ಕೃಷಿ ರಂಗದಲ್ಲೂ 'ಜಿಯೋ' ಜಿಂಗಾಲಾಲಾ: ಮಾಜಿ ಸಚಿವರ ಮಾತಿನ ಗೂಡಾರ್ಥವೇನು?
ನವದೆಹಲಿ, ಸಪ್ಟೆಂಬರ್ 18: ಲೋಕಸಭೆಯಲ್ಲಿ ಅಂಗೀಕಾರಗೊಂಡ ಕೃಷಿ ಸಂಬಂಧಿತ ಮಸೂದೆಗಳಿಗೆ ವಿಪಕ್ಷಗಳ ಜೊತೆ ಮಿತ್ರಪಕ್ಷ ಶಿರೋಮಣಿ ಅಕಾಲಿ ದಳ ಕೂಡ ವಿರೋಧ ವ್ಯಕ್ತಪಡಿಸಿದೆ. ಕೃಷಿ ರಂಗಕ್ಕೆ 'ಜಿಯೋ' ಕಂಪನಿಯನ್ನು ಯಾವಾಗ ಕರೆ ತರುತ್ತೀರಾ ಎಂದು ಮಾಜಿ ಸಚಿವೆ ಹರ್ ಸಿಮ್ರತ್ ಕೌರ್ ಬಾದಲ್ ವ್ಯಂಗ್ಯವಾಡಿದ್ದಾರೆ.
ಕೃಷಿ ರಂಗದ ಖಾಸಗಿ ವ್ಯಕ್ತಿ ಅಥವಾ ಸಂಸ್ಥೆಗಳು ಹಿಡಿತ ಸಾಧಿಸುವ ಆತಂಕವು ಬಡ ಮತ್ತು ಮಧ್ಯಮ ರೈತವರ್ಗವನ್ನು ಆತಂಕಕ್ಕೆ ದೂಡಿದೆ. ಕಳೆದ ಹಲವು ವಾರಗಳಿಂದ ಹಳ್ಳಿಗಾಡಿನ ರೈತರ ಜೊತೆಗೆ ಈ ಬಗ್ಗೆ ಸಮಾಲೋಚನೆ ನಡೆಸಲಾಗಿತ್ತು ಎಂದು ಮಾಜಿ ಸಚಿವೆ ಹರ್ ಸಿಮ್ರತ್ ಕೌರ್ ಬಾದಲ್ ತಿಳಿಸಿದ್ದಾರೆ.
ರಿಲಾಯನ್ಸ್ ಜಿಯೋ ಕಂಪನಿಯ ಆಕ್ರಮಣಕಾರಿ ಮಾರುಕಟ್ಟೆ ನೀತಿ ಮತ್ತು ಕಾರ್ಯತಂತ್ರಗಳ ಬಗ್ಗೆ ಸಾಕಷ್ಟು ಉದಾಹರಣೆಗಳಿವೆ. ಜಿಯೋ ಸಂಸ್ಥೆಯನ್ನು ಕೃಷಿ ವಲಯಕ್ಕೆ ಕರೆ ತರಲು ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ದೂಷಿಸಿದ್ದಾರೆ.

ಭಾರತೀಯರಿಗೆ ಅನಿವಾರ್ಯವಾಗಿದ್ದು ಹೇಗೆ 'ಜಿಯೋ'?
"ರಿಲಾಯನ್ಸ್ ಜಿಯೋ ಸಂಸ್ಥೆಯು ಆಕ್ರಮಣಕಾರಿ ಮಾರುಕಟ್ಟೆ ನೀತಿಯನ್ನು ಅನುಸರಿಸಿರುವುದಕ್ಕೆ ಉದಾಹರಣೆ ಇದೆ. ಈ ಹಿಂದೆ ದೇಶಾದ್ಯಂತ ಜಿಯೋ ಸಿಮ್ ಮತ್ತು ಮೊಬೈಲ್ ಗಳನ್ನು ಉಚಿತವಾಗಿ ನೀಡಲಾಯಿತು. ಜನರೆಲ್ಲ ಮುಗಿಬಿದ್ದು ಜಿಯೋ ಸಿಮ್ ಗಳನ್ನು ಪಡೆದುಕೊಂಡರು. ಟೆಲಿಕಾಮ್ ಮಾರುಕಟ್ಟೆಯಲ್ಲಿ ಇತರೆ ಕಂಪನಿಗಳು ಪೈಪೋಟಿ ನೀಡದ ಮಟ್ಟಿಗೆ ಜಿಯೋ ಸಂಸ್ಥೆ ಬೆಳೆಯಿತು. ಒಂದು ವರ್ಷದ ಬಳಿಕ ಬಳಕೆದಾರರಿಗೆ ದರ ನಿಗದಿಗೊಳಿಸಲಾಯಿತು. ಈ ಹಂತದಲ್ಲಿ ಜಿಯೋ ಬಹುತೇಕರಿಗೆ ಅನಿವಾರ್ಯವಾಗಿ ಬಿಟ್ಟಿತ್ತು. ಬೆಲೆ ಏರಿಕೆ ಮಾಡಿದರೂ ಅದನ್ನು ಬಿಡುವಂತಾ ಸ್ಥಿತಿಯಲ್ಲಿ ಬಳಕೆದಾರರು ಇರಲಿಲ್ಲ. ಇಂಥದ್ದೇ ಪರಿಸ್ಥಿತಿಯು ಮುಂದೊಂದು ದಿನ ಕೃಷಿ ವಲಯಕ್ಕೂ ಕಾಲಿಡಬಹುದು" ಎಂದು ಮಾಜಿ ಸಚಿವೆ ಹರ್ ಸಿಮ್ರತ್ ಕೌರ್ ಬಾದಲ್ ಎಚ್ಚರಿಸಿದ್ದಾರೆ.

"ದಯವಿಟ್ಟು ಕೃಷಿ ವಿರೋಧಿ ಮಸೂದೆ ಜಾರಿಗೊಳಿಸಬೇಡಿ"
ಭಾರತದಲ್ಲಿ ದಯವಿಟ್ಟು ಕೃಷಿ ವಿರೋಧಿ ಕಾನೂನು ಜಾರಿಗೊಳಿಸುವುದು ಬೇಡ. ಜನರ ಗ್ರಹಿಕೆಗೆ ಬಾರದ ರೀತಿಯಲ್ಲಿ ನೀವು ಏನನ್ನಾದರೂ ಜಾರಿಗೊಳಿಸಬಹುದು. ನಾನು ಅದರ ಬಗ್ಗೆ ಮನವರಿಕೆ ಮಾಡುವ ಕೆಲಸವನ್ನು ಮಾಡುತ್ತೇನೆ. ಆದರೆ ನನ್ನ ಮಾತುಗಳು ಸಾಕಾಗುವುದಿಲ್ಲ. ಏಕೆಂದರೆ ನನ್ನ ಧ್ವನಿಯು ನಿಮ್ಮಷ್ಟು ದೊಡ್ಡದಾಗಿಲ್ಲ" ಎಂದು ಕೇಂದ್ರ ಸರ್ಕಾರವನ್ನು ಕುಟುಕಿದ್ದಾರೆ.

ಖಾಸಗಿ ಸಂಸ್ಥೆಗಳ ಹಿತಾಸಕ್ತಿಗಾಗಿ ಕೃಷಿ ರಂಗಕಕ್ಕೆ ಅನ್ಯಾಯ
ಕೇಂದ್ರ ಸರ್ಕಾರವು ಖಾಸಗಿ ಸಂಸ್ಥೆಗಳ ಹಿತಾಸಕ್ತಿಯನ್ನು ಉದ್ದೇಶವಾಗಿಟ್ಟುಕೊಂಡು ಕೃಷಿ ಸಂಬಂಧಿತ ಮಸೂದೆಗಳನ್ನು ಜಾರಿಗೊಳಿಸಿದೆ. ಇದರಿಂದ ಕೃಷಿ ವಲಯಕ್ಕೆ ಮತ್ತು ಬಡ ಹಾಗೂ ಮಧ್ಯಮ ಪ್ರಮಾಣದ ರೈತರಿಗೆ ಭಾರಿ ಹೊಡೆತ ಬೀಳುವ ಅಪಾಯವಿದೆ ಎಂದು ವಿರೋಧ ಪಕ್ಷಗಳು ವಾದಿಸುತ್ತಿವೆ. ಖಾಸಗಿ ಸಂಸ್ಥೆ ಮತ್ತು ವ್ಯಕ್ತಿಗಳ ಅಧೀನದಲ್ಲಿ ರೈತರು ಭಯ ಮತ್ತು ಆತಂಕದ ನಡುವೆ ಕೃಷಿ ಮಾಡುವಂತಾ ಅಪಾಯ ಎದುರಾಗಲಿದೆ ಎಂದು ಮಾಜಿ ಸಚಿವೆ ಹರ್ ಸಿಮ್ರತ್ ಕೌರ್ ಬಾದಲ್ ದೂಷಿಸಿದ್ದಾರೆ.

ವಿಪಕ್ಷಗಳ ಟೀಕೆಗೆ ಕೇಂದ್ರ ಸರ್ಕಾರದ ಉತ್ತರವೇನು?
ಕಳೆದ ಜೂನ್ ತಿಂಗಳಿನಲ್ಲೇ ಕೇಂದ್ರ ಸರ್ಕಾರವು ರೈತರ ಉತ್ಪಾದನೆಯ ವ್ಯಾಪಾರ ಮತ್ತು ವಾಣಿಜ್ಯ(ಪ್ರಚಾರ ಮತ್ತು ಸೌಲಭ್ಯ) ಮಸೂದೆ, ಕೃಷಿ ಸೇವೆ ಮತ್ತು ಬೆಲೆ ನಿಗದಿ ಬಗ್ಗೆ ಒಪ್ಪಂದ (ಸಬಲೀಕರಣ ಮತ್ತು ಸಂರಕ್ಷಣೆ) ಮಸೂದೆ, ಅಗತ್ಯ ವಸ್ತುಗಳ ತಿದ್ದುಪಡಿ ಮಸೂದೆಗಳನ್ನು ಮಂಡಿಸಿತ್ತು. ವಿಪಕ್ಷಗಳ ವಿರೋಧದ ಹಿನ್ನೆಲೆ ಮುಂದೂಡಿಕೆಯಾಗುತ್ತಿದ್ದ ಮಸೂದೆಗಳಿಗೆ ಕೇಂದ್ರ ಸರ್ಕಾರವು ಅನುಮೋದನೆ ನೀಡಿದೆ. ದೇಶದ ಬಡವ ಮತ್ತು ಮಧ್ಯಮ ವರ್ಗದ ರೈತರಿಗೆ ಈ ಮಸೂದೆಗಳಿಂದ ಹೆಚ್ಚು ಸಹಾಯವಾಗಲಿದೆ ಎಂದು ಕೇಂದ್ರ ಸರ್ಕಾರವು ವಾದಿಸುತ್ತಿದೆ.












Click it and Unblock the Notifications