ಟಿ. ನರಸೀಪುರದಲ್ಲಿ ಮಹಿಳೆ ಅನುಮಾನಾಸ್ಪದ ಸಾವು:ಕೊಲೆ ಶಂಕೆ
ಮೈಸೂರು, ಫೆಬ್ರವರಿ 12:ಮೂರು ತಿಂಗಳ ಹಿಂದೆ ಅನುಮಾನಾಸ್ಪದವಾಗಿ ಸಾವಿಗೀಡಾದ ಮಹಿಳೆಯ ಮೃತದೇಹವನ್ನು ಮಣ್ಣಿನಿಂದ ತೆಗೆದು ಮರುಣೋತ್ತರ ಪರೀಕ್ಷೆಗೆ ರವಾನಿಸಿದ ಘಟನೆ ಮೈಸೂರಿನ ಟಿ. ನರಸೀಪುರದಲ್ಲಿ ನಡೆದಿದೆ..
ಮೂರು ತಿಂಗಳ ಹಿಂದೆ ಟಿ.ನರಸೀಪುರ ತಾಲ್ಲೂಕು ಬೈರಾಪುರ ಗ್ರಾಮದ ನಿವಾಸಿ ಎಲ್.ಚೈತ್ರಶ್ರೀ (26) ಎಂಬಾಕೆ ಅನುಮಾನಾಸ್ಪದವಾಗಿ ಮೃತರಾಗಿದ್ದರು.ಆದರೆ ಕುಟುಂಬದವರು ಆಕೆಯ ಸಾವಿನ ಕುರಿತಾಗಿ ಸ್ಪಷ್ಟ ಕಾರಣವನ್ನು ನೀಡದೇ ದಿನಕ್ಕೊಂದು ಸಬೂಬು ನೀಡುತ್ತಿದ್ದರು ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಗಂಡ ಸುನೀಲ್ ಕುಮಾರ್ ಕೊಲೆ ಮಾಡಿದ್ದು, ತನಿಖೆ ನಡೆಸುವಂತೆ ಮೃತಳ ತಾಯಿ ದೂರು ನೀಡಿದ್ದಾರೆ. ಸುನೀಲ್ ಕುಮಾರ್ ಕುಟುಂಬ ಸದಸ್ಯರೊಟ್ಟಿಗೆ ಸೇರಿ ಪ್ರತಿನಿತ್ಯ ತನ್ನ ಮಗಳಿಗೆ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರೆಂದು ದೂರಿನಲ್ಲಿ ಆರೋಪಿಸಿದ್ದಾರೆ.

ದೂರಿನ ಮೇರೆಗೆ ಟಿ.ನರಸೀಪುರ ತಹಶೀಲ್ದಾರ್ ನಾಗಪ್ರಶಾಂತ್ , ನಂಜನಗೂಡು ಡಿವೈಸ್ಪಿ ಮಲ್ಲಿಕ್ ಹಾಗೂ ಪೋಲೀಸ್ ಸಿಬ್ಬಂದಿ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಚೈತ್ರಾಳನ್ನು ಮಂಡ್ಯದ ಮಳವಳ್ಳಿ ನಿವಾಸಿ ಸುನೀಲ್ ಕುಮಾರ್ ರಿಗೆ 2014ರಲ್ಲಿ ವಿವಾಹ ಮಾಡಿಕೊಡಲಾಗಿತ್ತು. ಆ ವೇಳೆ ವರದಕ್ಷಿಣೆ ರೂಪದಲ್ಲಿ 75 ಸಾವಿರ ನಗದು, ಉಂಗುರ ಕೊಟ್ಟು 6.5ಲಕ್ಷ ರೂ.ಖರ್ಚಿನಲ್ಲಿ ವಿವಾಹ ಮಾಡಿಕೊಡಲಾಗಿತ್ತು. ಮದುವೆಯಾಗಿ ಒಂದು ವರ್ಷದವರೆಗೆ ಸತಿ ಪತಿ ಅನ್ಯೋನ್ಯವಾಗಿದ್ದರು.
ನಂತರದ ದಿನಗಳಲ್ಲಿ ಕುಟುಂಬದ ಸದಸ್ಯರು ಆಕೆಗೆ ಮಾನಸಿಕವಾಗಿ ಹಿಂಸೆ ನೀಡಿ ವರದಕ್ಷಿಣೆ ತರುವಂತೆ ಒತ್ತಾಯಿಸುತ್ತಿದ್ದರು ಎನ್ನಲಾಗಿದೆ. ಇದೊಂದು ಅಸಹಜ ಸಾವು ಎಂದು ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ ಎಂದು ದೂರಿನಲ್ಲಿ ಚೈತ್ರಾ ಉಲ್ಲೇಖಿಸಿದ್ದಾರೆ.












Click it and Unblock the Notifications