365 ದಿನವೂ ಮೈಸೂರು ಸ್ವಚ್ಛ; ಉಸ್ತುವಾರಿಗೆ ವಿಭಾಗವಾರು ತಂಡ
ಮೈಸೂರು, ಫೆಬ್ರವರಿ 8: "ವರ್ಷದ 365 ದಿನಗಳಲ್ಲೂ ಮೈಸೂರು ಸ್ವಚ್ಛವಾಗಿರಬೇಕು ಎಂಬ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದೇವೆ. ಈ ನಿಟ್ಟಿನಲ್ಲಿ ವಿಭಾಗವಾರು ತಂಡ ಮಾಡಿ ಜವಾಬ್ದಾರಿ ಕೊಡಲಾಗಿದೆ" ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಹೇಳಿದರು.
ಮೈಸೂರು ಹೊರವರ್ತುಲ ರಸ್ತೆಯ ಸ್ವಚ್ಛತೆ ಪರಿಶೀಲನೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, "ಮುಡಾ, ಕಾರ್ಪೋರೇಶನ್, ಲೋಕೋಪಯೋಗಿ, ಜಲಮಂಡಳಿ, ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ಪ್ರಾಧಿಕಾರ ಸೇರಿದಂತೆ ಇನ್ನಿತರ ಇಲಾಖೆಗಳಿಗೆ ಜವಾಬ್ದಾರಿ ವಹಿಸಲಾಗಿದೆ" ಎಂದರು.
ಸಾಂಸ್ಕೃತಿಕ ನಗರಿಯಲ್ಲಿ ಇನ್ನು ಉಗುಳಿದರೆ, ಕಸ ಎಸೆದರೆ ದಂಡ ಖಚಿತ
"ಸಾರ್ವಜನಿಕರು ಸಹ ಕಸ ಹಾಕಬಾರದು. ಇನ್ನು ರಸ್ತೆ ಹಾಗೂ ರಸ್ತೆ ಪಕ್ಕ ಎಲ್ಲೆಂದರಲ್ಲಿ ಕಸ ಹಾಕುವುದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಬೆಂಗಳೂರು ಮಾದರಿಯಲ್ಲಿ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಅಕ್ರಮವಾಗಿ ಕಸ ಸುರಿದರೆ ಲಾರಿ ಮಾಲೀಕರಿಗೆ ದಂಡ ಹಾಕಿ ಜೈಲಿಗೆ ಕಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಪೊಲೀಸ್ ಆಯುಕ್ತರಿಗೆ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ" ಎಂದು ಸಚಿವರು ತಿಳಿಸಿದರು.
"ಕಸ ವಿಲೇವಾರಿಗೆ ಜಾಗ ನೋಡಲು ಪಾಲಿಕೆ ಆಯುಕ್ತರಿಗರಿಗೆ ಸೂಚನೆ ನೀಡಲಾಗಿದೆ. ಈಗಾಗಲೇ ಕೆಲವು ಜಾಗಗಳನ್ನು ನಾವು ಗುರುತಿಸಿದ್ದೇವೆ. ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ಈಗ ಹೊರವರ್ತುಲ ರಸ್ತೆಯ ಎಲ್ಲ ಕಡೆ ವೀಕ್ಷಣೆ ಮಾಡಲಾಗಿದೆ. ಎಲ್ಲ ಇಲಾಖೆಯವರು ಅವರವರಿಗೆ ವಹಿಸಲಾದ ಜವಾಬ್ದಾರಿಯನ್ನು ನಿರ್ವಹಣೆ ಮಾಡಲಿದ್ದಾರೆ" ಎಂದರು.
ಕೊಡಗಿನಲ್ಲೊಂದು ಪ್ರಸಂಗ; ರಸ್ತೆ ಬದಿ ಕಸ ಎಸೆದ ಪ್ರವಾಸಿಗರಿಗೆ ತಕ್ಕ ಪಾಠ
ಕಸದ ಸಮಸ್ಯೆಗೆ ಶಾಶ್ವತ ಪರಿಹಾರ
"ಮೈಸೂರಿನಲ್ಲಿ ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ. ಹೀಗಾಗಿ ರಸ್ತೆಗಳ ಹಾಗೂ ಸುತ್ತಮುತ್ತಲ ಸ್ವಚ್ಛತೆ ಬಹಳ ಮುಖ್ಯವಾಗಿದೆ. ರಸ್ತೆಯಲ್ಲಿ ಎಲ್ಲೆಂದರಲ್ಲಿ ಡಬ್ರೀಸ್ ಸುರಿಯುವುದಕ್ಕೂ ಕಡಿವಾಣ ಬೀಳಬೇಕಿದೆ. ಈ ತ್ಯಾಜ್ಯಗಳನ್ನು ಸುರಿಯಲು ಸರ್ಕಾರಿ ಜಾಗವನ್ನು ಗುರುತಿಸಲಾಗುತ್ತದೆ" ಎಂದು ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು.
ರಿಂಗ್ ರಸ್ತೆ ಹಸಿರಾಗಿ ಕಾಣಲಿ
"ಮೈಸೂರಿನಲ್ಲಿ ಹಸಿರೀಕರಣಕ್ಕೆ ಒತ್ತು ಕೊಡಬೇಕು. ರಸ್ತೆ ಪಕ್ಕದಲ್ಲಿ ಒಣಗಿರುವ ಹಾಗೂ ಗಿಡವಿಲ್ಲದ ಜಾಗಗಳಲ್ಲಿ ಸಸಿಗಳನ್ನು ನೆಡುವ ಮೂಲಕ ಹಸಿರೀಕರಣ ಮಾಡಬೇಕು. ತಕ್ಷಣವೇ ರಿಂಗ್ ರಸ್ತೆಯ ಪೂರ್ತಿ 42 ಕಿ. ಮೀ. ವ್ಯಾಪ್ತಿಯಲ್ಲಿಯೂ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು" ಎಂದು ಸಚಿವರು ಅರಣ್ಯ ಇಲಾಖೆ, ಮುಡಾ ಹಾಗೂ ಕಾರ್ಪೊರೇಷನ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸೋಮಶೇಖರ್ ಭೇಟಿ
ಮೈಸೂರಿನ ಹೊರವರ್ತುಲ ರಸ್ತೆಯಲ್ಲಿ ಸ್ವಚ್ಛತೆ ಪರಿಶೀಲನೆಯನ್ನು ಸಚಿವರು ನಡೆಸಿದರು. ಈ ಸಂದರ್ಭದಲ್ಲಿ ಶಾಸಕರುಗಳಾದ ಜಿ. ಟಿ. ದೇವೇಗೌಡ, ತನ್ವೀರ್ ಸೇಠ್, ಮುಡಾ ಅಧ್ಯಕ್ಷ ಎಚ್. ವಿ. ರಾಜೀವ್, ಪೊಲೀಸ್ ಆಯುಕ್ತ ಚಂದ್ರಗುಪ್ತ, ಡಿಸಿಪಿ ಪ್ರಕಾಶ್ ಗೌಡ, ಕಾರ್ಪೋರೇಶನ್ ಆಯುಕ್ತ ಗುರುದತ್ತ ಹೆಗಡೆ, ಮುಡಾ ಆಯುಕ್ತ ನಟೇಶ್ ಸೇರಿದಂತೆ ಅಧಿಕಾರಿಗಳು ಜೊತೆಗಿದ್ದರು.
ವಿವಿಧ ಪ್ರದೇಶಗಳಿಗೆ ಭೇಟಿ
ಬಳಿಕ ಸಚಿವ ಸೋಮಶೇಖರ್ ವರ್ತುಲ ರಸ್ತೆಯ ದೇವೇಗೌಡ ಸರ್ಕಲ್, ವಿಟಿಯು ಕಾಲೇಜು ಬಳಿ, ಆಲನಹಳ್ಳಿ ಲೇಔಟ್ ಸರ್ಕಲ್, ಜೆಪಿ ನಗರ ರಿಂಗ್ ರೋಡ್, ಎಚ್.ಡಿ.ಕೋಟೆ ಮಾರ್ಗದ ರಿಂಗ್ ರಸ್ತೆ ಸೇರಿದಂತೆ ಎಲ್ಲ ಸಂಪೂರ್ಣ 42 ಕಿ.ಮೀ. ವ್ಯಾಪ್ತಿಯಲ್ಲಿಯೂ ಸಚಿವರು ತೆರಳಿ ಪರಿಶೀಲನೆ ನಡೆಸಿದರು.