಚಾರ ನಡೆಯದಿದ್ದರೆ ಮೇಲ್ಮನವಿ ಸಲ್ಲಿಸುವುದಿಲ್ಲ ಎಂದು ಎಪಿ ಸಿಂಗ್ ನೀಡಿರುವ ಹೇಳಿಕೆಗೆ ದೆಹಲಿ ಬಾರ್ ಅಸೋಸಿಯೇಶನ್ ನಿಂದ ಪ್ರತಿರೋಧ ವ್ಯಕ್ತವಾಗಿದೆ. ಇನ್ನು ಟ್ವಿಟ್ಟರಿನಲ್ಲಿ ಎಪಿ ಸಿಂಗ್ ಬಾಯಿಗೆ ಬಂದಂತೆ ನೀಡುತ್ತಿರುವ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಅವರಿಗೆ ಮಾತಿನಲ್ಲೇ ಮಂಗಳಾರತಿ ಮಾಡುತ್ತಿದ್ದಾರೆ. ಮುಂದೆ ಓದಿರಿ.
|
ಎಂಥಾ ನಾಚಿಕೆಗೇಡಿನ ಹೇಳಿಕೆ
'ದಾಮಿನಿ' ಮೇಲೆ ಅತ್ಯಾಚಾರವೆಸಗಿದ ದುರುಳರ ವಕೀಲನಿಂದ ಎಂಥಾ ನಾಚಿಕೆಗೇಡಿನ ಹೇಳಿಕೆ!
|
ಮೊದಲು ಲಾಯರನ್ನು ನೇಣಿಗೆ ಹಾಕಬೇಕು
"ಸಾಮೂಹಿಕ ಅತ್ಯಾಚಾರ ಎಸಗಿ ಮರಣದಂಡನೆ ಶಿಕ್ಷೆಗೊಳಗಾದವರ ಜೊತೆ ವಕೀಲವನ್ನೂ ನೇಣಿಗೇರಿಸಬೇಕು."
|
ಹರಿಹಾಯ್ದ ಹರಿಪ್ರಸಾದ್
ಅತ್ಯಾಚಾರಿಗಳ ಪರ ವಕೀಲ ಎಪಿ ಸಿಂಗ್ ವಿರುದ್ಧ ಹರಿಹಾಯ್ದ ಹರಿಪ್ರಸಾದ್.
|
ಸಿಂಗ್ ಚುನಾವಣೆಗೆ ನಿಲ್ತಿದ್ದಾನಾ?
ಎಪಿ ಸಿಂಗ್ ವಿರುದ್ಧ ಶಿವಕುಮಾರ್ ಕಿಡಿನುಡಿ.
|
ಈ ಯಪ್ಪನಿಗೆ ಮಗಳೇ ಇಲ್ಲದಿದ್ದರೆ ಚೆನ್ನಾಗಿತ್ತು
ಪಾಪ, ಈ ವಯ್ಯನ ಮಾತು ಕೇಳಿ ಮಗಳು ಯಾವ ರೀತಿ ಪರಿತಪಿಸಿರುತ್ತಾಳೋ?
|
ದೆಹಲಿ ಬಾರ್ ಕೌನ್ಸಿಲ್ ಗರಂ
ಎಪಿ ಸಿಂಗ್ ನೀಡಿದ ಹೇಳಿಕೆಗೆ ಪ್ರತಿಯಾಗಿ ದೆಹಲಿ ಬಾರ್ ಕೌನ್ಸಿಲ್ ಆತನಿಗೆ ನೋಟೀಸ್ ನೀಡುವ ಸಾಧ್ಯತೆಯಿದೆ.
|
ತಾಲಿಬಾನ್ ವಕ್ತಾರನಾಗಿ ಎಪಿ ಸಿಂಗ್!
ಯಪ್ಪೋ ಎಂಥಾ ಸ್ಟೇಟ್ಮೆಂಟು!
|
ಸಿಂಗ್ ಮಗಳು ಸಂತೋಷವಾಗಿರಲಿ
ಯಾವುದಾದರೂ ಉತ್ತಮ ವರನನ್ನು ನೋಡಿ ಎಪಿ ಸಿಂಗ್ ಮಗಳು ಮದುವೆಯಾಗಿ ಸುಖವಾಗಿರಲೆಂದು ಹಾರೈಕೆ.
|
ನಿನ್ನಂಥವ್ರು ಇರೋದ್ರಿಂದ್ಲೇ
ಇಂಥವ್ರು ಇರೋದ್ರಿಂದ್ಲೇ ಮಹಿಳೆಯರ ಪಾಲಿಗೆ ಭಾರತ ಸೇಫ್ ಆಗಿಲ್ಲ. ಟ್ರೂ!