370 ವಿಧಿ ರದ್ದಾಯ್ತು, ಈಗ ಮತ್ತೊಂದು ಅಚ್ಚರಿಯ ಸುದ್ದಿ ಕೇಳಲಿದೆ ಕಾಶ್ಮೀರ!
ಶ್ರೀನಗರ, ಆಗಸ್ಟ್ 21: ಪ್ರೇಮ ಕಾಶ್ಮೀರ ಎಂಬ ಟ್ಯಾಗ್ ಲೈನ್ ಅಂಟಿಸಿಕೊಂಡ ರೊಮ್ಯಾಂಟಿಕ್ ಪ್ರವಾಸೀ ತಾಣ ಕಾಶ್ಮೀರ ಇನ್ನು ಕೆಲವೇ ದಿನಗಳಲ್ಲಿ ತೀರ್ಥಕ್ಷೇತ್ರಗಳಲ್ಲೊಂದಾಗಲಿದೆಯಾ?
ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸುವ ಮೂಲಕ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನವನ್ನು ಹಿಂಪಡೆದು, ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಅನ್ನು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿ ಕೇಂದ್ರ ಸರ್ಕಾರ ಮಹತ್ವದ ಆದೇಶ ಹೊರಡಿಸಿತ್ತು. ಈ ಅನಿರೀಕ್ಷಿತ ಬೆಳವಣಿಗೆಯ ನಂತರ ಕಾಶ್ಮೀರಿಗರು ಮತ್ತೊಂದು ಅಚ್ಚರಿಯ ಸುದ್ದಿಯನ್ನು ಕೇಳಬಹುದು ಎಂಬ ಊಹೆಗೆ ಪುಷ್ಠಿ ನೀಡುವಂಥ ಬೆಳವಣಿಗೆಗಳು ನಡೆಯುತ್ತಿವೆ.
ಜಮ್ಮು ಮತ್ತು ಕಾಶ್ಮೀರದ ಚುನಾವಣಾ ಉಸ್ತುವಾರಿ ಅವಿನಾಶ್ ಖನ್ನಾ ಅವರು ರಾಜ್ಯಪಾಲ ಸತ್ಯಪಾಲ್ ಮಲೀಕ್ ಮತ್ತು ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಅವರಿಗೆ ಪತ್ರವೊಂದನ್ನು ಬರೆದಿದ್ದು, ಈ ಪತ್ರದಲ್ಲಿ 'ಜಮ್ಮು ಮತ್ತು ಕಾಶ್ಮೀರವನ್ನು ಧಾರ್ಮಿಕ ತಾಣವನ್ನಾಗಿ ಮಾಡಬೇಕು' ಎಂದು ಮನವಿ ಮಾಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಧ್ವಂಸಗೊಂಡ, ಅಥವಾ ಭಗ್ನಗೊಂಡ ದೇವಾಲಯಗಳ ಪುನಶ್ಚೇತನ ಕಾರ್ಯವನ್ನು ಆರಂಭಿಸುವ ಬಗ್ಗೆ ಈಗಾಗಲೇ ಚರ್ಚೆ ನಡೆದಿದ್ದು, ಅವುಗಳ ಪಟ್ಟಿಯನ್ನು ತಯಾರಿಸಿ, ನಂತರ ಜಮ್ಮು ಮತ್ತು ಕಾಶ್ಮೀರವನ್ನು ಧಾರ್ಮಿಕ ತಾಣವನ್ನಾಗಿ ಮಾಡಲು ಯೋಚನೆ ನಡೆಸಲಾಗುತ್ತಿದೆ ಎಂದು 'ದಿ ಪ್ರಿಂಟ್' ವರದಿ ಮಾಡಿದೆ.
"ಕಣಿವೆಯಲ್ಲಿರುವ ಧಾರ್ಮಿಕ ಮತ್ತು ಐತಿಹಾಸಿಕ ಸ್ಥಳಗಳ ಪುನಶ್ಚೇತನದ ಬಗ್ಗೆ ನಾನು ವಿವಿಧ ಧಾರ್ಮಿಕ ಮುಖಂಡರಲ್ಲಿ ಮಾತುಕತೆ ನಡೆಸಿದ್ದು, ಇಲ್ಲಿನ ಸ್ಥಳಗಳಿಗೆ ಖುದ್ದಾಗಿ ತೆರಳಿ ಅಧ್ಯಯನ ನಡೆಸಿದ್ದೇನೆ" ಎಂದು ಖನ್ನಾ ತಿಳಿಸಿದ್ದಾರೆ.
ಇಲ್ಲಿ ಧರ್ಮಶಾಲೆಗಳನ್ನು ಕಟ್ಟುವುದು ಮತ್ತು ದೇವಾಲಯಗಳ ಪುನಶ್ಚೇತನ, ಪ್ರವಾಸಿಗರಿಗೆ ಸುಲಭವಾಗಿ ಪ್ರಯಾಣಿಸಲು ಅನುಕೂಲವಾಗುವಂಥ ಸಾರಿಗೆ ವ್ಯವಸ್ಥೆ ಮುಂತಾದವುಗಳ ನಿರ್ಮಾಣಕ್ಕೆ ಖನ್ನಾ ಕೇಂದ್ರ ಸರ್ಕಾರದ ಸಹಾಯ ಕೇಳಿದ್ದಾರೆ.












Click it and Unblock the Notifications