ಯಡಿಯೂರಪ್ಪ ಮುಖ್ಯಮಂತ್ರಿ ಗಾದಿಗೇರಲು ನಂಜನಗೂಡಲ್ಲಿ ಉರುಳು ಸೇವೆ
ಮೈಸೂರು, ಜುಲೈ 23: ಒಂದೆಡೆ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರಕಾರದ ಅಳಿವು - ಉಳಿವಿಗೆ ಕ್ಷಣಗಣನೆ ಆಗುತ್ತಿದ್ದರೆ, ಇನ್ನೊಂದೆಡೆ ಕಮಲ ಪಾಳಯದ ಮುಖಂಡರು ಸರಕಾರದ ಚುಕ್ಕಾಣಿ ಹಿಡಿಯಲು ಯಾವುದೇ ಅಡ್ಡಿ ಆಗದಿರಲಿ ಎಂದು ಪೂಜೆ- ಪುನಸ್ಕಾರ ಮಾಡುತ್ತಿದ್ದಾರೆ.
ಇದೇ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆ ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದಲ್ಲಿ ಬಿಜೆಪಿ ಮುಖಂಡ ಎಸ್.ಮಹದೇವಯ್ಯ ನೇತೃತ್ವದಲ್ಲಿ ಮಂಗಳವಾರ ವಿಶೇಷ ಪೂಜೆ, ಉರುಳು ಸೇವೆ ನಡೆಯಿತು.
ಇಡೀ ದೇವಸ್ಥಾನ ಸುತ್ತಿದ ಕಾರ್ಯಕರ್ತರು, ಬಿಜೆಪಿ ಅಧಿಕಾರಕ್ಕೆ ಬರಲಿ, ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದರು. ಶ್ರೀಕಂಠೇಶ್ವರ ಸ್ವಾಮಿ ಹಾಗೂ ಪಾರ್ವತಿ ದೇವಿಗೆ ವಿಶೇಷ ಪೂಜೆ, ಹರಕೆ ಸಲ್ಲಿಸಿದ ಕಾರ್ಯಕರ್ತರು, ದೇವಾಲಯದ ಸುತ್ತಲೂ ಉರುಳು ಸೇವೆ ಮಾಡಿ, ಬಿಜೆಪಿ ಮತ್ತು ಬಿ.ಎಸ್.ಯಡಿಯೂರಪ್ಪ ಪರ ಘೋಷಣೆ ಕೂಗಿದರು.

ಮುಖಂಡರಾದ ಎಸ್.ಮಹದೇವಯ್ಯ, ಸಿಂಧೂವಳ್ಳಿ ಕೆಂಪಣ್ಣ, ಕಾ.ಪು.ಸಿದ್ದವೀರಪ್ಪ, ಎನ್.ಆರ್.ಕೃಷ್ಣಪ್ಪಗೌಡ, ಅಕಳ ಮಹದೇವಪ್ಪ, ಶೇಖರ್, ರೇಚಣ್ಣ, ಆನಂದ್, ದೇವನೂರು ಮಹೇಶ, ಬದನವಾಳು ಮೂರ್ತಿ ಉರುಳು ಸೇವೆಯ ವೇಳೆ ಉಪಸ್ಥಿತರಿದ್ದರು.












Click it and Unblock the Notifications