ಮನೆಗಳಲ್ಲೂ ಮಾಸ್ಕ್ ಕಡ್ಡಾಯ; ಅತಿಥಿಗಳ ರೂಪದಲ್ಲಿ ಬರುತ್ತಾ ಕೊರೊನಾ!?
ನವದೆಹಲಿ, ಏಪ್ರಿಲ್ 26: ಭಾರತದಲ್ಲಿ ಸೃಷ್ಟಿಯಾಗಿರುವ ಕೊರೊನಾವೈರಸ್ ಸೋಂಕಿನ ಭೀಕರತೆಯನ್ನು ಕಂಡು ಜನರು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗಬಾರದು. ಮನೆಗಳಲ್ಲಿ ಇದ್ದಾಗಲೂ ಸಹ ಮಾಸ್ಕ್ ಧರಿಸಬೇಕಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮನವಿ ಮಾಡಿಕೊಂಡಿದೆ.
ಸೋಮವಾರ ಸುದ್ದಿಗೋಷ್ಛಿಯಲ್ಲಿ ಮಾತನಾಡಿದ ಸಚಿವಾಲಯದ ವಕ್ತಾರರು, ಮಹಾರಾಷ್ಟ್ರ, ಉತ್ತರ ಪ್ರದೇಶ, ಕರ್ನಾಟಕ, ಕೇರಳ, ರಾಜಸ್ಥಾನ, ಛತ್ತೀಸ್ ಗಢ, ಗುಜರಾತ್ ಮತ್ತು ತಮಿಳುನಾಡು ರಾಜ್ಯಗಳಲ್ಲಿ 1 ಲಕ್ಷಕ್ಕೂ ಅಧಿಕ ಸಕ್ರಿಯ ಪ್ರಕರಣಗಳಿವೆ. ಕೊವಿಡ್-19 ಸೋಂಕಿನ ಬಗ್ಗೆ ಆತಂಕಗೊಂಡಷ್ಟು ಆರೋಗ್ಯ ಸ್ಥಿತಿ ಹಾಳಾಗುತ್ತದೆ ಎಂದು ಸಚಿವಾಲಯ ಹೇಳಿದೆ.
Explained: ಕುಟುಂಬದಲ್ಲಿ ಒಬ್ಬರಿಗೆ ಕೊರೊನಾ ಅಂಟಿದರೆ ಉಳಿದವರ ಕಥೆ!?
ದೇಶದಲ್ಲಿ ಕೊರೊನಾವೈರಸ್ ಸೋಂಕಿನ ಬಗ್ಗೆ ಜನರು ಆತಂಕದಲ್ಲೇ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಇದರಿಂದ ಆಸ್ಪತ್ರೆಯಲ್ಲಿ ಹಾಸಿಗೆಗಳು ಭರ್ತಿಯಾಗುತ್ತಿದ್ದು, ಆಕ್ಸಿಜನ್ ಅನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬೇಕಾಗಿದೆ. ವೈದ್ಯರ ಸಲಹೆ ಮೇರೆಗೆ ಮಾತ್ರ ಆಸ್ಪತ್ರೆಗಳಿಗೆ ದಾಖಲಾಗುವಂತೆ ಸಚಿವಾಲಯ ಮನವಿ ಮಾಡಿದೆ.
ಆಕ್ಸಿಜನ್ ಕೊರತೆ ನೀಗಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ
ಭಾರತದಲ್ಲಿ ಉತ್ಪಾದಿಸುತ್ತಿರುವ ವೈದ್ಯಕೀಯ ಆಮ್ಲಜನಕ ರೋಗಿಗಳ ಚಿಕಿತ್ಸೆಗೆ ಸಾಕಾಗುತ್ತದೆ. ಆದರೆ ಸರಿಯಾದ ಸಮಯದಲ್ಲಿ ಆಮ್ಲಜನಕವನ್ನು ಸರಬರಾಜು ಮಾಡುವುದು ಸವಾಲಾಗಿದೆ. ಆದಷ್ಟು ಬೇಗ ಈ ಸರಬರಾಜು ಸಮಸ್ಯೆಯನ್ನು ನೀಗಿಸುವುದಕ್ಕೆ ಪ್ರಯತ್ನಿಸಲಾಗುವುದು. ವೈದ್ಯಕೀಯ ಆಮ್ಲಜನಕವನ್ನು ಸರಬರಾಜು ಮಾಡುವ ಟ್ಯಾಂಕರ್ ವಾಹನಗಳಿಗೆ ಜಿಪಿಎಸ್ ಅಳವಡಿಸುವ ಮೂಲಕ ಅಗತ್ಯ ಸಮಯದಲ್ಲಿ ಆಕ್ಸಿಜನ್ ಪೂರೈಕೆ ಮಾಡುವ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸರ್ಕಾರ ತಿಳಿಸಿದೆ.
ಒಬ್ಬರಿಂದ 406 ಮಂದಿಗೆ ಕೊರೊನಾ ಸೋಂಕು
ಸಾಮಾಜಿಕ ಅಂತರ ಕಾಯ್ದುಕೊಳ್ಳದ ಒಬ್ಬ ವ್ಯಕ್ತಿಯಿಂದ ಕೇವಲ 30 ದಿನಗಳಲ್ಲಿ 406 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿರುವ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಒಂದು ವೇಳೆ ಈ ಸಂಖ್ಯೆಯನ್ನು ಶೇ.50ರಷ್ಟು ತಗ್ಗಿಸಿದಾಗ ಸಾಮಾಜಿಕ ಅಂತರವಿಲ್ಲದ ಒಬ್ಬ ವ್ಯಕ್ತಿಯಿಂದ ಅದೇ 30 ದಿನಗಳಲ್ಲಿ 15 ಮಂದಿಗೆ ಸೋಂಕು ಅಂಟಿಕೊಂಡಿದೆ. ಈ ಪ್ರಮಾಣವನ್ನು ಒಟ್ಟು ಶೇ.75ರಷ್ಟು ಕಡಿಮೆ ಮಾಡಿದಾಗ 30 ದಿನಗಳಲ್ಲಿ 2.5 ಮಂದಿಗೆ ಮಾತ್ರ ಸೋಂಕು ಹರಡಿರುವುದು ಗೊತ್ತಾಗಿದೆ.
ಕೊರೊನಾ ತರುತ್ತಾರಾ ಮನೆಗೆ ಬರುವ ಅತಿಥಿಗಳು?
ಭಾರತದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಜನರಲ್ಲಿ ಇಂಥದೊಂದು ಅಪಾಯಕಾರಿ ಪರಿಸ್ಥಿತಿಯನ್ನು ಸೃಷ್ಟಿಸಿದೆ. ಮನೆಗಳಲ್ಲಿ ಇರುವಾಗಲೂ ಕೂಡಾ ಜನರು ಮಾಸ್ಕ್ ಹಾಕಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಒಂದು ವೇಳೆ ಮನೆಗೆ ಅತಿಥಿಗಳನ್ನು ಆಹ್ವಾನಿಸುವ ಮೊದಲು ಎಚ್ಚರಿಕೆ ವಹಿಸಬೇಕಾಗಿದೆ. ನೀವು ಆಹ್ವಾನಿಸುವ ಅತಿಥಿಗಳು ತಮ್ಮ ಜೊತೆಗೆ ಕೊವಿಡ್-19 ಸೋಂಕನ್ನು ತೆಗೆದುಕೊಂಡು ಬರುವ ಅಪಾಯ ಹೆಚ್ಚಾಗಿರುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
ದೇಶದಲ್ಲಿ ಭೀತಿ ಹೆಚ್ಚಿಸಿದ ಕೊವಿಡ್-19 ಸೋಂಕು
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 3,52,991 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಒಂದೇ ದಿನ 2812 ಮಂದಿ ಪ್ರಾಣ ಬಿಟ್ಟಿದ್ದು, 2,19,272 ಮಂದಿ ಕೊರೊನಾವೈರಸ್ ಸೋಂಕಿತರು ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ಒಟ್ಟು 1,73,13,163 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಈವರೆಗೆ 1,43,04,382 ಸೋಂಕಿತರು ಗುಣಮುಖರಾಗಿದ್ದು, ಒಟ್ಟು 1,95,123 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಉಳಿದಂತೆ 28,13,658 ಕೊವಿಡ್-19 ಸಕ್ರಿಯ ಪ್ರಕರಣಗಳ ದಾಖಲಾಗಿವೆ.