ಯೋಗ ದಿನಾಚರಣೆ ವೇದಿಕೆಯಲ್ಲಿ ಯದುವೀರ್ಗೆ ಏಕೆ ಅವಕಾಶವಿಲ್ಲ?
ಮೈಸೂರು, ಜೂನ್ 15 : ಮೈಸೂರು ಅರಮನೆ ಆವರಣದಲ್ಲಿ ಜೂನ್ 21ರಂದು ನಡೆಯಲಿರುವ ಯೋಗ ದಿನಾಚರಣೆ ಕಾರ್ಯಕ್ರಮದ ವೇದಿಕೆಯಲ್ಲಿ ರಾಜವಂಶಸ್ಥರಿಗೆ ಸ್ಥಾನ ಕಲ್ಪಿಸಿಲ್ಲ. ಇದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸರಕಾರದ ನಡೆಗೆ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ.
ಪ್ರಧಾನಿ ಮೋದಿ ಭಾಗವಹಿಸುವ ಅಂತರಾಷ್ಟ್ರೀಯ ಕಾರ್ಯಕ್ರಮದ ವೇಳೆ ಕೇವಲ 4 ರಿಂದ 5 ಮಂದಿಗೆ ಮಾತ್ರ ವೇದಿಕೆಯಲ್ಲಿ ಅವಕಾಶ ನೀಡಲಾಗಿದೆ. ಈ ಪಟ್ಟಿಯಲ್ಲಿ ಮೈಸೂರು ಮಹಾರಾಜರಿಗೆ ಅವಕಾಶ ನೀಡಿಲ್ಲದಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ನಮ್ಮ ಮೈಸೂರು ನಮ್ಮ ಹೆಮ್ಮೆ ನಮ್ಮ ಮಹಾರಾಜರು ಎಂಬ ಹೆಸರಿನಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಪಿಎಂ ಸಂಚರಿಸುವ ರಸ್ತೆಗಳಲ್ಲಿ ದಸರಾ ಮಾದರಿ ದೀಪಾಲಂಕಾರ: ಸಚಿವ ಸೋಮಶೇಖರ್
ಅಲ್ಲದೇ ಈ ಸಂಬಂಧ ಪಾಲಿಕೆ ಸದಸ್ಯ ಲೋಕೇಶ್ ಪಿಯಾ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದೆ. ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಮಂಗಳವಾರ ಜಮಾಯಿಸಿದ ಸಾರ್ವಜನಿಕರು, ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
"ಅರಮನೆಯ ಆವರಣದಲ್ಲಿ ನಡೆಯಲಿರುವ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ರಾಜವಂಶಸ್ಥರಾದ ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ಅವರನ್ನು ವೇದಿಕೆಗೆ ಆಹ್ವಾನಿಸಿಲ್ಲ. ಇದು ರಾಜಮನೆತನಕ್ಕೆ ಮಾಡಿರುವ ಅಪಮಾನ '' ಎಂದು ಲೋಕೇಶ್ ಪಿಯಾ ಆರೋಪಿಸಿದರು.
"ಯೋಗ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರ ಪಕ್ಕದಲ್ಲಿ ಯದುವೀರ್ ಆಸೀನರಾಗಲು ಅವಕಾಶ ಮಾಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡುತ್ತೇವೆ '' ಎಂದು ಎಚ್ಚರಿಕೆ ನೀಡಿದ್ದಾರೆ.
ಮಹಾರಾಜರಿಲ್ಲದ ಕಾರ್ಯಕ್ರಮ ನಮಗೆ ಬೇಡ
ಮೈಸೂರು ಸಂಸದ ಪ್ರತಾಪ್ ಸಿಂಹ ಪ್ರಧಾನಿ ಮೋದಿ ಜೊತೆ ವೇದಿಕೆಯಲ್ಲಿ ಮುಖ್ಯಮಂತ್ರಿ, ರಾಜ್ಯಪಾಲರು, ಕೇಂದ್ರ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಭಾಗವಹಿಸಲು ಮಾತ್ರ ಅವಕಾಶವಿದೆ ಎಂಬ ಹೇಳಿಕೆ ನೀಡುತ್ತಿದ್ದಂತೆ ಸಾಮಾಜಿಕ ಜಾಲಾತಾಣದಲ್ಲಿ ಸರಕಾರದ ತೀರ್ಮಾನದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಆಧುನಿಕ ಯೋಗ ಜಗದ್ವಿಖ್ಯಾತಿಯಾಗಲು ಮೈಸೂರು ಅರಸರ ಕೊಡುಗೆ ಅಪಾರ. ಅರಮನೆ ಆವರಣದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ರಾಜವಂಶಸ್ಥರನ್ನು ಆಹ್ವಾನಿಸದಿರುವುದು ಸರಿಯಲ್ಲ, ನಮಗೆ ಯದುವೀರ್ ಇಲ್ಲದ ಯೋಗದಿನಾಚರಣೆ ಕಾರ್ಯಕ್ರಮ ಬೇಡ ಎಂದು ಮೈಸೂರಿಗರು ಅಸಮಧಾನ ವ್ಯಕ್ತಪಡಿಸಿದ್ದಾರೆ.
ವಿಶ್ವಯೋಗ ದಿನ; ಮೈಸೂರು ಅರಮನೆ ಪ್ರವೇಶಿಸಲು ಕೋವಿಡ್ ಲಸಿಕೆ ಕಡ್ಡಾಯ
ಅರಮನೆ ಅರಸರ ಕೊಡುಗೆ
ನರೇಂದ್ರ ಮೋದಿ ಭಾಗವಹಿಸುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಇಡೀ ಜಗತ್ತು ವೀಕ್ಷಿಸಲಿದೆ. ಆದರೆ ಈ ಕಾರ್ಯಕ್ರಮಕ್ಕೆ ಇದುವರೆಗೆ ಆಹ್ವಾನ ನೀಡಿಲ್ಲ. ಅರಮನೆಯ ಮೈಸೂರು ಅರಸರ ಕೊಡುಗೆ, ಅಲ್ಲದೆ ಯೋಗ ಶಾಲೆಯನ್ನು ಆರಂಭಿಸಿದ್ದೆ ಒಡೆಯರ ವಂಶಸ್ಥರು ಎಂಬ ವಿಚಾರವನ್ನು ಆಯೋಜಕರು ನೆನಪಿನಲ್ಲಿಟ್ಟುಕೊಳ್ಳಲಿ ಎಂದು ಲೇಖಕಿ ಲಕ್ಷ್ಮಿ ಕಿಶೋರ್ ಅರಸ್ ಕಿಡಿಕಾರಿದ್ದಾರೆ.
ಕೇಂದ್ರ ಸರ್ಕಾರದ ಕಾರ್ಯಕ್ರಮ
ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿರುವ ಯೋಗ ದಿನದ ಕಾರ್ಯಕ್ರಮದ ವೇದಿಕೆಯಲ್ಲಿ ಮುಖ್ಯ ಅತಿಥಿಗಳು ಅತಿಥಿಗಳು ಯಾರಿರಬೇಕು ಎಂಬುದನ್ನು ಕೇಂದ್ರ ಸರಕಾರದ ಶಿಷ್ಠಾಚಾರದ ಪ್ರಕಾರ ನಿರ್ಧರಿಸಲಾಗುತ್ತದೆ. ಈ ಕಾರ್ಯಕ್ರಮ ಕೇಂದ್ರ ಸರಕಾರದ ನೇತೃತ್ವದಲ್ಲಿ ನಡೆಯುತ್ತಿದೆ. ರಾಜ್ಯ ಸರಕಾರದಿಂದ ನಡೆದಿದ್ದರೆ ನಾವು ತೀರ್ಮಾನ ತೆಗೆದುಕೊಳ್ಳುತ್ತವೆ. ಆದರೆ ಈಗ ನಾವು ಕೇಂದ್ರ ಸರಕಾರ ನೀಡುವ ಸೂಚನೆ ಪಾಲಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ತಿಳಿಸಿದ್ದಾರೆ.
ಇದು ರಾಜಕೀಯ ಕಾರ್ಯಕ್ರಮವಲ್ಲ
ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ರನ್ನು ಯೋಗ ಕಾರ್ಯಕ್ರಮದ ವೇದಿಕೆಗೆ ಆಹ್ವಾನಿಸಿಲ್ಲ ಎಂಬ ವಿಚಾರದಲ್ಲಿ ತಪ್ಪು ಸಂದೇಶ ಹರಡುವುದು ಸರಿಯಲ್ಲ, ಯಾರೂ ಗಾಳಿ ಸುದ್ದಿ ಹರಡಿಸಬಾರದು. ಇದು ರಾಜಕೀಯ ಕಾರ್ಯಕ್ರಮ ಅಲ್ಲ, ವಿವಿಐಪಿ, ವಿಐಪಿ, ಸಾಧಕರು, ಬೇರೆ ಕ್ಷೇತ್ರದ ಗಣ್ಯರ ಪಟ್ಟಿ ಮಾಡಲಾಗುತ್ತಿದೆ. ಅವರಿಗೂ ವ್ಯವಸ್ಥೆ ಇರುತ್ತದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.