ರಸ್ತೆಯಲ್ಲಿ ಬಿದ್ದ ಕಂತೆ ಕಂತೆ ನೋಟನ್ನು ಪೊಲೀಸರಿಗೆ ಒಪ್ಪಿಸಿದರು
ಮೈಸೂರು, ಆಗಸ್ಟ್ 5: ಹಣ ಸಿಕ್ಕರೆ ಸಾಕು, ಸಂತೋಷದಿಂದ ಜೇಬಿಗಿಳಿಸಿ ಸುಮ್ಮನಾಗುವವರೇ ಹೆಚ್ಚು. ಆದರೆ ಇವರು ಹಾಗೆ ಮಾಡಿಲ್ಲ. ರಸ್ತೆಯಲ್ಲಿ ಹೋಗುತ್ತಿದ್ದಾಗ ಸಿಕ್ಕಿದ ರಾಶಿ ಹಣವನ್ನು ಅತ್ತಿತ್ತ ನೋಡಿ ಜೇಬಿಗಿಳಿಸಲಿಲ್ಲ. ಬದಲಿಗೆ ಆ ಹಣವನ್ನು ಪ್ರಾಮಾಣಿಕವಾಗಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
ಹೌದು, ಭಾನುವಾರ ರಸ್ತೆಯಲ್ಲಿ ಸ್ಕೂಟರಿನಲ್ಲಿ ಹೋಗುವಾಗ ಸಿಕ್ಕ 60 ಸಾವಿರ ರೂಪಾಯಿಯನ್ನು ಮೈಸೂರಿನ ಯುವಕನೊಬ್ಬ ಪೊಲೀಸರಿಗೆ ಒಪ್ಪಿಸಿದ್ದಾನೆ.
ಕೆ.ಆರ್.ಮೊಹಲ್ಲಾದ ತೊಗರಿ ಬೀದಿ ನಿವಾಸಿ ಆರ್.ಅನಿರುದ್ಧ ಎಂಬುವವರು ದೇವರಾಜ ಪೊಲೀಸ್ ಠಾಣೆಗೆ ಹಣ ನೀಡಿ ಪ್ರಾಮಾಣಿಕತೆ ಮೆರೆದಿದ್ದಾರೆ. ಅನಿರುದ್ಧ್ ಸ್ಕೂಟರಿನಲ್ಲಿ ಹೋಗುವಾಗ ಜನನಿಬಿಡ ರಸ್ತೆಯಲ್ಲಿ ಮಾರ್ಗ ಮಧ್ಯೆ ರೂ. 2,000 ನೋಟುಗಳು ಬಿದ್ದಿರುವುದನ್ನು ಕಂಡಿದ್ದಾರೆ. ಕೂಡಲೇ ಬೈಕ್ ನಿಲ್ಲಿಸಿ ಕಟ್ಟನ್ನು ತೆಗೆದಾಗ ಅದರಲ್ಲಿ 60 ಸಾವಿರದ ಜತೆಗೆ ಒಂದು ಮೊಬೈಲ್ ಸಂಖ್ಯೆ ಸಹ ಇತ್ತು. ಆ ಸಂಖ್ಯೆಗೆ ಎಷ್ಟು ಕರೆ ಮಾಡಿದರೂ ಸಂಪರ್ಕ ಸಿಗಲಿಲ್ಲ. ನಂತರ, ದೇವರಾಜ ಠಾಣೆಗೆ ಆ ಹಣವನ್ನು ನೀಡಿದ್ದಾರೆ.

ಹಣ ಬೀಳಿಸಿಕೊಂಡ ಕುರಿತು ಸಂಬಂಧಿಸಿದ ವ್ಯಕ್ತಿಯನ್ನು ಪತ್ತೆ ಹಚ್ಚಿ ಹಣವನ್ನು ಅವರಿಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ಅವರಿಗೆ ಭರವಸೆ ನೀಡಿದ್ದಾರೆ. ಅಲ್ಲದೇ ಅವರಿಂದ ಹಣ ಪಡೆದ ಬಗ್ಗೆ ಪೊಲೀಸರು ಸ್ವೀಕೃತಿ ಪತ್ರವನ್ನು ನೀಡಿದ್ದು, ಇವರ ಕಾರ್ಯದ ಕುರಿತು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.












Click it and Unblock the Notifications