ಆಪರೇಷನ್ ಕಮಲದ ಆರೋಪದ ನಡುವೆಯೇ ಆಮ್ ಆದ್ಮಿ ಪಕ್ಷದ ಸಭೆಯಲ್ಲಿ 54 ಶಾಸಕರು ಭಾಗಿ
ನವದೆಹಲಿ, ಆಗಸ್ಟ್ 25: ಅರವಿಂದ್ ಕೇಜ್ರಿವಾಲ್ ನಾಯಕತ್ವದ ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕರ ಸಭೆ ನಡೆದಿದ್ದು, ಬಿಜೆಪಿ ಆಪ್ ಶಾಸಕರನ್ನು ಸೆಳೆಯಲು ಮತ್ತು ದೆಹಲಿ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿದೆ ಎಂದು ಆಪ್ ಮುಖಂಡರು ಆರೋಪಿಸಿದ್ದಾರೆ.
ಶಾಸಕರ ಗೈರು ಹಾಜರಿಯ ಆತಂಕದ ನಡುವೆಯೇ ಸಭೆ ಕರೆಯಲಾಗಿದ್ದರು, ಸಭೆಯಲ್ಲಿ ಎಎಪಿಯ 62 ಶಾಸಕರ ಪೈಕಿ 54 ಶಾಸಕರು ಭಾಗವಹಿಸಿದ್ದರು. ಉಳಿದ ಎಂಟು ಮಂದಿ ಶಾಸಕರು ದೂರವಾಣಿ ಮೂಲಕ ಅರವಿಂಗ್ ಕೇಜ್ರಿವಾಲ್ ಅವರೊಂದಿಗೆ ಸಂಪರ್ಕದಲ್ಲಿದ್ದು, ಪಕ್ಷವನ್ನು ತೊರೆಯುವುದಿಲ್ಲ ಎಂದು ಭರವಸೆ ನೀಡಿದ್ದಾರೆ ಎಂದು ಎಎಪಿ ನಾಯಕ ಸೌರಭ್ ಭಾರದ್ವಾಜ್ ಹೇಳಿದ್ದಾರೆ.
ಬಿಜೆಪಿ ಸೇರಿದರೆ ಒಬ್ಬರಿಗೆ 20 ಕೋಟಿ, ಮತ್ತೊಬ್ಬರನ್ನು ಕರೆ ತಂದರೆ 25 ಕೋಟಿ!
ಸಭೆಯಲ್ಲಿ ಭಾಗವಹಿಸಿ ನಂತರ ಆಪ್ ಶಾಸಕರು ಬಿಜೆಪಿಯ ಆಪರೇಷನ್ ಕಮಲ ವಿಫಲವಾಗಲಿ ಎಂದು ಪ್ರಾರ್ಥಿಸಲು ಮಹಾತ್ಮ ಗಾಂಧಿಯವರ ಸ್ಮಾರಕ ರಾಜ್ಘಾಟ್ಗೆ ತೆರಳುತ್ತಾರೆ ಎಂದು ಸೌರಭ್ ಭಾರಧ್ವಾಜ್ ಹೇಳಿದರು.
"ಕೆಲವು ಶಾಸಕರು ಸಭೆಗೆ ಹಾಜರಾಗಿರಲಿಲ್ಲ. ಅರವಿಂದ್ ಕೇಜ್ರಿವಾಲ್ ಫೋನ್ ಸ್ಪೀಕರ್ನಲ್ಲಿ ಅವರೊಂದಿಗೆ ಮಾತನಾಡಿದ್ದಾರೆ. ಸಭೆಗೆ ಗೈರಾದ ಎಲ್ಲಾ ಶಾಸಕರು ಕೇಜ್ರಿವಾಲ್ಗೆ ತಮ್ಮ ಬೆಂಬಲ ನೀಡುವುದಾಗಿ ವಾಗ್ದಾನ ಮಾಡಿದರು" ಎಂದು ಭಾರದ್ವಾಜ್ ಸುದ್ದಿಗಾರರಿಗೆ ತಿಳಿಸಿದರು.
ದೆಹಲಿಯ ಆಪ್ ಸರ್ಕಾರ ಸುರಕ್ಷಿತವಾಗಿದೆ
ದೆಹಲಿ ಸರ್ಕಾರ ಸುರಕ್ಷಿತವಾಗಿದೆ, ಯಾವುದೇ ಅಪಾಯವಿಲ್ಲ. ಅರವಿಂದ್ ಕೇಜ್ರಿವಾಲ್ ಆಪರೇಷನ್ ಕಮಲವನ್ನು ಸೋಲಿಸಿದ್ದಾರೆ. ಅದು ವಿಫಲವಾಗಿದೆ, ಎಂದು ಸೌರಭ್ ಭಾರದ್ವಾಜ್ ಹೇಳಿದ್ದಾರೆ.
ಸಭೆಗೂ ಮುನ್ನ ಆಮ್ ಆದ್ಮಿ ಪಕ್ಷದ ವಲಯದಲ್ಲಿ ಆತಂಕ ಮನೆ ಮಾಡಿತ್ತು. 40 ಶಾಸಕರನ್ನು ಬಿಜೆಪಿ ಸೆಳೆಯಲು ಯತ್ನಿಸಿದೆ ಎಂದು ಹಿರಿಯ ಶಾಸಕ ದಿಲೀಪ್ ಪಾಂಡೆ ಹೇಳಿದ್ದರು. ಕೆಲವು ಶಾಸಕರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದ್ದರು.
Breaking: ಸರಕಾರ ಉರುಳಿಸೋ ಯತ್ನ ಆತಂಕ: ಶಾಸಕರ ಜೊತೆ ಕೇಜ್ರಿವಾಲ್ ಸಭೆ
ಆಪರೇಷನ್ ಕಮಲಕ್ಕೆ ಸಂಚು ರೂಪಿಸಿದೆ ಎಂದು ಆರೋಪ
ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಕರ್ನಾಟಕದ ಮಾದರಿಯನ್ನು ಅನುಸರಿಸಿ ಬಿಜೆಪಿ ದೆಹಲಿಯಲ್ಲಿ ಆಪ್ ಸರ್ಕಾರವನ್ನು ಬೀಳಿಸಲು ಆಪರೇಷನ್ ಕಮಲದ ಸಂಚು ರೂಪಿಸುತ್ತಿದೆ ಎಂದು ಎಎಪಿ ಆರೋಪಿಸಿದೆ.
70 ಸದಸ್ಯ ಬಲದ ದೆಹಲಿ ವಿಧಾನಸಭೆಯಲ್ಲಿ ಎಎಪಿ 62 ಶಾಸಕರನ್ನು ಹೊಂದಿದೆ. ಬಿಜೆಪಿ ಎಂಟು ಶಾಸಕರನ್ನು ಹೊಂದಿದ್ದು ಬಹುಮತಕ್ಕೆ ಇನ್ನೂ 28 ಶಾಸಕರ ಅಗತ್ಯವಿದೆ.
20-25 ಕೋಟಿ ರುಪಾಯಿ ಆಮಿಷ ಒಡ್ಡಿರುವ ಆರೋಪ
ಅರವಿಂದ್ ಕೇಜ್ರಿವಾಲ್ ಸರ್ಕಾರವನ್ನು ಕೆಡವಲು ಬಿಜೆಪಿ ಶಾಸಕರಿಗೆ 20 ಕೋಟಿ ರುಪಾಯಿ ಮತ್ತು ಬೇರೆ ಶಾಸಕರನ್ನು ಕರೆ ತಂದರೆ 25 ಕೋಟಿ ರುಪಾಯಿ ನೀಡುವ ಆಮಿಷ ಒಡ್ಡಿದೆ ಎಂದು ಬುಧವಾರ ಆಪ್ ಮುಖಂಡರು ಆರೋಪಿಸಿದ್ದರು.
ಎಎಪಿ ಶಾಸಕರಿಗೆ 20-20 ಕೋಟಿ ರುಪಾಯಿ ಆಮಿಷವೊಡ್ಡುವ ಮೂಲಕ ಕೇಜ್ರಿವಾಲ್ ಸರ್ಕಾರವನ್ನು ಉರುಳಿಸಲು ಬಿಜೆಪಿ ಮುಂದಾಗಿದೆ, ಎಂದು ಭಾರದ್ವಾಜ್ ಸುದ್ದಿಗಾರರಿಗೆ ತಿಳಿಸಿದ್ದರು. ಈ ಬೆನ್ನಲ್ಲೇ ಆಪ್ ಭಯವನ್ನು ದೂರವಾಗಿಸಿಕೊಳ್ಳಲು ಗುರುವಾರ ಶಾಸಕರ ಸಭೆಯನ್ನು ಕರೆದಿತ್ತು. ಎಂಟು ಶಾಸಕರನ್ನು ಹೊರತುಪಡಿಸಿ ಉಳಿದ ಎಲ್ಲಾ ಶಾಸಕರು ಸಭೆಗೆ ಹಾಜರಾಗಿದ್ದು, ಸದ್ಯ ಆಪ್ ಆತಂಕವನ್ನು ದೂರಾಗಿಸಿದೆ.
ಎಎಪಿ ಆರೋಪ ನಿರಾಕರಿಸಿದ ಬಿಜೆಪಿ
ಬಿಜೆಪಿ ಸೇರಿದರೆ ತನ್ನ ವಿರುದ್ಧದ ಆರೋಪಗಳಿಂದ ಮುಕ್ತಗೊಳಿಸಿ, ದೆಹಲಿ ಮುಖ್ಯಮಂತ್ರಿಯಾಗಿ ಮಾಡುವುದಾಗಿ ಬಿಜೆಪಿ ಆಮಿಷವೊಡ್ಡಿದೆ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಆರೋಪಿಸಿದ್ದರು.
ಆದರೆ ಆಪ್ ಆರೋಪಗಳನ್ನು ನಿರಾಕರಿಸಿರುವ ಬಿಜೆಪಿ, ಎಎಪಿ ತನ್ನ ಸರ್ಕಾರದ ಭ್ರಷ್ಟಾಚಾರದಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಹೊಸ ನಾಟಕ ಶುರು ಮಾಡಿದೆ ಎಂದು ಕಿಡಿಕಾರಿದೆ. ಯಾವುದೇ ಆಪರೇಷನ್ ಕಮಲ ನಡೆಸಲು ಯತ್ನಿಸಿಲ್ಲ. ಯಾವುದೇ ಶಾಸಕರನ್ನು ಸಂಪರ್ಕಿಸಲು ಪ್ರಯತ್ನ ಮಾಡಿಲ್ಲ ಎಂದು ಬಿಜೆಪಿ ಸ್ಪಷ್ಟಪಡಿಸಿದೆ.
ಆಪ್ ದೆಹಲಿ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿರುವ ಮನೀಶ್ ಸಿಸೋಡಿಯಾ ವಿರುದ್ಧ ಮದ್ಯ ನೀತಿಯಲ್ಲಿನ ಭ್ರಷ್ಟಾಚಾರದ ಆರೋಪ ಎದುರಿಸಿದ ನಂತರ, ಬಿಜೆಪಿ ಮತ್ತು ಆಪ್ ಪರಸ್ಪರ ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿವೆ.