ಮೈಸೂರಿನಲ್ಲಿ ಕುಡಿದ ಮತ್ತಿನಲ್ಲಿ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ ಯುವಕರು ಈಗ ಕಂಬಿ ಹಿಂದೆ
ಮೈಸೂರು, ಅಕ್ಟೋಬರ್. 23: ಮದ್ಯದ ನಶೆಯಲ್ಲಿ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಕೊಲೆ ಬೆದರಿಕೆ ಒಡ್ಡಿದ ಮೂವರು ಯುವಕರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ ಉದಯಗಿರಿ ಪೊಲೀಸರು.
ಮೈಸೂರು ನಗರದ ಎನ್.ಆರ್.ಮೊಹಲ್ಲಾ ನಿವಾಸಿಗಳಾದ ತಬ್ಜಲ್, ವಾಸಿಂ ಹಾಗೂ ಮುಜಾಹಿದ್ ಬಂಧಿತ ಆರೋಪಿಗಳು. ಕಳೆದ ಶನಿವಾರ ರಾತ್ರಿ 10.45ರ ವೇಳೆಯಲ್ಲಿ ಉದಯಗಿರಿ ಠಾಣೆ ಪೊಲೀಸ್ ಪೇದೆ ವೆಂಕಟರಾಮುಲು ಹಾಗೂ ಸಿಬ್ಬಂದಿ ರಾತ್ರಿ ಗಸ್ತಿನಲ್ಲಿದ್ದರು.
ವಿಡಿಯೋ: ಪೊಲೀಸ್ ಮೇಲೆ ನಿರ್ದಯ ಹಲ್ಲೆ ನಡೆಸಿದ ಬಿಜೆಪಿ ಕೌನ್ಸಿಲರ್
ಇದೇ ವೇಳೆ ಕಲ್ಯಾಣಗಿರಿ ವಾಟರ್ ಟ್ಯಾಂಕ್ ಬಳಿ ಇರುವ ಮಾದೇವಿ ಎಂಬುವವರ ಮಳಿಗೆ ಎದುರಿಗಿರುವ ಶಾಲೆಯ ಬಳಿ ಖಾಲಿ ಜಾಗದಲ್ಲಿ ಐದು ಮಂದಿ ಯುವಕರು ಮದ್ಯ ಸೇವಿಸುತ್ತಾ ಜೋರಾಗಿ ಮಾತನಾಡುತ್ತಾ ಕುಳಿತಿದ್ದರು.
ಆಗ ಸ್ಥಳಕ್ಕೆ ತೆರಳಿದ ಪೊಲೀಸರು ಈ ಹೊತ್ತಿನಲ್ಲಿ ಇಲ್ಲಿ ಕುಳಿತು ಏಕೆ ಗಲಾಟೆ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಇದರಿಂದ ಕೋಪಗೊಂಡ ಯುವಕರು ಪೊಲೀಸರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ವಿಚಾರವನ್ನು ಮೊಬೈಲ್ ಮೂಲಕ ಮೇಲಾಧಿಕಾರಿಗೆ ತಿಳಿಸಲು ಹೋದ ಸಂದರ್ಭದಲ್ಲಿ ವಾಸಿಂ ಎಂಬಾತ ಏಕಾಏಕಿ ವೆಂಕಟರಾಮುಲು ಅವರ ಎಡಗೈಯನ್ನು ಬಲವಾಗಿ ಹಿಡಿದುಕೊಂಡು ತಿರುಚಿದ್ದಾನೆ.
ಬಂಟ್ವಾಳದಲ್ಲಿ ಮಹಿಳಾ ಎಸ್ ಐ ಜೊತೆ ಅಸಭ್ಯ ವರ್ತನೆ: ಐವರು ಯುವಕರ ಬಂಧನ
ನಂತರ ಮೊಬೈಲ್ ಅನ್ನು ಬಲವಂತವಾಗಿ ಕಿತ್ತುಕೊಂಡು ನೆಲಕ್ಕೆ ಎಸೆದಿದ್ದಾರೆ. ಅಷ್ಟೇ ಅಲ್ಲ ಅಕ್ಬರ್ ಮತ್ತು ಮುಜಾಹೀದ್ ಪೊಲೀಸ್ ಶರ್ಟ್ ಹಿಡಿದುಕೊಂಡು ಹಲ್ಲೆ ನಡೆಸಿದ್ದಾರೆ. ನಂತರ ವಾಸಿಂ ಅಲ್ಲೇ ಬಿದ್ದಿದ್ದ ಒಂದು ಕಲ್ಲನ್ನು ಎತ್ತಿಕೊಂಡು ನಿಮ್ಮಿಬ್ಬರನ್ನು ಇದೇ ಕಲ್ಲಿನಿಂದ ಹೊಡೆದು ಸಾಯಿಸಿಬಿಡುತ್ತೇನೆ ಎಂದು ಕೊಲೆ ಬೆದರಿಕೆ ಹಾಕಿದ್ದಾನೆ.
ಗೃಹ ಸಚಿವ ಪರಮೇಶ್ವರ್ಗೆ ಖಡಕ್ ಎಚ್ಚರಿಕೆ ನೀಡಿದ ಪೊಲೀಸ್ ಸಂಘ
ಈ ಸಂಬಂಧ ವೆಂಕಟರಾಮುಲು ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಬೆಳಗ್ಗೆ ಕಾರ್ಯಾಚರಣೆ ನಡೆಸಿ, ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಉಳಿದ ಇಬ್ಬರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.