ಮೊದಲ ದಸರಾಗೆ ಬಂದ 'ಅಶ್ವತ್ಥಾಮ' ಅಭಿಮನ್ಯು ಉತ್ತರಾಧಿಕಾರಿ?
ಮೈಸೂರು, ಸೆಪ್ಟೆಂಬರ್ 13; ಈ ಬಾರಿಯ ಸರಳ ಮೈಸೂರು ದಸರಾದಲ್ಲಿ 'ಅಶ್ವತ್ಥಾಮ' ಆನೆಯೇ ಜಂಬೂಸವಾರಿಯ ಪ್ರಮುಖ ಆಕರ್ಷಣೆ. ಪ್ರತಿವರ್ಷ ನಾಡಹಬ್ಬ ದಸರಾದಲ್ಲಿ ಭಾಗವಹಿಸಲು ಬರುವ ಆನೆಗಳಲ್ಲಿ ಹೊಸ ಸದಸ್ಯನಂತೂ ಇದ್ದೆ ಇರುತ್ತದೆ. ಅಂತೆಯೇ ಈ ವರ್ಷದ ಅಚ್ಚರಿ ಎಂದರೆ ಅದು ಅಶ್ವತ್ಥಾಮ.
ಕಟ್ಟುಮಸ್ತಾಗಿರುವ ದೇಹ, ಸಮತಟ್ಟಾದ ಮತ್ತು ಅಗಲವಾದ ಹೆಗಲು. ಹೇಳಿದ್ದನ್ನು ಕೇಳುವ ಗುಣವಿದೆ ಎಂಬುದೇ ಅಶ್ವತ್ಥಾಮನ ವಿಶೇಷ. ಪುಂಡನಾಗಿ ಸೆರೆ ಸಿಕ್ಕ ಆನೆ ಕೇವಲ ನಾಲ್ಕನೇ ವರ್ಷದಲ್ಲಿ ನಾಡ ಹಬ್ಬದಲ್ಲಿ ಭಾಗವಹಿಸುತ್ತಿದೆ. ಅಶ್ವತ್ಥಾಮ ಇಲ್ಲಿ ಪಾಸಾದರೆ ಅಂಬಾರಿ ಹೊರುವ 'ಅಭಿಮನ್ಯು'ವಿನ ಉತ್ತರಾಧಿಕಾರಿ ಎಂದೇ ಹೇಳಲಾಗುತ್ತಿದೆ.
ಇತರೆ ಆನೆಗಳಂತೆ ಅಶ್ವತ್ಥಾಮನೂ ಕೂಡ ಪುಂಡ. ಈತನನ್ನು 2017ರಲ್ಲಿ ಹಾಸನ ವಿಭಾಗದಲ್ಲಿ ಸೆರೆಹಿಡಿಯಲಾಯಿತು. 34 ವರ್ಷದ ಅಶ್ವತ್ಥಾಮ ಹೊಡ್ಡ ಹರವೆ ಆನೆ ಶಿಬಿರದ ಸದಸ್ಯ. 2.85 ಮೀಟರ್ ಎತ್ತರವಿದ್ದಾನೆ. 3.46 ಮೀಟರ್ ಉದ್ದ ಇದ್ದಾನೆ. ಈತನ ತೂಕ ಸುಮಾರು 3630 ಕೆಜಿ.

ಬಾಡಿ ಬಿಲ್ಡರ್; ಕಟ್ಟುಮಸ್ತಾಗಿರುವ ಈ ಆನೆಯನ್ನು ಪ್ರೀತಿಯಿಂದ 'ಬಾಡಿ ಬಿಲ್ಡರ್' ಎಂದು ಕೆಲವರು ಕರೆಯುತ್ತಾರೆ. ಅಶ್ವತ್ಥಾಮ 'ದ್ರೋಣ' ಆನೆಯಂತೆ ಅಗಲವಾದ ಮೈಕಟ್ಟು ಹೊಂದಿದ್ದಾನೆ. ಅಂಬಾರಿಯನ್ನು ಹೊರಲು ಹೆಗಲು ಸಮತಟ್ಟಾಗಿದೆ.
ಇದರಿಂದ ಎಷ್ಟು ದೂರ ಬೇಕಾದರೂ ಅಂಬಾರಿಯನ್ನು ಅಲುಗಾಡದಂತೆ ಹೊತ್ತೊಯ್ಯಬಹುದು. ಒಂದೇ ಆಕೃತಿಯಲ್ಲಿರುವ ಎರಡು ದಂತಗಳು ಕೂಡ ಈ ಆನೆಯ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.
ಆನೆಗಳ ಆಯ್ಕೆ ಹೇಗೆ?; ಸಾಮಾನ್ಯವಾಗಿ ದಸರಾ ಬಂದರೆ ಸಾಕು ಅರಣ್ಯ ಇಲಾಖೆಯವರು ಆನೆಗಳನ್ನು ಆಯ್ಕೆ ಮಾಡಿ ಕಳುಹಿಸುತ್ತಾರೆ. ಒಂದು ವರ್ಷದಿಂದಲೇ ಯಾರನ್ನು ದಸರೆಗೆ ಕಳುಹಿಸಬಹುದು ಎನ್ನುವ ಲೆಕ್ಕಾಚಾರ ನಡೆಯುತ್ತದೆ. ಪ್ರತಿ ಶಿಬಿರಕ್ಕೆ ಅಧಿಕಾರಿಗಳು, ವೈದ್ಯರು ತೆರಳಿ ಪರಿಶೀಲನೆ ನಡೆಸುತ್ತಾರೆ. ಆನೆಗಳ ವಯಸ್ಸು, ಅದರ ಆರೋಗ್ಯ, ಚಟುವಟಿಕೆ, ಸ್ವಭಾವ ಎಲ್ಲವನ್ನೂ ಅಳೆದು ತೂಗಿ ಕೊನೆಗೆ ಗಜಪಡೆಯನ್ನು ಆಯ್ಕೆ ಮಾಡಲಾಗುತ್ತದೆ.
ಯಾರು ಉತ್ತರಾಧಿಕಾರಿ?; ಮೈಸೂರು ದಸರಾದದಲ್ಲಿ ಭಾಗವಹಿಸುವ ಎಲ್ಲಾ ಆನೆಗಳಿಗೆ ಅಂಬಾರಿ ಹೊರುವ ಗುಣಗಳು ಇರುವುದಿಲ್ಲ. ದಸರೆಯಲ್ಲಿ ಗಜಪಡೆಯನ್ನು ಮುನ್ನಡೆಸುವ ನಾಯಕನಿಗೆ ವಿಶೇಷ ಗೌರವ. ಇಲ್ಲಿಯವರೆಗೆ ಬಲರಾಮ, ದ್ರೋಣ, ಅರ್ಜುನ ಮುಂತಾದ ಆನೆಗಳು ಮೈಸೂರಿಗರ ಕಣ್ಮಣಿಗಳಾಗಿವೆ.
ಅರ್ಜುನನ ನಂತರ ಯಾರು ಎನ್ನುವ ಆತಂಕವನ್ನು ಅಭಿಮನ್ಯು ಕಳೆದ ವರ್ಷ ನೀಗಿಸಿದ್ದಾನೆ. ಈ ಬಾರಿಯೂ ನಾಡದೇವತೆಯನ್ನು ಹೊತ್ತ ಅಂಬಾರಿ ಹೊರುವ ಜವಾಬ್ದಾರಿ ಅರ್ಜುನದ್ದೇ. ಅರ್ಜುನನ ವಯಸ್ಸು ಈಗ 56, ಇನ್ನು ಕೇವಲ ಮೂರು ಇಲ್ಲವೆ ನಾಲ್ಕು ವರ್ಷ ಅಂಬಾರಿ ಹೊರಬಹುದು. ನಂತರ ಯಾರು ಎನ್ನುವುದು ಪ್ರಶ್ನೆಯಾಗಿದೆ.
ಈ ಕಾರಣಕ್ಕೆ ಪ್ರತಿ ವರ್ಷ ಮೈಸೂರು ದಸರಾಗೆ ಗಜಪಡೆಯನ್ನು ಆಯ್ಕೆ ಮಾಡುವಾಗ ಹೊಸ ಆನೆಗಳನ್ನು ಸೇರಿಸಿಕೊಂಡು ಪರಿಶೀಲಿಸಲಾಗುತ್ತಿದೆ. ಈ ಬಾರಿಯ ದಸರಾದಲ್ಲಿ 'ಅಶ್ವತ್ಥಾಮ' ಹೊಸಬ.
ಗಜಪಯಣಕ್ಕೆ ಚಾಲನೆ; 2021ರ ಮೈಸೂರು ದಸರಾದ ಗಜಪಯಣಕ್ಕೆ ಇಂದು ಬೆಳಗ್ಗೆ 9.30ಕ್ಕೆ ಹುಣಸೂರು ತಾಲೂಕಿನ ವೀರನಹೊಸಳ್ಳಿ ಗೇಟ್ ಬಳಿ ಚಾಲನೆ ದೊರೆಯಲಿದೆ. ಅಂಬಾರಿ ಹೊರುವ ಅಭಿಮನ್ಯು ನೇತೃತ್ವದ ಗಜಪಡೆಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ, ಗಜಪಯಣಕ್ಕೆ ಚಾಲನೆ ನೀಡಲಾಗುತ್ತದೆ.
ಆನೆಗಳು ವೀರನಹೊಸಹಳ್ಳಿಯಿಂದ ಮೈಸೂರಿನ ಅರಣ್ಯ ಭನವನಕ್ಕೆ ಆಗಮಿಸಲಿದೆ. ಸೆಪ್ಟೆಂಬರ್ 16ರಂದು ಅರಣ್ಯ ಭವನದಲ್ಲಿ ಅರಣ್ಯ ಇಲಾಖೆ ವತಿಯಿಂದ ಆನೆಗಳಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ, ನಂತರ ಅರಮನೆಗೆ ಕರೆದುಕೊಂಡು ಹೋಗಲಾಗುತ್ತದೆ.
ಈ ಬಾರಿಯ ಮೈಸೂರು ದಸರಾದಲ್ಲಿ ಒಟ್ಟು 8 ಆನೆಗಳು ಪಾಲ್ಗೊಳ್ಳಲಿವೆ. ಗಜಪಡೆಗೆ ಕ್ಯಾಪ್ಟನ್ ಅಭಿಮನ್ಯು. ಉಳಿದಂತೆ ಗೋಪಾಲಸ್ವಾಮಿ, ಕಾವೇರಿ, ಧನಂಜಯ, ಅಶ್ವತ್ಥಾಮ, ಚೈತ್ರಾ, ಲಕ್ಷ್ಮಿ ಮತ್ತು ವಿಕ್ರಮ ಆನೆಗಳು ಪಾಲ್ಗೊಳ್ಳುತ್ತಿವೆ.












Click it and Unblock the Notifications