ದೆಹಲಿಯಲ್ಲಿ ಸಂಭವಿಸಬೇಕಿದ್ದ ಸ್ಫೋಟ ಜಸ್ಟ್ ಮಿಸ್!
ದೆಹಲಿ, ನವೆಂಬರ್.25: ರಾಷ್ಟ್ರ ರಾಜಧಾನಿಯಲ್ಲಿ ಸ್ವಲ್ಪ ಯಾಮಾರಿದರೂ ದೊಡ್ಡದೊಂದು ಅನಾಹುತವೇ ನಡೆದು ಹೋಗುತ್ತಿತ್ತು. ಪೊಲೀಸರ ಕಾರ್ಯಾಚರಣೆ ದೆಹಲಿಯಲ್ಲಿ ಉಗ್ರ ಚಟುವಟಿಕೆಯಿಂದ ತಪ್ಪಿಸಿದೆ. ಕೂದಲೆಳೆ ಅಂತರದಲ್ಲೇ ಆಪತ್ತೊಂದು ತಪ್ಪಿದೆ.
ವಾಯುಮಾಲಿನ್ಯದಿಂದ ದೆಹಲಿ ಜನರು ನಿತ್ಯ ನರಳುತ್ತಿರುವ ವಿಚಾರ ದೇಶಾದ್ಯಂತ ಸದ್ದು ಮಾಡಿದ್ದು ಗೊತ್ತೇ ಇದೆ. ಜನರು ಮನೆಯಿಂದ ಹೊರ ಬರುವುದಕ್ಕೂ ಹಿಂದೆ ಮುಂದೆ ನೋಡುತ್ತಿದ್ದಾರೆ. ಇಂಥ ಪರಿಸ್ಥಿತಿಯ ಲಾಭ ಪಡೆಯಲು ಉಗ್ರರು ಸಂಚು ರೂಪಿಸಿದ್ದರು.
ಬಾಂಗ್ಲಾ ಉಗ್ರರಿಗಾಗಿ ಬೆಂಗಳೂರಲ್ಲಿ ಪಿಜಿ ಹಡುಕಾಡಿದ ಎನ್ಐಎ
ಸುಧಾರಿತ ಸ್ಫೋಟಕಗಳನ್ನು ಸಂಗ್ರಹಿಸಿ ಇಟ್ಟಿದ್ದ ಮೂವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಮೂವರು ಶಂಕಿತ ಉಗ್ರರಿಂದ ಐಇಡಿ ಸ್ಫೋಟಕಗಳನ್ನು ವಶಕ್ಕೆ ಪಡೆಯಲಾಗಿದೆ. ಇನ್ನು, ದೆಹಲಿಯಲ್ಲಿದ್ದ ಬಂಧಿತರೆಲ್ಲ ಅಸ್ಸಾಂ ಮೂಲದವರು ಎಂದು ತಿಳಿದು ಬಂದಿದೆ.
ದೆಹಲಿಯಲ್ಲೇ ಅಸ್ಸಾಂ ಉಗ್ರರ ಸ್ಕೆಚ್:
ದೆಹಲಿಯಲ್ಲೇ ವಾಸವಿದ್ದ ಮೂವರು ಉಗ್ರರನ್ನು ಬಂಧಿಸಿರುವ ಬಗ್ಗೆ ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ. ಅಸ್ಸಾಂ ಮೂಲದ ರಂಜಿತ್ ಅಲಿ, ಇಸ್ಲಾಂ, ಜಮಾಲ್ ಬಂಧಿತ ಆರೋಪಿಗಳಾಗಿದ್ದು, ಬಂಧಿತರಿಂದ ಐಇಡಿ ಸ್ಫೋಟಕಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ದೆಹಲಿ ಪೊಲೀಸರ ವಿಶೇಷ ಪಡೆ ತಿಳಿಸಿದೆ.
ದೆಹಲಿಯಲ್ಲೇ ಕುಳಿತು ಸ್ಕೆಚ್ ಹಾಕುತ್ತಿದ್ದ ಉಗ್ರರು ದಾಳಿಗೆ ಸಂಚು ರೂಪಿಸಿದ್ದರು ಎನ್ನಲಾಗಿದೆ. ದೆಹಲಿ ಅಷ್ಟೇ ಅಲ್ಲದೇ, ದೇಶದ ಹಲವೆಡೆ ಉಗ್ರ ಚಟುವಟಿಕೆಗೆ ಪ್ಲಾನ್ ಮಾಡಿಕೊಂಡಿದ್ದರು ಎಂದು ಮೂಲಗಳಿಂದ ತಿಳಿದು ಬಂದಿದೆ. ದೆಹಲಿ ಪೊಲೀಸರ ಕಾರ್ಯಾಚರಣೆಯಿಂದ ಉಗ್ರರ ಸ್ಕೆಚ್ ಎಲ್ಲ ತಲೆಕೆಳಗಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ದೊಡ್ಡ ಅನಾಹುತವೊಂದು ತಪ್ಪಿದೆ.