ವಿಶೇಷ ವಿಮಾನದಲ್ಲಿ ಇಟಲಿಯಿಂದ ದೆಹಲಿಗೆ ಬಂದಿಳಿದ 263 ಭಾರತೀಯರು
ದೆಹಲಿ, ಮಾರ್ಚ್ 22: ಇಟಲಿ ದೇಶದಲ್ಲಿ ಕೊರೊನಾ ವೈರಸ್ ರಣಕೇಕೆ ಹಾಕುತ್ತಿದೆ. ಸಾವಿನ ಸಂಖ್ಯೆಯಲ್ಲಿ ಚೀನಾ ದೇಶವನ್ನು ಮೀರಿಸಿರುವ ಇಟಲಿ ಸ್ಮಶಾನವಾಗುತ್ತಿದೆ. ಇದುವರೆಗೂ 4825ಕ್ಕು ಹೆಚ್ಚು ಜನರು ಇಟಲಿಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.
ಇಂತಹ ಇಟಲಿ ದೇಶದಿಂದ 263 ಭಾರತೀಯರು ವಿಶೇಷ ವಿಮಾನದಲ್ಲಿ ಭಾನುವಾರ ಬೆಳಿಗ್ಗೆ ದೆಹಲಿ ಬಂದಿಳಿದಿದ್ದಾರೆ. ಇಟಲಿ ರಾಜಧಾನಿ ರೋಮ್ ನಗರದಿಂದ ಏರ್ ಇಂಡಿಯಾ ವಿಶೇಷ ವಿಮಾನ ಭಾರತೀಯರನ್ನು ಕರೆದುಕೊಂಡು ಬಂದಿದೆ.
ಕೊರೊನಾ ರಣಕೇಕೆ: ಇಟಲಿಯಲ್ಲಿ ಸಾವಿನ ಸಂಖ್ಯೆ 4,825ಕ್ಕೆ ಏರಿಕೆ!
ಇಟಲಿಯಿಂದ ಬಂದವರ ಪೈಕಿ ಹೆಚ್ಚಿನವರು ವಿದ್ಯಾರ್ಥಿಗಳು. ಭಾರತದಲ್ಲಿ ಕೊರೊನಾ ಭೀತಿ ಹೆಚ್ಚಿರುವುದರಿಂದ ಇವರ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗುವುದು. ಸಂಪೂರ್ಣವಾಗಿ ತಪಾಸಣೆ ಮಾಡಿದ ಬಳಿಕ ಕಡ್ಡಾಯವಾಗಿ ಇವರನ್ನು ಪ್ರತ್ಯೇಕ ಕೊಠಡಿಯಲ್ಲಿರಿಸಲಾಗುವುದು ಎಂದು ದೆಹಲಿ ಏರ್ಪೋರ್ಟ್ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ಇಟಲಿಯಲ್ಲಿ ಸಿಲುಕಿಕೊಂಡಿದ್ದ ಭಾರತೀಯರನ್ನು ರಕ್ಷಿಸಲು ರಾಷ್ಟ್ರೀಯ ಸಾರಿಗ ನಿಗಮದವರು ವಿಶೇಷ ತಂಡವನ್ನು ರಚಿಸಿ ಕಳುಹಿಸಿಕೊಟ್ಟಿದ್ದರು. ಎಐ1122 ಸಂಖ್ಯೆಯ ವಿಮಾನ ಭಾನುವಾರ ಬೆಳಿಗ್ಗೆ 263 ಪ್ರಯಾಣಿಕರೊಂದಿಗೆ ದೆಹಲಿ ಬಂದು ತಲುಪಿದೆ. ನಮ್ಮ ಸಿಬ್ಬಂದಿಗೆ ಸಲ್ಯೂಟ್ ಎಂದು ಏರ್ ಇಂಡಿಯಾದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಟಲಿಯಲ್ಲಿ ಸಿಲುಕಿರುವ 400 ಕನ್ನಡಿಗರ ರಕ್ಷಣೆಯತ್ತ ಸರ್ಕಾರ ಚಿತ್ತ
ಅಂದ್ಹಾಗೆ, ಇಟಲಿಯಲ್ಲಿ ಸುಮಾರು 500ಕ್ಕೂ ಹೆಚ್ಚು ಭಾರತೀಯರು ಸಿಲುಕಿಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ. ಸದ್ಯ 263 ಜನರು ಸುರಕ್ಷತೆಯಿಂದ ಭಾರತಕ್ಕೆ ಬಂದಿದ್ದಾರೆ. ಬಹುಶಃ ಉಳಿದವರನ್ನು ಕರೆತರಲು ಮತ್ತೊಂದು ವಿಶೇಷ ವಿಮಾನವನ್ನು ಇಟಲಿಗೆ ಕಳುಹಿಸಬಹುದು ಎಂದು ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ.
Delhi Customs continue to provide its assistance in clearance of the 263 passengers from Rome at the remote bay at the airport. All precautions being exercised and standard operating procedures (SOPs) for handling passengers being followed. #COVID19 https://t.co/0qZvARpQ7G
— ANI (@ANI) March 22, 2020
ಇಟಲಿಯಿಂದ ಭಾರತಕ್ಕೆ ಬಂದವರು ಪೈಕಿ ಇದು ಎರಡನೇ ತಂಡ. ಇದಕ್ಕು ಮುಂಚೆ 213 ಜನರ ತಂಡವೊಂದನ್ನು ಇಟಲಿಯ ಮಿಲನ್ ನಗರದಿಂದ ಭಾರತಕ್ಕೆ ಕರೆತರಲಾಗಿತ್ತು.
ನಿನ್ನೆ ಒಂದೇ ದಿನ ಇಟಲಿಯಲ್ಲಿ 6557 ಹೊಸ ಸೋಂಕಿತ ಪ್ರಕರಣ ದಾಖಲಾಗಿದೆ. ಈ ಮೂಲಕ ಇಟಲಿಯಲ್ಲಿ ಕೊರೊನಾ ಸೋಂಕು ಪೀಡಿತರ ಸಂಖ್ಯೆ 53,578ಕ್ಕೆ ಏರಿದೆ. ಇಲ್ಲಿಯವರೆಗೂ 4825 ಮಂದಿ ಸಾವನ್ನಪ್ಪಿದ್ದು, 2857 ಮಂದಿಯ ಪರಿಸ್ಥಿತಿ ಇನ್ನೂ ಚಿಂತಾಜನಕವಾಗಿದೆ. ಈವರೆಗೂ 6072 ಮಂದಿ ಗುಣಮುಖರಾಗಿದ್ದಾರೆ.