ಎಚ್ಡಿಕೆ ಸಂಸತ್ತಿಗೆ ಹಾಜರಾಗದೆ ಟಿಎ-ಡಿಎ ಉಳಿಸಿದ್ದಾರಂತೆ!

15th-lok-sabha-ex-mp-hd-kumaraswamy-saved-money-by-not-claiming-ta-da
ಹೊಸದಿಲ್ಲಿ, ಫೆ.4: ಇನ್ನೇನು 15ನೆಯ ಲೋಕಸಭೆ ಅವಧಿ 3 ತಿಂಗಳಲ್ಲಿ ಮುಗಿಯಲಿದೆ. ಈ ಮಧ್ಯೆ ಮುಂದಿನ ಲೋಕಸಭೆಗಾಗಿ ಚುನಾವಣೆ ಸಿದ್ಧತೆ ಭರದಿಂದ ನಡೆದಿದೆ. ಈ ಸಂದರ್ಭದಲ್ಲಿ 15ನೆಯ ಲೋಕಸಭೆಯಲ್ಲಿ ನಮ್ಮ ಸಂಸದರು ಏನೆಲ್ಲಾ ಸಾಧನೆ ಮಾಡಿದ್ದಾರೆ ಎಂಬುದರ ಬಗ್ಗೆ ಒಂದು ಸ್ಥೂಲ ಪರಿಚಯ ಇಲ್ಲಿದೆ.

ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು 15ನೆ ಲೋಕಸಭೆಯಲ್ಲಿ ಇದುವರೆಗೂ ಒಂದೇ ಒಂದು ಪ್ರಶ್ನೆಯನ್ನು ಕೇಳಿಲ್ಲ. ಅಂದಹಾಗೆ ನಾಳೆಯಿಂದ ಕಟ್ಟಕಡೆಯ ಅಧಿವೇಶನ ಆರಂಭವಾಲಿದ್ದು, ಹಾಸನದ ಸಂಸದ, ಜೆಡಿಎಸ್ ಅಧಿನಾಯಕ ದೇವೇಗೌಡರು ಈಗಲಾದರೂ ಒಂದು ಪ್ರಶ್ನೆಯನ್ನು ಕೇಳುತ್ತಾರಾ, ಕಾದುನೋಡಬೇಕು.

ಇನ್ನು ಸಂಸತ್ತಿನಲ್ಲಿ ಹೊಸದಾಗಿ ಹೆಜ್ಜೆಯಿಟ್ಟ ಮಂಡ್ಯ ಸಂಸದೆ ರಮ್ಯಾ (ದಿವ್ಯ ಸ್ಪಂದನ) ಹಾಗೂ ಬೆಂಗಳೂರು ಗ್ರಾಮಾಂತರದ ಡಿಕೆ ಸುರೇಶ್ ಅವರು ಸಹ ಒಂದೂ ಪ್ರಶ್ನೆಯನ್ನು ಕೇಳಿಲ್ಲ.

ಸಂಸತ್ತಿನ ಶಿಷ್ಟಾಚಾರದ ಪ್ರಕಾರ ಮಾಜಿ ಪ್ರಧಾನಿಯಾದವರು starred ಅಥವಾ unstarred ಪ್ರಶ್ನೆಗಳನ್ನು ಕೇಳುವಂತಿಲ್ಲ. starred ಪ್ರಶ್ನೆ ಅಂದರೆ ಅದಕ್ಕೆ ಸಂಬಂಧಪಟ್ಟ ಸಚಿವರಿಂದ ಬಾಯಿಮಾತಿನ ಉತ್ತರ ದೊರಕುತ್ತದೆ. ಅದೇ unstarred ಪ್ರಶ್ನೆಗೆ ಲಿಖಿತ ರೂಪದಲ್ಲಿ ಉತ್ತರ ದೊರಕುತ್ತದೆ. ಇದಕ್ಕೆ ಪೂರಕ ಪ್ರಶ್ನೆಗಳನ್ನೂ ಕೇಳಬಹುದು. ಹಾಗಾಗಿ ದೊಡ್ಡಗೌಡರಿಗೆ ಇದಕ್ಕೆ ಎಕ್ಸ್ ಕ್ಯೂಸ್ ಕೊಡಬಹುದು.

ಆದರೆ ಸಂಸತ್ ಆರಂಭವಾಗುವ ಮೊದಲ ಒಂದು ಗಂಟೆಯಲ್ಲಿ ನಡೆಯುವ ಪ್ರಶ್ನೋತ್ತರ ವೇಳೆಯಲ್ಲಿ (Question Hour) ಮತಚೀಟಿ ಮೂಲಕ ನಡೆಯುತ್ತದೆ. ಅದು ಕೇವಲ ಒಂದು ಗಂಟೆಯ ಅವಧಿಯದ್ದಾಗಿರುವುದರಿಂದ ದೇವೇಗೌಡರ ಸರದಿ ಬರುವಷ್ಟರಲ್ಲಿ ಪ್ರಶ್ನೋತ್ತರ ವೇಳೆಯೇ ಮುಗಿದು ಹೋಗಿ ಇಲ್ಲಿಯೂ ಗೌಡರಿಗೆ ಯಾವುದೇ ಪ್ರಶ್ನೆ ಕೇಳಲಾಗಿಲ್ಲ ಎಂದು ಪರಿಭಾವಿಸಿಕೊಳ್ಳಬಹುದಾಗಿದೆ. ಆದರೆ ಹಾಗಂತ ನಮ್ಮ ಗೌಡರು ಸಂಸತ್ತಿನಲ್ಲಿ ಕೈಕಟ್ಟಿಕೊಂಡು ಕುಳಿತಿಲ್ಲ. ರಾಷ್ಟ್ರೀಯ ಪ್ರಾಮುಖ್ಯತೆಯ ಚರ್ಚೆಗಳು ನಡೆದಾಗ ದನಿಯೆತ್ತಿದ್ದಾರೆ.

ಅವರ ಪುತ್ರ ಕುಮಾರಸ್ವಾಮಿ ಅವರಂತೂ ಬಹುತೇಕ ಎಲ್ಲ ಅಧಿವೇಶನಗಳಿಗೂ ಚಕ್ಕರ್ ಹೊಡೆದು ಇಲ್ಲೇ ರಾಜ್ಯ ರಾಜಕೀಯದಲ್ಲಿ ಸಕ್ರಿಯರಾಗಿದ್ದವರು. ಯಾಕೆ ಸ್ವಾಮಿ ನೀವು ಸಂಸತ್ತಿನಲ್ಲಿ ಪಾಲ್ಗೊಳ್ಳಲಿಲ್ಲ ಎಂದು ಕೇಳಿದ್ದಕ್ಕೆ 'ಅಯ್ಯೋ ನಾನು ಇಲ್ಲಿಂದ ಡೆಲ್ಲಿವರೆಗೂ ಹೋಗದೆ ಸರಕಾರದ ಬೊಕ್ಕಸಕ್ಕೆ ಟಿಎ/ ಡಿಎ ಉಳಿಸಿದ್ದೇನಲ್ಲಾ!?' ಎನ್ನುತ್ತಾರೆ!

ದಾವಣಗೆರೆಯ ಸಂಸದ ಜಿಎಂ ಸಿದ್ದೇಶ್ ಅವರು ದಾಖಲೆಯ 835 ಪ್ರಶ್ನೆಗಳನ್ನು ಕೇಳಿ ಸೈ ಎನಿಸಿಕೊಂಡಿದ್ದಾರೆ.

ಬಿಜಾಪುರದ ಸಂಸದ ರಮೇಶ್ ಜಿಗಜಿಣಗಿ ಅವರಂತೂ ಯಾವುದೇ ಚರ್ಚೆಯಲ್ಲಿ ಪಾಲ್ಗೊಂಡಿಲ್ಲ. ಬಿಎಸ್ ಯಡಿಯೂರಪ್ಪನವರ ಪುತ್ರ, ಸಂಸದ ಬಿವೈ ರಾಘವೇಂದ್ರ ಅವರು ದಾಖಲೆಯ ಪ್ರಮಾಣದಲ್ಲಿ ಸಂಸತ್ತಿಗೆ ಚಕ್ಕರ್ ಹೊಡೆದಿದ್ದಾರೆ.

ಹಾವೇರಿ ಸಂಸದ ಶಿವಕುಮಾರ್ ಉದಾಸಿ ಅವರು ರಾಜ್ಯದ 28 ಸಂಸದರ ಪೈಕಿ ಅಧಿವೇಶನದಲ್ಲಿ ಹೆಚ್ಚು ಉಪಸ್ಥಿತರಾಗಿದ್ದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆನಂತರದ ಸ್ಥಾನದಲ್ಲಿ ಅನಂತಕುಮಾರ್ ( ಬೆಂಗಳೂರು ದಕ್ಷಿಣ ಸಂಸದ ) ಮತ್ತು ರಮೇಶ್ ಜಿಗಜಿಣಗಿ ಕಾಣಿಸಿಕೊಳ್ಳುತ್ತಾರೆ. ಅಂದಹಾಗೆ 15ನೆಯ ಲೋಕಸಭೆಯಲ್ಲಿ ಇದುವರೆಗೂ 15 ಅಧಿವೇಶನಗಳು ನಡೆದಿವೆ. ಇನ್ನೊಂದು ನಾಳೆಯಿಂದ ಆರಂಭ.

ಡಿವಿ ಸದಾನಂದ ಗೌಡರು, ಎಚ್ ಡಿ ಕುಮಾರಸ್ವಾಮಿ, ಚಲುವರಾಯ ಸ್ವಾಮಿ ಅವರುಗಳು ನಡುಗಾಲದಲ್ಲೇ ಸಂಸತ್ತಿಗೆ ಗುಡ್ ಬೈ ಹೇಳಿದ್ದಾರೆ. ಆ ಸ್ಥಾನಗಳನ್ನೆಲ್ಲಾ ಕಾಂಗ್ರೆಸ್ ಪಕ್ಷವೇ ಬಾಚಿಕೊಂಡಿದೆ.

ಕೇಂದ್ರ ಸಚಿವರಾದವರು ಅಟೆಂಡನ್ಸ್ ರಿಜಿಸ್ಟರಿಗೆ ಸಹಿ ಹಾಕುವಂತಿಲ್ಲ. ಹಾಗಾಗಿ ಸಚಿವರುಗಳ ಹಾಜರಾತಿ ಎಷ್ಟಿತ್ತು ಎಂಬುದು ದಾಖಲೆಗೆ ಸಿಗುವುದಿಲ್ಲ!

ರಾಜ್ಯದ ಉಳಿದ ಸಂಸದರೆಂದರೆ ಶಿವರಾಮೇಗೌಡ, ಪಿಸಿ ಸಿದ್ದನಗೌಡರ್, ಎನ್ ಧ್ರುವನಾರಾಯಣ, ಅನಂತಕುಮಾರ್ ಹೆಗಡೆ, ಪಿಸಿ ಮೋಹನ್, ಜಿಎಸ್ ಬಸವರಾಜ್, ನಳೀನ್ ಕುಮಾರ್ ಕಟೀಲ್, ಜೆ ಶಾಂತಾ, ಜಿಎಂ ಸಿದ್ದೇಶ್, ಡಿಬಿ ಚಂದ್ರೇಗೌಡ, ಜನಾರ್ದನ ಸ್ವಾಮಿ, ಎಚ್ ವಿಶ್ವನಾಥ್, ಸಣ್ಣ ಫಕೀರಪ್ಪ, ಸುರೇಶ್ ಅಂಗಡಿ, ಎನ್ ಧರಂ ಸಿಂಗ್ ಮತ್ತು ರಮೇಶ್ ಕತ್ತಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+