ಕಾರು-ಬೈಕ್ ಅಪಘಾತದಿಂದ ಜಗಳ, ಬಿಜೆಪಿಯಿಂದ ಗಲಭೆ ಸೃಷ್ಟಿಗೆ ಯತ್ನ: ಸಿದ್ದರಾಮನಹುಂಡಿ ಘಟನೆ ಬಗ್ಗೆ ಯತೀಂದ್ರ ಸ್ಪಷ್ಟನೆ
ಮಾಜಿ ಸಿಎಂ ಸಿದ್ದರಾಮಯ್ಯ ಹುಟ್ಟೂರು ಸಿದ್ದರಾಮನಹುಂಡಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವಿನ ಗಲಭೆ ಬಗ್ಗೆ ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಕಾರು-ದ್ವಿ ಚಕ್ರ ಅಪಘಾತವಾದ ಬಳಿಕ ಅಲ್ಲಿ ಜಗಳ ನಡೆದಿದೆ, ಆದರೆ ಬಿಜೆಪಿ ಈ ಘಟನೆಗೆ ರಾಜಕೀಯ ಬಣ್ಣ ಹಚ್ಚಲು ಪ್ರಯತ್ನಿಸುತ್ತಿದೆ ಎಂದು ಕಿಡಿ ಕಾರಿದ್ದಾರೆ.
ವರುಣಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ಮತ್ತು ಪ್ರತಾಪ್ ಸಿಂಹ ಮತಯಾಚನೆಗೆ ತೆರಳಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಸಿದ್ದರಾಮಯ್ಯ ಬೆಂಬಲಿಗರು ಕಲ್ಲು ತೂರಾಟ ನಡೆಸಿದ್ದಲ್ಲದೆ , ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಘಟನೆ ಬಳಿಕ ಬಿಜೆಪಿ ನಾಯಕರು ಸಿದ್ದರಾಮಯ್ಯ ವಿರುದ್ಧ ಸಾಕಷ್ಟು ಟೀಕೆ ಮಾಡಿದ್ದರು.

ಘಟನೆ ವಿವಾದ ರೂಪ ಪಡೆದುಕೊಳ್ಳುವ ಸಂದರ್ಭದಲ್ಲೇ ಯತೀಂದ್ರ ಸಿದ್ದರಾಮಯ್ಯ ಮಾಧ್ಯಮಗಳ ಜೊತೆ ಮಾತನಾಡಿದ್ದು ಸ್ಪಷ್ಟನೆ ನೀಡಿದ್ದಾರೆ. ಬಿಜೆಪಿ ನಾಯಕರು ಸುಮ್ಮನೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದ ಅವರು, ಸಿದ್ದರಾಮಯಹುಂಡಿಯನ್ನು ಕಾರು ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಬಳಿಕ ಜಗಳ ನಡೆದಿದೆ. ಇದಕ್ಕೆ ಬಿಜೆಪಿ ರಾಜಕೀಯ ಬಣ್ಣ ಬಳಿದು, ತನ್ನ ಬೇಳೆ ಬೇಯಿಸಿಕೊಳ್ಳಲು ನೋಡುತ್ತಿದೆ ಎಂದು ಯತೀಂದ್ರ ಸಿದ್ದರಾಮಯ್ಯ ಕಿಡಿ ಕಾರಿದರು.
ಬಿಜೆಪಿಯವರು ಗಲಭೆ ಮಾಡಿಕೊಂಡೇ ಅಧಿಕಾರಕ್ಕೆ ಬಂದಿದ್ದು
ಬಿಜೆಪಿ ಪಕ್ಷದ ಇತಿಹಾಸವೇ ಗಲಭೆಯಿಂದ ತುಂಬಿದೆ. ಅವರು ಅಧಿಕಾರಕ್ಕೆ ಬಂದಿದ್ದೇ ಗಲಭೆಗಳನ್ನು ಮಾಡಿಸುವ ಮೂಲಕ, ನಾನು ಘಟನೆಯ ಬಗ್ಗೆ ಮಾಹಿತಿ ಪಡೆದಿದ್ದೇನೆ, ಅಲ್ಲಿ ರಾಜಕೀಯ ಕಾರಣಕ್ಕಾಗಿ ಜಗಳ ನಡೆದಿಲ್ಲ. ಕಾರು ಮತ್ತು ಬೈಕ್ಗೆ ಅಪಘಾತ ನಡೆದಿದ್ದರಿಂದ ಜಗಳವಾಗಿದೆ, ನಾಗೇಶ್ ಎನ್ನುವವರ ಮೇಲೆ ಹಲ್ಲೆಯಾಗಿದೆ ಪೊಲೀಸರು ಕೂಡ ಅದನ್ನೇ ಹೇಳಿದ್ದಾರೆ.
ಬಿಜೆಪಿಯವರು ಎಲ್ಲಾ ಕಡೆ ಇದೇ ರೀತಿ ಮಾಡುತ್ತಿದ್ದಾರೆ, ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ಗಲಭೆ ಮಾಡಿಸುವ ಮೂಲಕ ರಾಜಕೀಯ ಮಾಡಲು ಪ್ರಯತ್ನಿಸುತ್ತಿದ್ದಾರೆ, ಇಲ್ಲಿ ಮಾತ್ರವಲ್ಲ ಅವರು ಎಲ್ಲಾ ಕಡೆ ಇದನ್ನೇ ಮಾಡುತ್ತಾ ಬಂದಿರುವುದು. ನಾನು ನನ್ನ ಪಕ್ಷದ ಕಾರ್ಯಕರ್ತರಿಗೆ ಮನವಿ ಮಾಡಿದ್ದೇನೆ, ಬಿಜೆಪಿಯವರು ಎಷ್ಟೇ ಪ್ರಚೋದನೆ ಮಾಡಿದರು ತಾಳ್ಮೆ ಕಳೆದುಕೊಳ್ಳಬೇಡಿ, ಪ್ರಚಾರ ಮಾಡುವ ಹಕ್ಕು ಎಲ್ಲರಿಗೂ ಇದೆ ಎಂದರು.
ನಾನು ಕೆಲವು ಕಡೆ ಹೋದ ಸಂದರ್ಭದಲ್ಲಿ ನಮ್ಮ ಕೆಸಲಗಳು ಆಗಿಲ್ಲ ಎಂದು ಜನ ಪ್ರಶ್ನೆ ಮಾಡುತ್ತಾರೆ ಅದನ್ನು ಪ್ರಚಾರಕ್ಕೆ ಅಡ್ಡಿಪಡಿಸಿದ್ದಾರೆ ಎನ್ನಲು ಆಗಲ್ಲ. ಹೇಗಾದರೂ ಮಾಡಿ ವರುಣಾ ಕ್ಷೇತ್ರದಲ್ಲಿ ಗಲಭೆ ಸೃಷ್ಟಿಸುವ ಮೂಲಕ ರಾಜಕೀಯ ಲಾಭ ಪಡೆಯಲು ಪ್ರಯತ್ನ ಮಾಡ್ತಿದ್ದಾರೆ, ಕಾಂಗ್ರೆಸ್ ಕಾರ್ಯಕರ್ತರು ತಾಳ್ಮೆ ಕಳೆದುಕೊಳ್ಳಬಾರದು ಎಂದು ಯತೀಂದ್ರ ಸಿದ್ದರಾಮಯ್ಯ ಮನವಿ ಮಾಡಿದ್ದರು.
ಸಿದ್ದರಾಮಯ್ಯ ಕುಟುಂಬಸ್ಥರ ವಿರುದ್ಧ ದೂರು
ಸಿದ್ದರಾಮನಹುಂಡಿಯಲ್ಲಿ ಬಿಜೆಪಿ ಪರ ಪ್ರಚಾರ ಮಾಡುವ ಸಂದರ್ಭದಲ್ಲಿ ಪಕ್ಷದ ಪ್ರಚಾರ ರಥದ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದಾರೆ ಎನ್ನುವ ಆರೋಪ ಮಾಡಲಾಗಿದೆ. ಸಿದ್ದರಾಮಯ್ಯ ಅವರ ಅಣ್ಣನ ಮನೆ ಮುಂದೆ ಪ್ರಚಾರ ಮಾಡುವಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ಬಿಜೆಪಿ ಕಾರ್ಯಕರ್ತ ನಾಗೇಶ್ ಮೇಲೆ ಹಲ್ಲೆ ಮಾಡಿರುವುದಾಗಿ ಆರೋಪ ಮಾಡಿದ್ದು, ಸಿದ್ದರಾಮಯ್ಯ ಅಣ್ಣನ ಮಕ್ಕಳ ವಿರುದ್ಧ ವರುಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications