ತೃತೀಯರಂಗ ಉದಯಕ್ಕೆ 11 ಪಕ್ಷಗಳ ಸಾಥ್
ನವದೆಹಲಿ, ಫೆ.6: ಮುಂಬರುವ ಲೋಕಸಭೆ ಚುನಾವಣೆಗೆ ಮೊದಲೇ ತೃತೀಯರಂಗ ಉದಯಿಸುವ ಸೂಚನೆಗಳು ದೊರಕಿದ್ದು, ಕೊನೆ ಪ್ರಯತ್ನ ಎಂಬಂತೆ 11 ಕಾಂಗ್ರೆಸೇತರ ಮತ್ತು ಬಿಜೆಪಿಯೇತರ ಪಕ್ಷಗಳು ಸಂಸತ್ತಿನಲ್ಲಿ ಒಂದಾಗಿ ಪರಸ್ಪರ ಕೈಜೋಡಿಸಿವೆ. ಅಕ್ಟೋಬರ್ 23 ರ ಸಭೆ ನಂತರ ಇದು ಮಹತ್ವದ ಸಭೆ ಎಂದು ಜೆಡಿಯು ಮುಖ್ಯಸ್ಥ ಶರದ್ ಯಾದವ್ ಘೋಷಿಸಿದ್ದಾರೆ.
ನಾಲ್ಕು ಎಡಪಕ್ಷಗಳು, ಸಮಾಜವಾದಿ ಪಕ್ಷ, ಜೆಡಿಯು, ಎಡಿಎಂಕೆ, ಎಜಿಪಿ, ಜಾರ್ಖಂಡ್ ವಿಕಾಸ್ ಮೋರ್ಚಾ, ಜೆಡಿಎಸ್ ಮತ್ತು ಬಿಜೆಡಿ ಪಕ್ಷಗಳ ನಾಯಕರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಈ ಗುಂಪಿನ ಘೋಷಣೆ ಮಾಡಲಾಯಿತು. ಕಳೆದ ಅಕ್ಟೋಬರ್ ನಲ್ಲಿ ಕೋಮುವಾದಿ ವಿರೋಧಿ ಸಮಾವೇಶವೊಂದರಲ್ಲಿ ಪಕ್ಷದ ನಾಯಕರು ಒಂದುಗೂಡಿದ ನಂತರ 'ಇದು ಮೊದಲ ಹೆಜ್ಜೆ' ಎಂದು ಸಿಪಿಎಂ ನಾಯಕ ಸೀತಾರಾಂ ಯೆಚೂರಿ ಮತ್ತು ಜೆಡಿಯು ಅಧ್ಯಕ್ಷ ಶರದ್ ಯಾದವ್ ಮತ್ತೆ ಹೇಳಿದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಎಂ.ತಂಬಿದೊರೈ (ಎಡಿಎಂಕೆ), ಬಸುದೇವ ಆಚಾರ್ಯ (ಸಿಪಿಎಂ), ಕೆ.ಸಿ.ತ್ಯಾಗಿ (ಜೆಡಿಯು), ಜಯ ಪಾಂಡಾ (ಬಿಜೆಡಿ), ಬೀರೇನ್ ಬೈಶ್ಯಾ (ಎಜಿಪಿ), ರಾಂಗೋಪಾಲ್ ಯಾದವ್ (ಎಸ್ ಪಿ), ಡಿ.ರಾಜಾ (ಸಿಪಿಐ), ಮನೋಹರ್ ತಿರ್ಕೆ (ಆರ್ ಎಸ್ ಪಿ) ಮತ್ತು ವರುಣ್ ಮುಖರ್ಜಿ (ಫಾರ್ವರ್ಡ್ ಬ್ಲಾಕ್) ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು. ಈ ಎಲ್ಲಾ ಪಕ್ಷಗಳ ಸ್ಥಾನ ಸೇರಿಸಿದರೆ 543 ಲೋಕಸಭೆ ಸ್ಥಾನಗಳಲ್ಲಿ 92 ಸ್ಥಾನಗಳನ್ನು ಹೊಂದಿವೆ.

ಈ ಬೆಳವಣಿಗೆಯನ್ನು ತೃತೀಯರಂಗ ಎಂದು ಕರೆಯಬಹುದೇ ಎಂದಾಗ, 'ಜನಸಾಮಾನ್ಯರಿಗೆ ತೊಂದರೆಯಾಗುತ್ತಿರುವ ವಿಷಯಗಳನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸುವ ಪ್ರಾಥಮಿಕ ಉದ್ದೇಶದಿಂದ ಈ ಗುಂಪನ್ನು ರಚಿಸಲಾಗಿದೆ' ಎಂದು ಯೆಚೂರಿ ತಿಳಿಸಿದರು.
ಸಂಸತ್ತಿನಲ್ಲಿ ಆರು ಭ್ರಷ್ಟಾಚಾರ ವಿರೋಧಿ ಮಸೂದೆಗಳನ್ನು ಅಂಗೀಕರಿಸಲು ಕೇಂದ್ರ ಸರಕಾರ ಪ್ರಯತ್ನಿಸುತ್ತಿರುವ ಬಗ್ಗೆ ಪ್ರಸ್ತಾಪಿಸಿದ ಅವರು, ಯಾವುದೇ ಮಸೂದೆಗಳು ಅಂಗೀಕಾರವಾಗದಂತೆ 11 ಪಕ್ಷಗಳು ನೋಡಿಕೊಳ್ಳುತ್ತವೆ. ಮುಂಬರುವ ಲೋಕಸಭೆ ಚುನಾವಣೆಯ ಪ್ರಚಾರಕ್ಕೆ ಈ ಮಸೂದೆಗಳನ್ನು ಯುಪಿಎ ಸರಕಾರ ಬಳಸಿಕೊಳ್ಳುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.












Click it and Unblock the Notifications