ಸರ್ಪ್ರೈಸ್ ಕೊಡುತ್ತೇನೆಂದು ಯುವತಿ ತನ್ನ ಭಾವಿ ಗಂಡನಿಗೆ ಮಾಡಿದ್ದೇನು?
ಮೈಸೂರು, ಮಾರ್ಚ್ 05: ಯುವತಿಯೊಬ್ಬಳು ತನ್ನ ಭಾವಿ ಗಂಡನನ್ನು ಚಾಕುವಿನಿಂದ ಇರಿದಿರುವ ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಸುರಗಳ್ಳಿ ಗ್ರಾಮದಲ್ಲಿ ನಡೆದಿದೆ.
ಸುರಗಳ್ಳಿ ಗ್ರಾಮದ ಯುವಕ ರವಿಕುಮಾರ್ ಹಾಗೂ ಅರುಣಿ ಎಂಬ ಯುವತಿಗೂ ನಾಲ್ಕು ತಿಂಗಳ ಹಿಂದೆ ವಿವಾಹ ನಿಶ್ಚಯವಾಗಿತ್ತು. ಈ ವಿವಾಹಕ್ಕೆ ಎರಡೂ ಕುಟುಂಬಗಳ ಜತೆಗೆ ವಧು ವರರಿಗೂ ಸಂಪೂರ್ಣ ಒಪ್ಪಿಗೆ ಇತ್ತು.
ಇಬ್ಬರೂ ಕಳೆದ ಮೂರು ತಿಂಗಳಿನಿಂದ ಮೊಬೈಲ್ ಸಂಪರ್ಕದಲ್ಲಿದ್ದರು. ಸೋಮವಾರ ಸಂಜೆ ಯುವಕ ರವಿಕುಮಾರ್ ಯುವತಿ ಮನೆಗೆ ತೆರಳಿದ್ದಾನೆ. ಆಗ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.

ಯುವಕ ಹಾಗೂ ಯುವತಿ ಇಬ್ಬರೇ ರೂಮಿನಲ್ಲಿ ಇದ್ದಾಗ ಅರುಣಿಯು, ""ನಿನಗೆ ಸರ್ಪ್ರೈಸ್ ತೋರಿಸುತ್ತೇನೆ'' ಎಂದು ರವಿಕುಮಾರ್ ಕಣ್ಣಿಗೆ ಬಟ್ಟೆ ಕಟ್ಟಿ ಚಾಕುವಿನಿಂದ ಏಕಾಏಕಿ ಇರಿದಿದ್ದಾಳೆ.
ಇದೀಗ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿರುವ ಯುವತಿ, ತನಗೆ ಓದಲು ಇಷ್ಟ ಇತ್ತು. ಆದರೆ ಮನೆಯಲ್ಲಿ ಎಷ್ಟೇ ಹೇಳಿದರೂ ಕೇಳದೆ ಮದುವೆ ನಿಶ್ಚಯ ಮಾಡಿದರು. ಇದರಿಂದ ಬೇಸತ್ತು ತಾನೇ ಚಾಕು ಇರಿದಿರುವುದಾಗಿ ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ. ಈ ಸಂಬಂಧ ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications