ದಸರಾ ತಾಲೀಮು ನಡೆಸಲು ಒಪ್ಪದ ಬಲರಾಮ
ಮೈಸೂರು, ಅ.10 : ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ದಿನಗಣನೆ ಆರಂಭವಾಗಿದೆ. ಆದರೆ, ದಸರಾ ತಾಲೀಮಿನ ವೇಳೆ ಬಲರಾಮ ಆನೆ ತನ್ನ ಅಸಹಕಾರ ತೋರಿದ್ದು, ದಸರಾ ಉತ್ಸವದಲ್ಲಿ ಪಾಲ್ಗೊಳ್ಳುವುದೇ ಎಂಬ ಅನುಮಾನ ಹುಟ್ಟುಹಾಕಿದೆ.
ಶುಕ್ರವಾರ ಬೆಳಗ್ಗೆ ಆನೆಗಳ ತಾಲೀಮು ಅರಮನೆ ಮೈದಾನದಿಂದ ಆರಂಭವಾಯಿತು. ಬನ್ನಿ ಮಂಟಪದವರೆಗೆ ಆನೆಗಳು ಸಾಗಿ ಮರಳಿ ಅರಮನೆ ತಲುಪಬೇಕಾಗಿತ್ತು. ಆದರೆ, ಆರ್ ಎಂಸಿ ಸರ್ಕಲ್ ಹತ್ತಿರ ಬರುತ್ತಿದ್ದಂತೆಯೇ ಬಲರಾಮ ಹಿಂದಿರುಗಿ ಅರಮನೆಯತ್ತ ತೆರಳಲು ಮುಂದಾಗಿದೆ.
ಇದರಿಂದಾಗಿ ಬಲರಾಮನನ್ನು ಹಿಂಬಾಲಿಸತ್ತಿದ್ದ ಇತರ ಆನೆಗಳೂ ಗೊಂದಲಕ್ಕೊಕ್ಕೆ ಒಳಗಾಗಿ ಹಿಂದಿರುಗಿ ನಿಂತಿವೆ. ಇದರಿಂದಾಗಿ ಜಂಬೂ ಸವಾರಿಯಲ್ಲಿ ಬಲರಾಮ ಭಾಗವಹಿಸುತ್ತದೆಯೇ ಎಂಬ ಅನುಮಾನ ಪ್ರಾರಂಭವಾಗಿದೆ.
ಬಲರಾಮ ಆನೆ ಆರೋಗ್ಯವಾಗಿದೆ. ಆದರೆ, ಅದರ ವರ್ತನೆಗೆ ಕಾರಣವೇನೆಂದು ತಿಳಿದು ಬಂದಿಲ್ಲ ಎಂದು ಅರಣ್ಯ ಸಂರಕ್ಷಣಾಧಿಕಾರಿ ದೇವರಾಜ್ ಹೇಳಿದ್ದಾರೆ. ಜಂಬೂ ಸವಾರಿಯಂದು ಇಂತಹ ಘಟನೆ ಮರುಕಳಿಸಬಾರದು ಎಂದು ಅವರು ಎಚ್ಚರ ವಹಿಸಿದ್ದಾರೆ.
ಆದ್ದರಿಂದ ಬಲರಾಮ ಜಂಬೂ ಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಾನೆಯೇ ಎಂಬ ಅನುಮಾನ ಪ್ರಾರಂಭವಾಗಿದೆ. ಆಯುಧ ಪೂಜೆಯಂದು ಬಲರಾಮ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ದೇವರಾಜ್ ಹೇಳಿದ್ದಾರೆ. (ಗಜಪಡೆಯ ನಾಯಕ ಜಂಬೂ ಸವಾರಿ ವೀರ ಬಲರಾಮ)
ಚಿಕ್ಕಂದಿನಿಂದಲೂ ಬಲಗಣ್ಣು ತೊಂದರೆ ಅನುಭವಿಸುತ್ತಿರುವ ಬಲರಾಮ, ಕಳದೆ ವರ್ಷದ ದಸರಾ ತಾಲೀಮಿನ ಸಂದರ್ಭದಲ್ಲೂ ನಿರಾಸಕ್ತನಾಗಿದ್ದ. ಅರಮನೆಯಿಂದ ಬನ್ನಿಮಂಟಪ ತಲುಪಲು ಎರಡೂವರೆ ಗಂಟೆ ತೆಗೆದುಕೊಳ್ಳುತ್ತಿದ್ದ ಎಂಬ ದೂರು ಇತ್ತು. ಆದರೂ, ದಸರಾ ಉತ್ಸವದಲ್ಲಿ ಪಾಲ್ಗೊಂಡಿತ್ತು. ಈ ಬಾರಿ ತಾಲೀಮಿನಲ್ಲಿ ಭಾಗವಹಿಸಿದ್ದ ಬಲರಾಮ ಶುಕ್ರವಾರ ಮಾತ್ರ ತನ್ನ ಅಸಹಕಾರ ತೋರಿಸಿದ್ದಾನೆ.