ನಾಡ ಅಧಿದೇವತೆ ಚಾಮುಂಡಿಗೆ ವೈಭವದ ವರ್ಧಂತಿ ಸಂಭ್ರಮ
ಮೈಸೂರು, ಜುಲೈ 24: ಬೆಟ್ಟದ ತಾಯಿ ಚಾಮುಂಡೇಶ್ವರಿ ದೇವಿಯ ವರ್ಧಂತಿ ಉತ್ಸವವನ್ನು ಕಣ್ತುಂಬಿಕೊಳ್ಳಲು ನಾಡಿನ ವಿವಿಧೆಡೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಇಂದು ಚಾಮುಂಡಿ ಬೆಟ್ಟಕ್ಕೆ ಬರುತ್ತಿದ್ದಾರೆ.
ದೇವಸ್ಥಾನದಲ್ಲಿ ಬೆಳಿಗ್ಗೆ 5.30ಕ್ಕೆ ಮಹಾನ್ಯಾಸ ಪೂರ್ವಕ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಸಹಸ್ರನಾಮಾರ್ಚನೆ, ಮಂಗಳಾರತಿ ಹಾಗೂ 9.30ಕ್ಕೆ ಮಹಾಮಂಗಳಾರತಿ ಸೇರಿದಂತೆ ವಿವಿಧ ಪೂಜಾ ವಿಧಿವಿಧಾನಗಳು ನಡೆದವು. ಸೇವಂತಿಗೆ, ಮರುಗ, ಜಾಜಿ, ಮಲ್ಲಿಗೆ ಹೂವುಗಳಿಂದ ದೇವಿಯನ್ನು ಸಿಂಗರಿಸಲಾಗಿತ್ತು. ದಟ್ಟನೀಲಿ, ಕೆಂಪು, ಕೇಸರಿ, ಹಳದಿ, ಬಿಳಿ ಬಣ್ಣದ ಹೂವುಗಳಿಂದ ಗರ್ಭಗುಡಿಯ ಹೊರಾಂಗಣವನ್ನು ಅಲಂಕರಿಸಲಾಗಿತ್ತು.
ವರ್ಧಂತಿ ಉತ್ಸವದ ಅಂಗವಾಗಿ ದೇವಿಗೆ ಅನ್ನ, ಬೆಣ್ಣೆ, ಸಕ್ಕರೆ, ಗೋಡಂಬಿ, ದ್ರಾಕ್ಷಿ ಮಿಶ್ರಣದ ಶಾಲ್ಯಾನ್ನ ಅಭಿಷೇಕ ಮಾಡಲಾಯಿತು. ದೇವಸ್ಥಾನದ ಆವರಣದಲ್ಲಿ ಬೆಳಿಗ್ಗೆ 10.25ಕ್ಕೆ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಯನ್ನು ಚಿನ್ನದ ಪಲ್ಲಕ್ಕಿಯಲ್ಲಿ ಇಟ್ಟು ಮೆರವಣಿಗೆ ಮಾಡಲಾಯಿತು.

ರಾಜವಂಶಸ್ಥರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ತ್ರಿಷಿಕಾ ಕುಮಾರಿ ದಂಪತಿ ಪಲ್ಲಕ್ಕಿ ಗಾಡಿಯ ನೊಗವನ್ನು ಎಳೆಯುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು. ಸುಮಾರು ಒಂದು ಗಂಟೆ ಮೆರವಣಿಗೆ ನಡೆಯಿತು. ದೇವಿಯ ದರ್ಶನ ಪಡೆದು ಭಕ್ತರು ಪುನೀತರಾದರು.
ಲಲಿತಮಹಲ್ ಬಳಿಯ ಹೆಲಿಪ್ಯಾಡ್ ನಿಂದ ದೇವಾಲಯಕ್ಕೆ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಕೆಎಸ್ ಆರ್ ಟಿಸಿ ವತಿಯಿಂದ ಪ್ರತಿ 5 ನಿಮಿಷಕ್ಕೆ ಒಂದರಂತೆ ಬಸ್ ಸೌಲಭ್ಯ ಇತ್ತು. ಹರಕೆ ಹೊತ್ತಿದ್ದ ಭಕ್ತರು ಬೆಟ್ಟದ ಮೆಟ್ಟಿಲುಗಳನ್ನು ಹತ್ತಿದರು. ಎಲ್ಲ ಮೆಟ್ಟಿಲುಗಳಿಗೂ ಅರಿಶಿನ- ಕುಂಕುಮ ಹಚ್ಚಿ, ದೀಪ ಬೆಳಗಿದರು. ನೇರ ದರ್ಶನ, ವಿಶೇಷ ಪ್ರವೇಶದ್ವಾರಗಳಲ್ಲಿ ಗಣ್ಯರು, ಅತಿಗಣ್ಯರು, ಜನಪ್ರತಿನಿಧಿಗಳು ಮೊದಲಾದವರಿಗೆ ಅವಕಾಶ ಕಲ್ಪಿಸಲಾಗಿತ್ತು.












Click it and Unblock the Notifications