ಹೆಂಡತಿ ಚೆನ್ನಾಗಿ ಕಂಡಳೆಂದು ಮಚ್ಚಿನಿಂದ ಹಲ್ಲೆ ಮಾಡಿದ
ಮೈಸೂರು, ಏಪ್ರಿಲ್ 27 : ತನ್ನ ಹೆಂಡತಿ ಚೆನ್ನಾಗಿ ಡ್ರೆಸ್ ಮಾಡಿಕೊಂಡಳು, ಮೇಕಪ್ ಮಾಡಿಕೊಂಡಳು ಎಂಬ ಕಾರಣಕ್ಕೆ ಸಿಟ್ಟಾಗಿ ಆಕೆಯನ್ನು ಮಚ್ಚಿನಿಂದ ಕೊಲೆ ಮಾಡಲು ಯತ್ನಿಸಿದ ಘಟನೆ ನಡೆದಿದೆ.
ಗಣೇಶ್ ಎಂಬಾತ ತನ್ನ ಪತ್ನಿ ಶೈಲಜಾ (23) ಮೇಲೆ ಹಲ್ಲೆ ಮಾಡಿದ ವ್ಯಕ್ತಿ. ಪಿರಿಯಾಪಟ್ಟಣ ತಾಲೂಕಿನ ಲಾಳನಹಳ್ಳಿ ಗ್ರಾಮದಲ್ಲಿ ಗುರುವಾರ ರಾತ್ರಿ ಈ ಘಟನೆ ನಡೆದಿದ್ದು, ಗಂಭೀರವಾಗಿ ಗಾಯಗೊಂಡ ಶೈಲಜಾರನ್ನು ನಗರದ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೆ.ಆರ್.ನಗರ ತಾಲೂಕು ಅಂಕನಹಳ್ಳಿಯ ಶೈಲಜಾರನ್ನು ಲಾಳನಹಳ್ಳಿಯ ಗಣೇಶ ಎಂಬಾತ ಕಳೆದ ಕೆಲ ದಿನಗಳ ಹಿಂದಷ್ಟೇ ವಿವಾಹವಾಗಿದ್ದ. ಗುರುವಾರ ಸಂಜೆ ದಂಪತಿಯು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಶೈಲಜಾ ಚೆನ್ನಾಗಿ ಶೃಂಗಾರ ಮಾಡಿಕೊಂಡು ಸುಂದರವಾಗಿ ಕಾಣುತ್ತಿದ್ದರು.

ಆಕೆ ಸುಂದರವಾಗಿ ಕಾಣುತ್ತಿದ್ದುದನ್ನು ಸಹಿಸದ ಗಣೇಶ್ ಕಾರ್ಯಕ್ರಮದ ವೇಳೆಯೇ ಕ್ಯಾತೆ ತೆಗೆದು, ಜಗಳ ಮಾಡಿ ಮನೆಗೆ ಕರೆ ತಂದಿದ್ದಾನೆ. ಆ ನಂತರ ಮನ ಬಂದಂತೆ ಮಚ್ಚಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ಪಿರಿಯಾಪಟ್ಟಣ ಠಾಣೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.












Click it and Unblock the Notifications