ಅಮೆರಿಕಾದಿಂದ ಭಾರತಕ್ಕೆ ಸೋನಿಯಾ, ರಾಹುಲ್ ಗಾಂಧಿ ವಾಪಸ್
ನವದೆಹಲಿ, ಸಪ್ಟೆಂಬರ್.22: ಕೇಂದ್ರ ಸರ್ಕಾರವು ಜಾರಿಗೊಳಿಸಲು ಹೊರಟಿರುವ ಕೃಷಿ ಸಂಬಂಧಿತ ಕಾಯ್ದೆಗಳು ಸಂಸತ್ ಉಭಯ ಸದನದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇದರ ನಡುವೆ ಆರೋಗ್ಯ ತಪಾಸಣೆಗಾಗಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾಗೆ ತೆರಳಿದ್ದ ಎಐಸಿಸಿ ಆಂತರಿಕ ಅಧ್ಯಕ್ಷೆ ಸೋನಿಯಾ ಗಾಂಧಿ ಭಾರತಕ್ಕೆ ವಾಪಸ್ಸಾಗಿದ್ದಾರೆ.
ಕಳೆದ ಸಪ್ಟೆಂಬರ್.12ರಂದು ಸೋನಿಯಾ ಗಾಂಧಿಯವರು ಆರೋಗ್ಯ ತಪಾಸಣೆಗಾಗಿ ಅಮೆರಿಕಾಗೆ ಪ್ರಯಾಣ ಬೆಳೆಸಿದ್ದರು. ಸಪ್ಟೆಂಬರ್.14 ರಿಂದ ಆರಂಭಗೊಂಡ ಸಂಸತ್ ಕಲಾಪದಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಕೂಡಾ ಗೈರು ಹಾಜರಾಗಿದ್ದರು.
"ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಆತಂಕದ ನಡುವೆ ಕಾಂಗ್ರೆಸ್ ಆಂತರಿಕ ಅಧ್ಯಕ್ಷೆ ಸೋನಿಯಾ ಗಾಂಧಿ ರೂಟಿನ್ ಚೆಕಪ್ ಮಾಡಿಸಿಕೊಳ್ಳುವುದಕ್ಕಾಗಿ ಅಮೆರಿಕಾಗೆ ತೆರಳುತ್ತಿದ್ದಾರೆ. ಅವರ ಜೊತೆಗೆ ಅವರ ಪುತ್ರ ರಾಹುಲ್ ಗಾಂಧಿ ಕೂಡಾ ಪ್ರಯಾಣ ಬೆಳೆಸಲಿದ್ದಾರೆ. ಇಂಥ ಸಂದರ್ಭದಲ್ಲಿ ನಿಮ್ಮ ಆಶೀರ್ವಾದ ಮತ್ತು ಹಾರೈಕೆಗೆ ಧನ್ಯವಾದಗಳು" ಎಂದು ಕಾಂಗ್ರೆಸ್ ಮುಖ್ಯ ವಕ್ತಾರ ರಂದೀಪ್ ಸಿಂಗ್ ಸರ್ಜೇವಾಲಾ ಟ್ವೀಟ್ ಮಾಡಿದ್ದರು.

ಸಂಸತ್ ವಿಚಾರಗಳ ಚರ್ಚೆ ಬಗ್ಗೆ ಮೊದಲೇ ಸೂಚನೆ:
ತಾವು ವಿದೇಶ ಪ್ರವಾಸಕ್ಕೆ ತೆರಳುವ ಹಿನ್ನೆಲೆ ಸಂಸತ್ ಕಲಾಪದ ಸಂದರ್ಭದಲ್ಲಿ ವಿರೋಧ ಪಕ್ಷಗಳು ಯಾವ ವಿಚಾರಗಳ ಬಗ್ಗೆ ಪ್ರಸ್ತಾಪಿಸಬೇಕು ಎನ್ನುವುದರ ಬಗ್ಗೆ ಮೊದಲೇ ಎಐಸಿಸಿ ಆಂತರಿಕ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಸಲಹೆ ನೀಡಿದ್ದರು. ಕೊವಿಡ್-19 ಸಾಂಕ್ರಾಮಿಕ ಪಿಡುಗು ನಿರ್ವಹಣೆಯಲ್ಲಿನ ವೈಫಲ್ಯ, ಭಾರತ-ಚೀನಾ ನಡುವಿನ ಗಡಿ ಸಂಘರ್ಷ, ದೇಶಾದ್ಯಂತ ಕೊವಿಡ್-19 ಪರಿಸ್ಥಿತಿ, ಲಾಕ್ ಡೌನ್ ನಿಂದಾಗಿ ಸೃಷ್ಟಿಯಾದ ಅವಾಂತರಗಳು, ಜಿಡಿಪಿ ಕುಸಿತ, ರಾಜ್ಯಗಳಿಗೆ ನೀಡಿದ ಜಿಎಸ್ ಟಿ ಪರಿಹಾರ, ನಿರುದ್ಯೋಗ ಸಮಸ್ಯೆ ಹಾಗೂ ಕೃಷಿ ಸಂಬಂಧಿತ ಕಾಯ್ದೆಗಳ ಬಗ್ಗೆ ಚರ್ಚಿಸುವಂತೆ ಮೊದಲೇ ಸೂಚನೆ ನೀಡಲಾಗಿತ್ತು.
ಸಂಸತ್ ಮೇಲ್ಮನೆಯಲ್ಲಿ ಸದ್ದು-ಗದ್ದಲ:
ಕಳೆದ ಸಪ್ಟೆಂಬರ್.20ರಂದು ರಾಜ್ಯಸಭೆಯಲ್ಲಿ ಕೃಷಿ ಸಂಬಂಧಿತ ಕಾಯ್ದೆಗೆ ಅನುಮೋದನೆ ನೀಡಿದ್ದು ತೀವ್ರ ವಿರೋಧಕ್ಕೆ ಕಾರಣವಾಯಿತು. ಕೃಷಿ ಸಂಬಂಧಿತ ಎರಡು ಮಸೂದೆಗಳನ್ನು ಅಂಗೀಕರಿಸಿರುವುದಕ್ಕೆ 12 ಪಕ್ಷಗಳ ಸದಸ್ಯರು ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್ ನಡೆಯ ವಿರುದ್ಧ ಅವಿಶ್ವಾಸ ಮಂಡಿಸಿದ್ದರು. ರಾಜ್ಯಸಭೆಯಲ್ಲಿ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ, ತೆಲಂಗಾಣ ರಾಷ್ಟ್ರೀಯ ಸಮಿತಿ, ಸಿಪಿಐ, ಸಿಪಿಎಂ, ರಾಷ್ಟ್ರೀಯ ಕಾಂಗ್ರೆಸ್ ಪಕ್ಷ, ರಾಷ್ಟ್ರೀಯ ಜನತಾ ದಳ, ಡಿಎಂಕೆ ಮತ್ತು ಆಮ್ ಆದ್ಮಿ ಪಕ್ಷಗಳು ಅವಿಶ್ವಾಸ ಮಂಡಿಸಿದ್ದವು.
ಸದನದ ಬಾವಿಗಿಳಿದು ಸಂಸದರು ಪ್ರತಿಭಟನೆ ನಡೆಸಿದ್ದು, ಕೆಲವರು ಉಪಾಧ್ಯಕ್ಷರ ಮುಂದಿದ್ದ ಪುಸ್ತಕವನ್ನು ಹರಿದು, ಮೈಕ್ರೋಫೋನ್ ಕಳೆದುಕೊಳ್ಳುವುದಕ್ಕೆ ಪ್ರಯತ್ನಿಸಿದರು. ಅನುಚಿತ ವರ್ತನೆ ತೋರಿದ ಹಿನ್ನೆಲೆ ಡೆರೆಕ್ ಒಬ್ರಿಯಾನ್, ಸಯ್ಯದ್ ನಸೀರ್ ಹುಸೇನ್, ಸಂಜಯ್ ಸಿಂಗ್, ಕೆಕೆ ರಾಜೇಶ್, ರಿಪುನ್ ಬೋರಾ, ರಾಜೀವ್ ಸಟವ್, ಡೋಲಾ ಸೇನ್, ಎಲಮಾರಮ್ ಕರೀಮ್ ಅವರನ್ನು ಒಂದು ವಾರದವರೆಗೆ ಅಮಾನತುಗೊಳಿಸಿ ರಾಜ್ಯಸಭಾ ಸ್ಪೀಕರ್ ವೆಂಕಯ್ಯ ನಾಯ್ಡು ಘೋಷಿಸಿದ್ದರು.












Click it and Unblock the Notifications