2ಜಿ ಹಗರಣ: ಎ ರಾಜಾಗೆ ದೆಹಲಿ ಹೈಕೋರ್ಟ್ ನೋಟಿಸ್
ನವದೆಹಲಿ, ಸೆ. 10: 2ಜಿ ಸ್ಪೆಕ್ಟ್ರಂ ಹಗರಣಕ್ಕೆ ಸಂಬಂಧಿಸಿದ 19 ಆರೋಪಿಗಳನ್ನು ಖುಲಾಸೆಗೊಳಿಸಿದ್ದ ಸಿಬಿಐ ವಿಶೇಷ ನ್ಯಾಯಾಲಯದ ಖುಲಾಸೆ ತೀರ್ಪಿನ ವಿರುದ್ಧ ದೆಹಲಿ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿರುವುದು ಗೊತ್ತಿರಬಹುದು. ಜಾರಿ ನಿರ್ದೇಶನಾಲಯ(ಇಡಿ) ಸಲ್ಲಿಸಿದ್ದ ಈ ಮೇಲ್ಮನವಿ ಅರ್ಜಿಯ ವಿಚಾರಣೆ ಕುರಿತಂತೆ ಪ್ರಮುಖ ಆರೋಪಿ ಎ ರಾಜಾ ಸೇರಿದಂತೆ ಹಲವರಿಗೆ ಇಂದು ದೆಹಲಿ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಜಾರಿ ನಿರ್ದೇಶನಾಲಯ ಸಲ್ಲಿಸಿರುವ ಈ ಮೇಲ್ಮನವಿಯಲ್ಲಿ, ಸುಮಾರು 30 ಕೋಟಿ ರೂ. ಗಳ ಈ ಹಗರಣದ ಕುರಿತು ಮತ್ತೊಮ್ಮೆ ವಿಚಾರಣೆ ನಡೆಸುವಂತೆ ಹೈಕೋರ್ಟ್ ಗೆ ಕೋರಿಕೊಳ್ಳಲಾಗಿದೆ. ವಿಚಾರಣೆಯನ್ನು ಅವಧಿಗೂ ಮುನ್ನವೇ ಕೈಗೆತ್ತಿಕೊಳ್ಳುವಂತೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಜಸ್ಟೀಸ್ ಬ್ರಿಜೇಶ್ ಸೇಠಿ ಅವರು ಎ ರಾಜಾ ಹಾಗೂ ಇನ್ನಿತರರನ್ನು ಅರ್ಜಿಗೆ ಉತ್ತರಿಸುವಂತೆ ಸೂಚಿಸಿ ನೋಟಿಸ್ ಜಾರಿಮಾಡಿದ್ದಾರೆ. ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 21ಕ್ಕೆ ಮುಂದೂಡಲಾಗಿದೆ.
''ಜನವರಿ 15ಕ್ಕೆ ನಡೆಯಬೇಕಿದ್ದ ವಿಚಾರಣೆಯು ಕೊವಿಡ್ 19ರ ಕಾರಣದಿಂದ ಮುಂದೂಡಲ್ಪಟ್ಟಿದೆ. ಹಾಲಿ ಏಕ ಸದಸ್ಯ ಪೀಠವು ನವೆಂಬರ್ 30ಕ್ಕೆ ಕೊನೆಗೊಳ್ಳಲಿದ್ದು, ಹೊಸ ನ್ಯಾಯಪೀಠದ ಮೂಲಕ ಮತ್ತೊಮ್ಮೆ ಎಲ್ಲಾ ಕಾನೂನು ಪ್ರಕ್ರಿಯೆ ನಡೆಸಬೇಕಾದರೆ ಸಾರ್ವಜನಿಕರ ಹಣವನ್ನು ಪೋಲು ಮಾಡಿದಂತಾಗುತ್ತದೆ'' ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಸಂಜಯ್ ಜೈನ್ ಅವರು ಹೇಳಿದರು.

2014ರಲ್ಲಿ ಯುಪಿಎ ಸರ್ಕಾರ ಅಧಿಕಾರವಧಿಯಲ್ಲಿ ನಡೆದಿದ್ದ 30 ಸಾವಿರ ಕೋಟಿ ರೂ. ಹಗರಣದ ಪ್ರಮುಖ ಆರೋಪಿಗಳಾಗಿದ್ದ ಮಾಜಿ ಸಚಿವ ಎ.ರಾಜಾ, ಕರಣಾನಿಧಿ ಅವರ ಪುತ್ರಿ, ಸಂಸದೆ ಕನ್ನಿಮೊಳಿ ಸೇರಿದಂತೆ ಒಟ್ಟು 19 ಆರೋಪಿಗಳನ್ನು ದೆಹಲಿಯ ಸಿಬಿಐ ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿತ್ತು.
2ಜಿ (ಸೆಕೆಂಡ್ ಜನರೇಶನ್ ದೂರಸಂಪರ್ಕ ಸೇವೆ) ಮೊಬೈಲ್ ಸೇವೆಗೆ 2008 ರಲ್ಲಿ ಆಗಿನ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿ ಸರ್ಕಾರ 9 ದೂರಸಂಪರ್ಕ ಕಂಪೆನಿಗಳಿಗೆ ಬೇಕಾಬಿಟ್ಟಿ ಲೈಸೆನ್ಸ್ ನೀಡಿದ ಪ್ರಕರಣ ಇದು. ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕಾದ ನಷ್ಟ, ಒಂದೆರಡಲ್ಲ,1,76,000 ಕೋಟಿ ರೂಪಾಯಿ. ಆಗಿನ ದೂರಸಂಪರ್ಕ ಸಚಿವರಾಗಿದ್ದ ಎ.ರಾಜಾ ಅವರ ಮೇಲೆ ಆರೋಪ ಕೇಳಿಬಂದಿತ್ತು. ಹಗರಣ ಬೆಳಕಿಗೆ ಬರುತ್ತಿದ್ದಂತೆಯೇ ಪ್ರತಿಪಕ್ಷಗಳು, ಕಾಂಗ್ರೆಸ್ ಅನ್ನು ಚೆನ್ನಾಗಿ ತರಾಟೆಗೆ ತೆಗೆದುಕೊಂಡಿದ್ದರು. ಈ ಪ್ರಕರಣದಲ್ಲಿ ಹಲವರ ತಲೆದಂಡವೂ ಆಗಿತ್ತು.












Click it and Unblock the Notifications