ದೆಹಲಿಯಲ್ಲಿ ಅರಾಜಕತೆ : ಕಿರಣ್ ಬೇಡಿ ಸಂದರ್ಶನ
ಬೆಂಗಳೂರು, ಜ. 21 : ಕರ್ತವ್ಯ ನಿರ್ವಹಿಸಲು ವಿಫಲರಾದ ಮೂವರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಬೇಕೆಂದು ಆಗ್ರಹಿಸಿ ಎರಡು ದಿನಗಳಿಂದ ದೆಹಲಿಯ ರಸ್ತೆಯಲ್ಲಿ ಧರಣಿ ನಡೆಸುತ್ತಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಅವರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಪ್ರಧಾನಿ ಮಂತ್ರಿ ಪಟ್ಟಕ್ಕೆ ಬಿಜೆಪಿಯ ನಾಯಕ ನರೇಂದ್ರ ಮೋದಿ ಅತ್ಯಂತ ಸಮರ್ಥ ಅಭ್ಯರ್ಥಿ ಎಂದು ಹೇಳಿಕೆ ನೀಡಿರುವ ಕಿರಣ್ ಬೇಡಿ ಅವರು ಒನ್ಇಂಡಿಯಾ ಜೊತೆ, ಪ್ರಸ್ತುತ ದೆಹಲಿಯಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಮಂಗಳವಾರ ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಹಂಚಿಕೊಂಡರು. ಪ್ರಶ್ನೋತ್ತರಗಳು ಕೆಳಗಿನಂತಿವೆ. [ಮೋದಿಗೆ ನನ್ನ ಮತ : ಕಿರಣ್ ಬೇಡಿ]

ಒನ್ಇಂಡಿಯಾ : ದೆಹಲಿಯಲ್ಲಿ ನಡೆದಿರುವ ಅರಾಜಕತೆಯ ಬಗ್ಗೆ ನಿಮ್ಮ ಅನಿಸಿಕೆಗಳೇನು?
ಕಿರಣ್ ಬೇಡಿ : ಇದು ನಿಜಕ್ಕೂ ದುರಂತ. ಕೇಜ್ರಿವಾಲ್ ಮತ್ತು ಪಕ್ಷದವರು ಅರಾಜಕತೆ ಮತ್ತು ಕಾನೂನು ಅವ್ಯವಸ್ಥೆಯನ್ನು ಇನ್ನಷ್ಟು ಹೆಚ್ಚಿಸುತ್ತಿದ್ದಾರೆ. ಎಎಪಿಯ ಪುಂಡಾಟಿಕೆ ಜಾಸ್ತಿಯಾಗುತ್ತಿದೆ ಮತ್ತು ಪೊಲೀಸ್ ವ್ಯವಸ್ಥೆಯನ್ನು ಅವಮಾನ ಮಾಡುತ್ತಿದೆ. ಅರವಿಂದ್ ಕೇಜ್ರಿವಾಲ್ ಅವರು ಕೆಟ್ಟ ಪರಂಪರೆಯನ್ನು ಹುಟ್ಟುಹಾಕುತ್ತಿದ್ದಾರೆ. [ದೆಹಲಿಯಲ್ಲಿ ಮಂಗಳವಾರದ ವಿದ್ಯಮಾನ]
ಒನ್ಇಂಡಿಯಾ : ದೆಹಲಿ ಜನತೆಗೆ ನಿಮ್ಮ ಸಲಹೆಗಳೇನು?
ಕಿರಣ್ ಬೇಡಿ : ಮತ ಹಾಕುವಾಗ ಜನರು ಅತ್ಯಂತ ಹುಷಾರಾಗಿ ಮತ್ತು ಪ್ರಜ್ಞೆಯಿಂದ ಮತ ಹಾಕಬೇಕು. ಪ್ರೇರೇಪಣೆ ಮತ್ತು ಸುಳ್ಳು ಭರವಸೆಗಳಿಂದ ಉತ್ತೇಜಿತರಾಗಿ ಮತ ಹಾಕಬಾರದು. ಕೇಜ್ರಿವಾಲ್ ಒಬ್ಬ ಉತ್ತಮ ಪ್ರತಿಭಟನಾಕಾರ, ಜನರನ್ನು ಹೇಗೆ ಸಂಘಟಿಸಬೇಕೆಂದು ಚೆನ್ನಾಗಿ ಅರಿತಿದ್ದಾರೆ. ಆದರೆ, ಸರಕಾರವೇ ಬೇರೆ ಎಂಬುದು ಕೇಜ್ರಿವಾಲ್ ತಿಳಿಯಬೇಕು ಮತ್ತು ತಾಳ್ಮೆಯಿಂದ ರಾಜ್ಯಭಾರ ಮಾಡಬೇಕು.
ಒನ್ಇಂಡಿಯಾ : ಜನಪ್ರತಿನಿಧಿ ಹೀಗೆ ವರ್ತಿಸುತ್ತಾರೆಂದು ಜನರಿಗೆ ಹೇಗೆ ತಿಳಿಯಬೇಕು? 15 ವರ್ಷಗಳ ಕಾಂಗ್ರೆಸ್ ದುರಾಡಳಿತದ ಬಗ್ಗೆ ಜನ ಬೇಸತ್ತಿದ್ದರು ಮತ್ತು ಬದಲಾವಣೆ ಬಯಸಿದ್ದ ಜನರು ಕೇಜ್ರಿವಾಲ್ ಅವರನ್ನು ಸ್ವಾಗತಿಸಿದರು.
ಕಿರಣ್ ಬೇಡಿ : ಜನರು ದಾರಿತಪ್ಪಬಾರದು. ಪರ್ಯಾಯ ಪಕ್ಷ ಯಾವುದೆಂದು ಜನತೆ ಅರಿಯಬೇಕು. ಬಿಜೆಪಿಗಿಂದ ಉತ್ತಮವಾದ ಪರ್ಯಾಯ ಪಕ್ಷ ಇನ್ನೊಂದಿಲ್ಲ.
ಒನ್ಇಂಡಿಯಾ : ಇಷ್ಟು ವರ್ಷಗಳಲ್ಲಿ ಜನರನ್ನು ಸೆಳೆಯುವಲ್ಲಿ ಬಿಜೆಪಿ ಸಂಪೂರ್ಣ ವಿಫಲವಾಗಿದೆ. ಅದು ಆಂತರಿಕ ಸಮಸ್ಯೆಗಳನ್ನು ಕೂಡ ಎದುರಿಸುತ್ತಿದೆ.
ಕಿರಣ್ ಬೇಡಿ : ದೆಹಲಿಯಲ್ಲಿ ಬಿಜೆಪಿ ಒಳ್ಳೆಯ ಕೆಲಸವನ್ನೇ ಮಾಡಿದೆ. ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ಡಾ. ಹರ್ಷವರ್ಧನ್ ಅತ್ಯಂತ ಸ್ವಚ್ಛ ಮತ್ತು ಕಳಂಕರಹಿತ ವ್ಯಕ್ತಿ.
ಒನ್ಇಂಡಿಯಾ : ನೀವಾಗಿದ್ದರೆ ದೆಹಲಿಯಲ್ಲಿ ನಡೆಯುತ್ತಿರುವ ಸಂಘರ್ಷದ ವಿರುದ್ಧ ಏನು ಕ್ರಮ ತೆಗೆದುಕೊಳ್ಳುತ್ತಿದ್ದಿರಿ?
ಕಿರಣ್ ಬೇಡಿ : ಕಾನೂನು ಉಲ್ಲಂಘಿಸಿದ್ದಕ್ಕಾಗಿ ಮುಖ್ಯಮಂತ್ರಿಯ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದೆ. ಕೇಜ್ರಿವಾಲ್ ಮಂತ್ರಿಗಳ ವಿರುದ್ಧ ಕೂಡ ಕೇಸ್ ಬುಕ್ ಆಗಬೇಕು. ನನಗನಿಸಿದಂತೆ ದೆಹಲಿ ಪೊಲೀಸರು ಇವರ ಬಗ್ಗೆ ಭಾರೀ ಮೃದು ಧೋರಣೆ ತಾಳಿದ್ದಾರೆ. ಪರಿಸ್ಥಿತಿ ನಿಯಂತ್ರಣಮೀರಿ ಹೋಗುತ್ತಿದೆ. ಇದೆಲ್ಲವನ್ನು ಆರಂಭಿಸುವ ಮುನ್ನ ತನಿಖೆ ವರದಿ ಬರುವವರೆಗೆ ಎಎಪಿ ಕಾಯಬೇಕಿತ್ತು.
ಒನ್ಇಂಡಿಯಾ : ಎಎಪಿ ಜನಪ್ರಿಯತೆ ಕಡಿಮೆಯಾಗುತ್ತದೆಂದು ಕಾಂಗ್ರೆಸ್ ಕಾಯುತ್ತ ಕುಳಿತಿದೆಯೆ?
ಕಿರಣ್ ಬೇಡಿ : ಕಾಂಗ್ರೆಸ್ ಮತ್ತು ಎಎಪಿ ಪಕ್ಷಗಳ ನಡುವೆ ಏನೋ ಪರಸ್ಪರ ಒಪ್ಪಂದವಾಗಿದೆ ಎಂಬುದು ನನ್ನ ಸಂಶಯ. ಇವೆರಡು ಪಕ್ಷಗಳಿಂದಾಗಿ ಅನುಭವಿಸುತ್ತಿರುವವರು ಜನಸಾಮಾನ್ಯರು.
ಒನ್ಇಂಡಿಯಾ : ಎಎಪಿಗೆ ಪ್ರತ್ಯಸ್ತ್ರವಾಗಿ ನಿಮ್ಮ ಮುಂದಾಳತ್ವದಲ್ಲಿ ರಾಜಕೀಯೇತರ ಚಳವಳಿಯೊಂದು ಆರಂಭವಾದರೆ ಹೇಗೆ?
ಕಿರಣ್ ಬೇಡಿ : ಚುನಾವಣೆ ಹತ್ತಿರದಲ್ಲಿಯೇ ಇರುವುದರಿಂದ ಹೊಸ ಚಳವಳಿಯ ಬಗ್ಗೆ ಕೇಂದ್ರೀಕರಿಸುವುದು ತರವಲ್ಲ. ಈಗ ಮೂರು ಸಂಗತಿಗಳ ಕಡೆ ನಮ್ಮ ಗಮನ ಹರಿಸಬೇಕು. ಸ್ವಚ್ಛ ಆಯ್ಕೆ, ಸ್ಥಿರ ಸರಕಾರ ಮತ್ತು ಆಯ್ಕೆಯಾದ ಜನಪ್ರತಿನಿಧಿಗಳ ಬಗ್ಗೆ ನಿಗಾ. ಲೋಕಸಭೆಯಲ್ಲಿ ಕೂಡ ದೆಹಲಿಯಲ್ಲಿ ಆಗದಂತೆ ತಡೆಯಬೇಕು.












Click it and Unblock the Notifications