ಅರಮನೆಯಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಖಾಸಗಿ ದರ್ಬಾರ್
ಮೈಸೂರು, ಸೆಪ್ಟೆಂಬರ್ 29: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಆರಂಭಗೊಂಡ ಬೆನ್ನಲ್ಲೇ ಮೈಸೂರು ಅರಮನೆಯಲ್ಲಿ ಮಹಾರಾಜರ ಖಾಸಗಿ ದರ್ಬಾರ್ ಕೂಡ ಆರಂಭವಾಗಿದೆ. ರತ್ನಖಚಿತ ಸಿಂಹಾಸನವೇರಿದ ಮಹಾರಾಜ ಯದುವೀರ, ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.
ಅರಮನೆಯ ದರ್ಬಾರ್ ಸಭಾಂಗಣದಲ್ಲಿ ಮಹಾರಾಜ ಯದುವೀರ್ ಅವರು ರತ್ನ ಖಚಿತ ಸಿಂಹಾಸನ ಏರಿ ಖಾಸಗಿ ದರ್ಬಾರ್ ನಡೆಸಿದರು. ದರ್ಬಾರ್ ನಡೆಯುವಾಗ ಎಂದಿನಂತೆ ಅರಮನೆಯೊಳಗೆ ಪ್ರವಾಸಿಗರ ಪ್ರವೇಶ ನಿಷೇಧಿಸಲಾಗಿತ್ತು. ಅರಮನೆ ಸಿಬ್ಬಂದಿ ಹಾಗೂ ಪತ್ರಕರ್ತರಿಗೆ ಮಾತ್ರ ಅರಮನೆಯೊಳಗೆ ಪ್ರವೇಶಾವಕಾಶವಿದೆ.
ಕಳೆದ ವಾರವಷ್ಟೆ ಪ್ರಮೋದಾದೇವಿ ಒಡೆಯರ್ ನೇತೃತ್ವದಲ್ಲಿ ಸಿಂಹಾಸನ ಜೋಡಣೆ ಕಾರ್ಯ ನಡೆದಿತ್ತು. ಈ ವೇಳೆ, ಅರಮನೆಯೊಳಗೆ ನವಗ್ರಹ, ಗಣ ಹೋಮ ಮಾಡಿ ವಿಶೇಷ ಪೂಜೆ ನೆರವೇರಿಸಲಾಗಿತ್ತು. ಸಂಪ್ರದಾಯದ ಪ್ರಕಾರ ದಸರಾ ದಿನಗಳಲ್ಲಿ ಮೈಸೂರು ಅರಸರು ರತ್ನಖಚಿತ ಸಿಂಹಾಸನದಲ್ಲಿ ಕುಳಿತು ಖಾಸಗಿ ದರ್ಬಾರ್ ನಡೆಸುತ್ತಾರೆ. ದಸರಾ ಸಂದರ್ಭದಲ್ಲಿ ಮಾತ್ರ ಸಿಂಹಾಸನ ಜೋಡಣೆ ಮಾಡಲಾಗುತ್ತದೆ.

ಸಿಂಹಾಸನ ಏರುವ ಮುನ್ನ ಮಹಾರಾಜ ಯದುವೀರ್, ಮೈಗೆ ಎಣ್ಣೆ ಹಚ್ಚಿಕೊಂಡು ಶಾಸ್ತ್ರೋಕ್ತವಾಗಿ ಮಂಗಳ ಸ್ನಾನ ಮಾಡಿ ಸಿಂಹಾಸನ ಏರುತ್ತಾರೆ. ಸಿಂಹಾಸನ ಏರುವ ಮುನ್ನ ಮಹಾರಾಜರಿಗೆ ಮುತ್ತೈದೆಯರು ಮಂಗಳಾರತಿ ಬೆಳಗುತ್ತಾರೆ. ಸಂಪ್ರದಾಯದ ಪ್ರಕಾರ ಸಕಲ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದ ಬಳಿಕವೇ ಚಿನ್ನದ ಎಳೆಗಳಿರುವ ರಾಜ ಪೋಷಾಕನ್ನು ಧರಿಸಿ ಮಹಾರಾಜರು ಸಿಂಹಾಸನ ಏರುತ್ತಾರೆ.












Click it and Unblock the Notifications