'ಚಾಮುಂಡೇಶ್ವರಿ ಅಭಿಸಾರಿಕೆ': ಯೋಗೇಶ್ ಮಾಸ್ಟರ್
ಮೈಸೂರು, ಏ.28: 'ನಮ್ಮದು ಜನಪದ ಸಂಸ್ಕೃತಿ, ಚಾಮುಂಡೇಶ್ವರಿ ಹಾಗೂ ನಂಜುಂಡೇಶ್ವರ ಜತೆಗಿದ್ದ ಸಂಬಂಧದ ಬಗ್ಗೆ ಹಳೆ ಮೈಸೂರಿನವರಿಗೆ ಗೊತ್ತೇ ಇದೆ ನಾನೇನು ಹೊಸದಾಗಿ ಹೇಳಿಲ್ಲ. ಚಾಮುಂಡೇಶ್ವರಿ ಹೇಗೆ ಅಭಿಸಾರಿಕೆಯಾಗಿದ್ದಳು ಎಂಬುದನ್ನು ಜಾನಪದ ಗೀತೆಗಳ ಮೂಲಕ ಹಾಡಲಾಗಿದೆ' ಹೀಗೆ ಲೇಖಕ ಯೋಗೇಶ್ ಮಾಸ್ಟರ್ ಅವರು ತಮ್ಮ ಮುಂದಿನ ಕೃತಿಯ ವಿವಾದಾತ್ಮಕ ಸಾಲುಗಳ ಬಗ್ಗೆ ಸಮರ್ಥನೆ ಮಾಡಿಕೊಂಡಿದ್ದಾರೆ.
ಢುಂಢಿ' ಕೃತಿ ಬರೆದು ವಿವಾದವೆಬ್ಬಿಸಿದ್ದ ಲೇಖಕ ಯೋಗೀಶ್ ಮಾಸ್ಟರ್ ಇದೀಗ ಮೈಸೂರಿನ ಇತಿಹಾಸದ ಬಗ್ಗೆ ಹೊಸ ಒಳನೋಟ ನೀಡುವ 'ಮಹಿಷಾಸುರ' ಕೃತಿ ರಚನೆಯಲ್ಲಿ ತೊಡಗಿದ್ದಾರೆ. ಡಿಸೆಂಬರ್ ವೇಳೆಗೆ ಹೊರಬರುವ ನಿರೀಕ್ಷೆ ಇರುವ ಈ ಕೃತಿ ಈಗಲೇ ಸದ್ದು ಮಾಡುತ್ತಿದೆ. ಹಿಂದೂ ಹಾಗೂ ಕ್ರೈಸ್ತ ಧರ್ಮಕ್ಕೆ ಸಂಬಂಧಪಟ್ಟ ಮತ್ತೂಂದು ಕೃತಿಯನ್ನು ಈಗಾಗಲೇ ರಚಿಸಿದ್ದು, ಅದು ಪ್ರಕಟಣೆಗೆ ಸಿದ್ಧವಾಗಿದೆಯಂತೆ ಎಂದು ಕನ್ನಡದ ಜನಪ್ರಿಯ ಪತ್ರಿಕೆ ಹಾಗೂ ಖಾಸಗಿ ಸುದ್ದಿವಾಹಿನಿ ಜತೆ ಮಾತನಾಡುತ್ತಾ ಯೋಗೇಶ್ ಮಾಸ್ಟರ್ ಹೇಳಿದ್ದಾರೆ.
ಚಾಮುಂಡೇಶ್ವರಿ ಹಾಗೂ ನಂಜುಂಡೇಶ್ವರ ದೇವರುಗಳ ನಡುವೆ ಇದ್ದ ಸಂಬಂಧವೇನು? ಮಹಿಸೂರಿನಲ್ಲಿ ಬುಡಕಟ್ಟು ಜನಾಂಗದ ಕಥೆಗೂ ಬೆಟ್ಟದ ತಾಯಿ ಚಾಮುಂಡಿಗೂ ಏನು ಸಂಬಂಧ? ಇದೆಲ್ಲದರ ಬಗ್ಗೆ ಯೋಗೇಶ್ ಮಾಸ್ಟರ್ ಹೇಳುವುದೇನು? ಮುಂದೆ ಓದಿ...

ಮೈಸೂರಿನ ಇತಿಹಾಸವನ್ನು ಪುನರ್ ರಚಿಸಿದ ಯೋಗೇಶ್
ನಾಗ ಕುಲದ ಮಹಿಷಾಸುರ ಎಂಬ ರಾಜ ಮಹಿಸೂರನ್ನು ಆಳಿದ್ದು ಅದೇ ಈಗ ಮೈಸೂರಾಗಿದೆ. ಇಂದು ಜನ ಆರಾಧಿಸುವ ಚಾಮುಂಡೇಶ್ವರಿ ದೇವಿ ಒಬ್ಬ ಬುಡಕಟ್ಟು ಮಹಿಳೆಯಾಗಿದ್ದಳು. ಮಹಿಸೂರಿನಲ್ಲಿ ಬುಡಕಟ್ಟು ಹಾಗೂ ರಾಜಮನೆತನದ ನಡುವೆ ಆರ್ಯರ ಮಧ್ಯ ಪ್ರವೇಶವಾಗುತ್ತದೆ. ಅವರು ಇವರಿಬ್ಬರ ನಡುವೆ ವೈಷಮ್ಯ ಸೃಷ್ಟಿಸುತ್ತಾರೆ. ಈ ದ್ವೇಷ ತಾರಕಕ್ಕೇರಿದಾಗ ಆ ಬುಡಕಟ್ಟು ಮಹಿಳೆ ಮಹಿಷಾಸುರನನ್ನು ಕೊಲ್ಲುತ್ತಾಳೆ. ಆಕೆಯನ್ನು ವೈಭವೀಕರಿಸಿ ಕಾಲಕ್ರಮೇಣ ಆಕೆ ಚಾಮುಂಡಿಯಾಗುತ್ತಾಳೆ. ಆ ನಂಬಿಕೆಗಳು ಬೆಳೆದು ಈಕೆಯೇ ಮೈಸೂರಿನ ಚಾಮುಂಡಿಯಾಗುತ್ತಾಳೆ ಎಂಬ ಹೊಸ ವಿಚಾರ ಇದರಲ್ಲಿದೆ.

ನಂಬಿಕೆಗಳನ್ನು ಪ್ರಶ್ನಿಸುವ ಕಾರ್ಯಕ್ಕೆ ಯತ್ನ
ಇತಿಹಾಸ ಗರ್ಭದಲ್ಲಿ ಮರೆಯಾಗಿರುವ ಇಂತಹ ವಿಚಾರಗಳನ್ನು ಬಗೆದು ತೆಗೆಯುವ ಕೆಲಸ ಯೋಗೇಶ್ ಅವರ ಕೃತಿಗಳಲ್ಲಿ ಕಾಣಬಹುದಾಗಿದೆ. ಸಿದ್ಧ ನಂಬಿಕೆಗಳನ್ನು ಪ್ರಶ್ನಿಸುವ, ಅದರ ಹಿಂದಿನ ಸತ್ಯವನ್ನು ಬಹಿರಂಗಪಡಿಸುವ ಯತ್ನ ನನ್ನದು ಎಂದು ಯೋಗೇಶ್ ಹೇಳಿಕೊಂಡಿದ್ದಾರೆ. ಯೋಗೇಶ್ ಅವರು ಸುಮಾರು 220 ಪುಟಗಳನ್ನು ಬರೆದಿದ್ದು ಇನ್ನೂ 200 ಪುಟಗಳಿಗೂ ಹೆಚ್ಚು ವಿಸ್ತರಿಸಲಾಗುವುದು ಎಂದಿದ್ದಾರೆ

ವಿಜಯ ದಶಮಿ ಹಬ್ಬದ ಸಂದರ್ಭದಲ್ಲಿ ಬಿಡುಗಡೆ
ಡಿಸೆಂಬರ್ ನಲ್ಲಿ ಈ ಕೃತಿ ಹೊರಬರುವ ಸಾಧ್ಯತೆಯಿದೆ. ಇದಕ್ಕೂ ಮುನ್ನ ವಿಜಯದಶಮಿ ದಸಾರಾ ವೇಳೆಗೆ ಪುಸ್ತಕದ ಮೊದಲ ಪ್ರತಿ ಸಿದ್ಧಪಡಿಸಿಕೊಂಡು ಪ್ರಚಾರ ಕಾರ್ಯ ಆರಂಭಿಸುವ ಸಿದ್ಧತೆಯಲ್ಲಿ ಯೋಗೇಶ್ ತೊಡಗಿದ್ದಾರೆ ಎಂಬ ಸುದ್ದಿಯಿದೆ. ಕೇವಲ ಪ್ರಚಾರದ ಆಸೆಗೆ ಈ ರೀತಿ ದೇವರುಗಳನ್ನು ಹೀಯಾಳಿಸಿ ಬರೆಯುವುದು ಇವರ ಉದ್ದೇಶ ಎಂಬ ಮಾತನ್ನು ಯೋಗೇಶ್ ಅಲ್ಲಗೆಳೆಯುತ್ತಾರೆ. ನಾನು ಹೊಸದನ್ನು ಹೇಳುತ್ತಿಲ್ಲ. ನಿರೂಪಣೆ ನನ್ನನ್ನು, ಕಥೆ ಹಳೆ ಮೈಸೂರಿನ ಜನಪದ ಸಾಹಿತ್ಯ ಆಧಾರ ಎಂದಿದ್ದಾರೆ.

ಹಿಂದು ದೇವತೆಗಳ ಬಗ್ಗೆ ಕೃತಿಯೇ ಏಕೆ?
ಕೇವಲ ಹಿಂದು ದೇವತೆಗಳ ಬಗ್ಗೆ ಕೃತಿ ಬರೆಯುವುದು ನನ್ನ ಉದ್ದೇಶವಲ್ಲ. ಇತಿಹಾಸದ ಸತ್ಯಾಸತ್ಯತೆ ಇಂದಿನ ಜನಾಂಗಕ್ಕೆ ತಿಳಿಯಪಡಿಸುವುದು ನನ್ನ ಉದ್ದೇಶ. ಹಿಂದು ಹಾಗೂ ಕ್ರಿಶ್ಚಿಯಾನಿಟಿಗೆ ಸಂಬಂಧಿಸಿದ 800 ಪುಟಗಳ 'ಪ್ರೇಮನಗರ- 1978 ಪ್ರೇಮಕಥೆ' ಪುಸ್ತಕ ರಚನೆ ಸಂಪೂರ್ಣವಾಗಿದೆ. ಕೋಮುವಾದಿಯೊಬ್ಬ ಹಿಂದು- ಕ್ರಿಶ್ಚಿಯನ್ನರು ಸಹಬಾಳ್ವೆ ನಡೆಸುತ್ತಿರುವ ಪ್ರದೇಶಕ್ಕೆ ಬಂದು ಆ ವಾತಾವರಣ ಕೆಡಿಸುತ್ತಾ ಹೋಗುತ್ತಾನೆ. ಕ್ರಿಸ್ತ ಹಾಗೂ ಕೃಷ್ಣನ ಪ್ರತಿರೂಪದಂತಿರುವ ವ್ಯಕ್ತಿಗಳು ಅದನ್ನು ಸರಿಪಡಿಸುತ್ತಾ ಹೋಗುವ ಕಥಾಹಂದರ ಇದರಲ್ಲಿದೆ ಎಂದಿದ್ದಾರೆ.












Click it and Unblock the Notifications