ವರ್ಷದ ಮೊದಲ ವರ್ಷಧಾರೆಯಲ್ಲಿ ಮಿಂದೆದ್ದ ಮೈಸೂರು
ಮೈಸೂರು, ಮಾರ್ಚ್ 2: ಬಿಸಿಲಿನಿಂದ ಬಸವಳಿದಿದ್ದ ಸಾಂಸ್ಕೃತಿಕ ನಗರಿಯನ್ನು ವರುಣ ತಂಪಾಗಿಸಿದ್ದಾನೆ. ಈ ಮೂಲಕ ವರ್ಷದ ಮೊದಲ ವರ್ಷಧಾರೆಗೆ ಇಡೀ ನಗರ ಮಿಂದೆದ್ದಿದೆ.
ಇಂದು ಮುಂಜಾನೆ ಮೂರು ಗಂಟೆಯಿಂದಲೇ ಹನಿಹನಿಯಾಗಿ ಆರಂಭಗೊಂಡ ತುಂತುರು ಮಳೆ ಗಾಢ ನಿದ್ದೆಯಲ್ಲಿದ್ದ ಮಂದಿಗೆ ಒಂದಷ್ಟು ತಂಪನ್ನೀಯಿತು. ಹಗಲಿನ ಬಿಸಿಲಿಗೆ ಇಡೀ ನಗರ ಬೆವತಿತ್ತಾದರೂ ಮುಂಜಾನೆಯ ತಣ್ಣಗಿನ ಗಾಳಿ ಹಾಗೂ ತುಂತುರು ಮಳೆ ಹಾಯೆನಿಸಿತ್ತು. ಮುಂಜಾನೆ ಐದು ಗಂಟೆಯ ನಂತರ ಮಳೆ ಒಂದಷ್ಟು ರಭಸ ಹೆಚ್ಚಿಸಿತು.
ಒಮ್ಮೆ ಜೋರಾಗಿ ಸುರಿಯುತ್ತಾ ಮತ್ತೆ ವೇಗಕ್ಕೆ ಕಡಿವಾಣ ಹಾಕಿ ಹನಿಹನಿಯಾಗಿ ಬೀಳುತ್ತಾ ಏಳು ಗಂಟೆಗೆಲ್ಲ ಒಂದಷ್ಟು ರಭಸವನ್ನು ಇಮ್ಮಡಿಗೊಳಿಸಿತು. ಧಾರಾಕಾರವಲ್ಲದ ಸಾಧಾರಣ ಮಳೆ ದೂಳಿನಿಂದ ನಲುಗಿದ್ದ ನಗರವನ್ನು ತೊಳೆದು ನೆಮ್ಮದಿಯಿಂದ ಓಡಾಡುವಂತೆ ಮಾಡಿದೆ. ಜತೆಗೆ ಬಿಸಿಲಿನ ತಾಪಕ್ಕೆ ಸಿಕ್ಕಿ ನೀರಿನ ಆಸರೆಗಾಗಿ ಕಾಯುತ್ತಿದ್ದ ಗಿಡಮರಗಳು ನೆಮ್ಮದಿಯುಸಿರು ಬಿಡುವಂತಾಗಿದೆ.

ಈಗಾಗಲೇ ಗಿಡಮರಗಳ ಎಲೆ ಉದುರಿ ಮತ್ತೆ ಚಿಗುರುತ್ತಿದ್ದರೆ, ಕೆಲವು ಮರಗಳಂತು ಈಗ ಎಲೆಯುದುರಿಸಿದ್ದು, ಇನ್ನಷ್ಟೆ ಚಿಗುರಬೇಕಿದೆ. ಚಾಮುಂಡಿ ಬೆಟ್ಟದ ಸಣ್ಣಪುಟ್ಟ ಗಿಡಗಳು, ಕುರುಚಲು ಕಾಡುಗಳು ಒಣಗಿದ್ದು ಇಡೀ ಕಾಡು ಬೋರಲಾದಂತೆ ಕಂಡು ಬರುತ್ತಿದೆ. ಈಗ ಸುಮಾರು ನಾಲ್ಕೈದು ಗಂಟೆಗಳ ಕಾಲ ಮಳೆ ಸುರಿದಿರುವುದು ಗಿಡಮರಗಳಿಗೆ ಜೀವಜಲವಾಗಿ ಚಿಗುರಿ ಹಸಿರಾಗಲು ಸಹಕಾರಿಯಾಗಿದೆ.

ಒಟ್ಟಾರೆ ಯಾವುದೇ ಮುನ್ಸೂಚನೆ ನೀಡದೆ ಮುಂಜಾನೆಯಲ್ಲಿ ಎಲ್ಲರೂ ನಿದ್ದೆಯಲ್ಲಿರುವಾಗ ವರುಣ ದರ್ಶನ ನೀಡಿ ಭೂಮಿಯನ್ನು ತಂಪಾಗಿಸಿರುವುದು ಎಲ್ಲರೂ ಖುಷಿ ಪಡುವಂತಾಗಿದೆ.












Click it and Unblock the Notifications