ರೈತರ ಟ್ರ್ಯಾಕ್ಟರ್ ಜಾಥಾ ವೇಳೆ ಹಿಂಸಾಚಾರ; ಕೇಂದ್ರದ ನಡೆ ಖಂಡಿಸಿದ ಎಎಪಿ
ನವದೆಹಲಿ, ಜನವರಿ 26: ರಾಜಧಾನಿ ದೆಹಲಿಯಲ್ಲಿ ಗಣರಾಜ್ಯೋತ್ಸವ ಪರೇಡ್ ನಂತರ ನಡೆಯಬೇಕಿದ್ದ ರೈತರ ಟ್ರ್ಯಾಕ್ಟರ್ ಜಾಥಾ ಹಿಂಸಾಚಾರಕ್ಕೆ ಎಡೆ ಮಾಡಿಕೊಟ್ಟಿದೆ. ಜಾಥಾ ವೇಳೆ ಗಲಭೆ ನಡೆದಿದ್ದು, ಗಣತಂತ್ರ ದಿನದಂದು ದೇಶದ ರಾಜಧಾನಿಯಲ್ಲಿ ಗಲಭೆ ನಡೆದಿರುವುದನ್ನು ಹಲವು ಪಕ್ಷಗಳು ಖಂಡಿಸಿವೆ. ಹಿಂಸಾಚಾರವನ್ನು ಎಂದಿಗೂ ನಾವು ಬೆಂಬಲಿಸುವುದಿಲ್ಲ ಎಂದು ತಿಳಿಸಿವೆ.
ಆಮ್ ಆದ್ಮಿ ಪಕ್ಷ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಗಲಭೆಯನ್ನು ನಾವು ಖಂಡಿಸುತ್ತೇವೆ. ಆದರೆ ಪರಿಸ್ಥಿತಿ ಈ ಮಟ್ಟಕ್ಕೆ ತಲುಪಲು ಕೇಂದ್ರ ಸರ್ಕಾರ ಅವಕಾಶ ನೀಡಿರುವುದು ವಿಷಾದನೀಯ ಎಂದು ಹೇಳಿದೆ.
ದೆಹಲಿಯಲ್ಲಿ ಇಂದು ನಡೆದ ಘಟನೆಯನ್ನು ನಾವು ಖಂಡಿಸುತ್ತೇವೆ. ಆದರೆ ಇಷ್ಟರ ಮಟ್ಟಿಗೆ ಪರಿಸ್ಥಿತಿ ತಲುಪಲು ಕೇಂದ್ರ ಸರ್ಕಾರ ಅವಕಾಶ ಮಾಡಿಕೊಟ್ಟಿದ್ದು ವಿಷಾದನೀಯ. ಕಳೆದ ಎರಡು ತಿಂಗಳಿನಿಂದಲೂ ರೈತರ ಪ್ರತಿಭಟನೆ ಶಾಂತಿಯುತವಾಗಿಯೇ ನಡೆಯುತ್ತಿತ್ತು. ಈ ಪ್ರತಿಭಟನೆಯಲ್ಲಿ ಹಿಂಸಾಚಾರ ನಡೆಸಿದವರು ನಾವಲ್ಲ, ಹೊರಗಿನ "ಸಮಾಜ ವಿರೋಧಿ" ಸಂಘಟನೆಗಳು ಎಂದು ರೈತರು ಹೇಳುತ್ತಿದ್ದಾರೆ. ಈ ಬಗ್ಗೆ ಕೇಂದ್ರ ಪರಿಶೀಲಿಸಬೇಕಿದೆ ಎಂದು ಆಮ್ ಆದ್ಮಿ ಪಕ್ಷ ಹೇಳಿಕೆ ನೀಡಿದೆ.

ಇಂದು ಹಿಂಸಾಚಾರ ನಡೆಸಿದವರು ತಮ್ಮ ರೈತ ಸಂಘಗಳಿಗೆ ಸೇರಿದವರಲ್ಲ ಎಂದು ರೈತ ಸಂಘಟನೆಗಳು ಹೇಳುತ್ತಿವೆ. ಆದರೆ ರೈತರ ಪ್ರಾಮಾಣಿಕ ಚಳವಳಿಯನ್ನು ಈ ಹಿಂಸಾಚಾರ ಹಿಂದೆ ಸರಿಯುವಂತೆ ಮಾಡಿದೆ. ಇದುವರೆಗೂ ಶಾಂತಿ, ಶಿಸ್ತಿನಿಂದ ನಡೆದುಕೊಂಡು ಬಂದಿದ್ದ ಪ್ರತಿಭಟನೆಯನ್ನು ಹಾಳುಗೆಡವಿದೆ ಎಂದು ಆರೋಪಿಸಿದೆ.
72ನೇ ಗಣರಾಜ್ಯೋತ್ಸವ ಸಂಭ್ರಮ ವಿಶೇಷ ಪುಟ












Click it and Unblock the Notifications