ಆರೇ ಕಾಲೋನಿ: ಕಾರ್ ಶೆಡ್ ಗೆ ಓಕೆ, ಮರ ಕಡಿವಂತಿಲ್ಲ ಎಂದ ಸುಪ್ರೀಂ
ನವದೆಹಲಿ, ಅಕ್ಟೋಬರ್ 21: ಮುಂಬೈಯ ಆರೆ ಕಾಲೋನಿಯಲ್ಲಿ ಮೆಟ್ರೋ ಕಾರ್ ಶೆಡ್ ನಿರ್ಮಾಣವನ್ನು ಮುಂದುವರಿಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ತನ್ನ ಮುಂದಿನ ಆದೇಶದವರೆಗೂ ಈ ಸ್ಥಳದಲ್ಲಿ ಯಾವುದೇ ಮರ ಕಡಿಯುವಂತಿಲ್ಲ ಎಂದಿದೆ.
ನವೆಂಬರ್ 15 ರಂದು ಈ ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದ್ದು, ಅಲ್ಲಿಯವರೆಗೂ ಈ ಪ್ರದೇಶದಲ್ಲಿ ಯಾವುದೇ ಮರ ಕಡಿಯುವಂತಿಲ್ಲ ಎಂದು ಕೋರ್ಟ್ ಹೇಳಿದೆ.
ಮುಂಬೈ ಮೆಟ್ರೋ ನಿಲ್ದಾಣಕ್ಕೆ ಕಾರ್ ಶೆಡ್ ನಿರ್ಮಿಸುವ ಸಲುವಾಗಿ ಅರೆ ಕಾಲೋನಿಯಲ್ಲಿರುವ 2500 ಮರಗಳನ್ನು ಕಡಿಯಲು ಎಂಎಂಆರ್ ಸಿ ಮುಂದಾಗಿತ್ತು. ಅಕ್ಟೋಬರ್ 4 ರಂದು ಮರಕಡಿವ ಪ್ರಕ್ರಿಯೆ ಆರಂಭಿಸಿದ್ದ ಎಂಎಂಆರ್ ಸಿ ಕ್ರಮವನ್ನು ವಿರೋಧಿಸಿ ಅಂದೇ ಮಧ್ಯ ರಾತ್ರಿ ಈ ಕಾಲೊನಿಯ ಜನರು ಪ್ರತಿಭಟನೆ ಆರಂಭಿಸಿದ್ದರು.
Recommended Video

ಮರ ಕಟಾವನ್ನು ವಿರೋಧಿಸಿ ಕೆಲವು ಪರಿಸರವಾದಿಗಳು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಆದರೆ ಈ ಅರ್ಜಿಯನ್ನು ಮಹಾರಾಷ್ಟ್ರ ಹೈಕೋರ್ಟ್ ಅಕ್ಟೋಬರ್ 4 ರಂದು ತಿರಸ್ಕರಿಸಿತು. ಈ ಮೂಲಕ ಮರಕಡಿಯಲು ಅನುಮತಿ ನೀಡಿತು.
ನಂತರ ಮರ ಕಟಾವಿನ ವಿರುದ್ಧ ವಿವಿಧ ಜನ ನಾಯಕರು, ಸೆಲೆಬ್ರಿಟಿಗಳು ಒಂದಾದ ಕಾರಣ ಕಟಾವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ಮರ ಕಟಾವಿನ ವಿರುದ್ಧ ಸುಪ್ರೀಂ ಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು.
ಈ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮೆಟ್ರೋ ಕಾರ್ ಶೆಡ್ ನಿರ್ಮಾಣವನ್ನು ಮುಂದುರಿಸಬಹುದು, ಆದರೆ ಮರ ಕಡಿಯುವಂತಿಲ್ಲ ಎಂದಿದೆ.












Click it and Unblock the Notifications