ಭಾರತದಲ್ಲಿ 37 ವರ್ಷಗಳ ಬಳಿಕ ಒಂದೇ ದಿನ ನಾಲ್ವರಿಗೆ ಗಲ್ಲುಶಿಕ್ಷೆ
ನವದೆಹಲಿ, ಜನವರಿ.10: 2012ರ ದೆಹಲಿ ನಿರ್ಭಯಾ ಅತ್ಯಾಚಾರ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಸುಪ್ರೀಂಕೋರ್ಟ್ ಗಲ್ಲುಶಿಕ್ಷೆ ವಿಧಿಸಿದೆ. ಒಂದೇ ದಿನ ನಾಲ್ವರೂ ಅಪರಾಧಿಗಳನ್ನು ಕುಣಿಕೆಗೆ ಹಾಕುವಂತೆ ಸರ್ವೋಚ್ಛ ನ್ಯಾಯಾಲಯವು ಆದೇಶ ಹೊರಡಿಸಿದೆ.
2012ರಲ್ಲಿ ನವದೆಹಲಿಯಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಆರು ಮಂದಿ ಕಾಮುಕರು ಅತ್ಯಾಚಾರ ನಡೆಸಿದ್ದರು. ಈ ಪ್ರಕರಣದ ಸುಧೀರ್ಘ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಜನವರಿ.22ರ ಬೆಳಗ್ಗೆ 7 ಗಂಟೆಗೆ ನಾಲ್ವರೂ ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸುವಂತೆ ಆದೇಶಿಸಿದೆ.
ಇನ್ನು, ಭಾರತದಲ್ಲಿ ಒಂದೇ ದಿನ ನಾಲ್ವರು ಅಪರಾಧಿಗಳನ್ನು ಗಲ್ಲುಶಿಕ್ಷೆಗೆ ಗುರಿಪಡಿಸಿರುವುದು ಇದೇ ಮೊದಲೇನಲ್ಲ. ದೇಶದ ಇತಿಹಾಸದಲ್ಲಿ ಹಲವು ಬಾರಿ ಇಂಥ ಪ್ರಕರಣಗಳು ನಡೆದಿವೆ. ಯಾವ ಯಾವ ಪ್ರಕರಣಗಳಲ್ಲಿ ಕೋರ್ಟ್ ಈ ರೀತಿಯ ತೀರ್ಪನ್ನು ನೀಡಿತ್ತು ಎಂಬುದರ ಕುರಿತು ಸಂಪೂರ್ಣ ಚಿತ್ರಣ ಇಲ್ಲಿದೆ.

37 ವರ್ಷಗಳ ಹಿಂದೆ ನಾಲ್ವರು ಸರಣಿ ಹಂತಕರಿಗೆ ಗಲ್ಲು
ಪುಣೆಯಲ್ಲಿ ನಡೆದ ಜೋಶಿ-ಅಭ್ಯಂಕರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದ ನಾಲ್ವರು ಅಪರಾಧಿಗಳನ್ನು ಒಂದೇ ದಿನ ಗಲ್ಲುಶಿಕ್ಷೆಗೆ ಗುರಿಪಡಿಸಲಾಗಿತ್ತು. ಅಕ್ಟೋಬರ್.25, 1983ರಲ್ಲಿ ರಾಜೇಂದ್ರ ಜಕ್ಕಲ್, ದಿಲೀಪ್ ಸುತಾರ್, ಶಾಂತಾರಾಮ್ ಕನ್ಹೋಜಿ ಜಗ್ತಾಪ್ ಹಾಗೂ ಮುನಾವರ್ ಹರುನ್ ಶಹಾ ಎಂಬ ಅಪರಾಧಿಗಳನ್ನು ಪುಣೆಯ ಎರವಾಡ ಕೇಂದ್ರ ಕಾರಾಗೃಹದಲ್ಲಿ ಗಲ್ಲಿಗೇರಿಸಲಾಗಿತ್ತು.

ಸಾಲು ಸಾಲು ಕೊಲೆ ಮಾಡಿದ್ದ ಸರಣಿ ಹಂತಕರು
ಜೋಶಿ-ಅಭ್ಯಂಕರ್ ಪ್ರಕರಣ ಪುಣೆಯಲ್ಲಿ ನಡೆದ 10ನೇ ಕೊಲೆಯಾಗಿತ್ತು. ಇದಕ್ಕೂ ಮೊದಲು ನಾಲ್ವರು ಅಪರಾಧಿಗಳು ಪುಣೆಯಲ್ಲಿ ಸಾಲು ಸಾಲು ಕೊಲೆಗಳನ್ನು ಮಾಡಿದ್ದರು. ಜನವರಿ.1976 ರಿಂದ 1977ರ ಮಾರ್ಚ್ ನಡುವೆ ಬರೋಬ್ಬರಿ 10 ಕೊಲೆಗಳನ್ನು ಮಾಡಿದ್ದರು. ಐವರ ಪೈಕಿ ಸುಹಾಸ್ ಚಂದಕ್ ಎಂಬಾತ ತನ್ನ ಆರೋಪವನ್ನು ಕೋರ್ಟ್ ಎದುರು ಒಪ್ಪಿಕೊಂಡು ಶರಣಾಗಿದ್ದನು.

ಮೊದಲ ಕೊಲೆಯಿಂದ ಹಂತಕರಿಗೆ ಹೆಚ್ಚಿದ ರುಚಿ!
ಇನ್ನು, ಹಂತಕರು ಪುಣೆಯ ತಿಲಕ್ ರಸ್ತೆಯ ಅಭಿನಯ ಕಲಾ ಮಹಾವಿದ್ಯಾಲಯದ ಕಲಾ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾಗಿದ್ದರು ಎನ್ನಲಾಗಿದೆ. ಮದ್ಯಪಾನ ಹಾಗೂ ಐಶಾರಾಮಿ ಜೀವಕ್ಕಾಗಿ ದ್ವಿಚಕ್ರ ವಾಹನ ಕಳ್ಳತನ, ದರೋಡೆ ಮಾಡುತ್ತಿದ್ದ ಅಪರಾಧಿಗಳು ಜನವರಿ.16, 1976ರಲ್ಲಿ ಮೊದಲು ಕೊಲೆ ಮಾಡಿದ್ದರು.
ಕಾಲೇಜ್ ಹಿಂಭಾಗದಲ್ಲೇ ರೆಸ್ಟೋರೆಂಟ್ ನಡೆಸುತ್ತಿದ್ದ ವ್ಯಕ್ತಿಯ ಮೇಲೆ ಹಂತಕರ ಕಣ್ಣು ಬಿತ್ತು. ಹೀಗಾಗಿ ತಮ್ಮ ಜೊತೆಗೆ ಓದುತ್ತಿದ್ದ ರೆಸ್ಟೋರೆಂಟ್ ಮಾಲೀಕನ ಮಗ ಪ್ರಸಾದ್ ನಾಯ್ಕ್ ಎಂಬಾತನನ್ನ ಅಪಹರಿಸಿದ ಹಂತಕರು ಜಕ್ಕಲ್ ಟಿನ್ ಶೆಡ್ ನಲ್ಲಿ ಇರಿಸಿದ್ದರು. ತಾವು ಹೇಳಿದಂತೆ ತಂದೆಗೆ ಹಣಕ್ಕಾಗಿ ಪತ್ರ ಬರೆಯಲು ಸೂಚಿಸಿದ್ದರು. ನಂತರ ಆತನನ್ನು ಹತ್ಯೆ ಮಾಡಿ ಪೇಶ್ವೆ ಪಾರ್ಕ್ ನ ಕೆರೆಯಲ್ಲಿ ಬಿಸಾಕಿದ್ದರು.

ಕೆಲ ತಿಂಗಳಿನಲ್ಲೇ ಹಣ, ಒಡವೆಗಾಗಿ ಸಾಲು ಸಾಲು ಕೊಲೆ
ಅಕ್ಟೋಬರ್.31, 1976 ರಿಂದ ಮಾರ್ಚ್.23, 1977ರವರೆಗೂ ನಾಲ್ವರು ಹಂತಕರು ಸಾಲು ಸಾಲು ಕೊಲೆಗಳನ್ನು ಮಾಡಿದ್ದರು. ರಾತ್ರಿ ವೇಳೆ ಮನೆಗೆ ನುಗ್ಗುತ್ತಿದ್ದ ಹಂತಕರು ಮನೆಯಲ್ಲಿದ್ದವರ ಮುಖಕ್ಕೆ ಬಟ್ಟೆ ಸುತ್ತಿ ಪ್ರಜ್ಞೆ ತಪ್ಪಿಸುತ್ತಿದ್ದರು. ನಂತರ ಕೊಲೆ ಮಾಡಿ ಮನೆಯಲ್ಲಿದ್ದ ಹಣ, ಚಿನ್ನಾಭರಣವನ್ನೆಲ್ಲ ದೋಚುತ್ತಿದ್ದರು.

ನಗರದ ಮಂದಿಗೆ 6 ಗಂಟೆಯಾದರೆ ಎದೆಯಲ್ಲಿ ಢವಢವ
ಪುಣೆಯಲ್ಲಿ ನಡೆಯುತ್ತಿದ್ದ ಸಾಲು ಸಾಲು ಕೊಲೆಗಳಿಂದ ನಗರ ಜನರು ಬೆಚ್ಚಿ ಬಿದ್ದಿದ್ದರು. ಸಂಜೆ 6 ಗಂಟೆಯಾದರೆ ಸಾಕು, ಜನರು ಮನೆಯಿಂದ ಹೊರ ಬರುವುದಕ್ಕೆ ಗಢಗಢ ನಡಗುವಂತಾ ಪರಿಸ್ಥಿತಿ ನಿರ್ಮಾಣವಾಗಿತ್ತು. ನಗರದ ಜನರಲ್ಲಿ ಸರಣಿ ಹಂತಕರು ಅಷ್ಟರ ಮಟ್ಟಿಗೆ ಭಯವನ್ನು ಹುಟ್ಟು ಹಾಕಿದ್ದರು.












Click it and Unblock the Notifications