ಕಾಡಂಚಿನ ಗ್ರಾಮಗಳಿಗೆ ಲಗ್ಗೆಯಿಡುತ್ತಿರುವ ಕಾಡಾನೆಗಳು, ಭಯದಲ್ಲಿ ಜನರು!
ಮೈಸೂರು, ಅಕ್ಟೋಬರ್.05: ಬಂಡೀಪುರ ಅರಣ್ಯ ವ್ಯಾಪ್ತಿಯಿಂದ ಕಾಡಾನೆಗಳು ನಂಜನಗೂಡು ಮತ್ತು ಎಚ್.ಡಿ.ಕೋಟೆ ತಾಲೂಕಿನ ಕಾಡಂಚಿನ ಗ್ರಾಮಗಳಿಗೆ ಲಗ್ಗೆಯಿಡುತ್ತಿದ್ದು, ರೈತರು ಭಯಭೀತರಾಗಿದ್ದಾರೆ.
ನಂಜನಗೂಡು ತಾಲೂಕಿನಲ್ಲಿ ಬಂಡೀಪುರ ಓಂಕಾರ ಅರಣ್ಯ ವಲಯದಿಂದ ಬಂದ ಕಾಡಾನೆಗಳು ನವಿಲೂರು ಗ್ರಾಮದ ಶಿವಪ್ಪ ಎಂಬುವರ ಜಮೀನಿಗೆ ನುಗ್ಗಿದ್ದು, ಕೃಷಿ ಫಸಲನ್ನು ತಿಂದು ತುಳಿದು ನಾಶ ಮಾಡುತ್ತಿವೆ. ಇದರಿಂದ ರೈತರು ಆತಂಕಕ್ಕೀಡಾಗಿದ್ದಾರೆ.
ಜಮೀನಿನಲ್ಲಿಯೇ ಬೀಡು ಬಿಟ್ಟಿರುವ ಕಾಡಾನೆಗಳನ್ನು ನೋಡಲು ನವಿಲೂರು ಮತ್ತು ಬ್ಯಾಳರು ಹುಂಡಿ ಗ್ರಾಮಗಳು ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರು ಮುಗಿ ಬೀಳುತ್ತಿದ್ದಾರೆ.
ಸದ್ಯ ನವಿಲೂರು ಗ್ರಾಮದ ಶಿವಪ್ಪ ಅವರ ಬಾಳೆ ತೋಟದ ಸಮೀಪದ ಪೊದೆಯಲ್ಲಿ ಮೂರು ಕಾಡಾನೆಗಳ ಹಿಂಡು ಅಡಗಿ ಕೊಂಡಿರುವುದನ್ನು ಕಂಡು ನಂಜನಗೂಡು ಅರಣ್ಯ ಇಲಾಖೆಯ ಆರ್ಎಫ್ಓ ಲೋಕೇಶ್ ಮೂರ್ತಿ ಮತ್ತು ಹತ್ತಕ್ಕೂ ಹೆಚ್ಚು ಸಿಬ್ಬಂದಿ ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ. ಮುಂದೆ ಓದಿ...

ಅರಣ್ಯ ಇಲಾಖೆ ಅಧಿಕಾರಿಗಳ ಹರಸಾಹಸ
ಇಲ್ಲಿ ಕಾಡಾನೆಗಳ ಕಾಟ ಇಂದು, ನಿನ್ನೆಯದಲ್ಲ. ಬಹಳ ವರ್ಷಗಳಿಂದಲೂ ಇದೆ. ಕಾಡಾನೆಗಳಿರುವ ಪೊದೆಯ ಬಳಿ ಪಟಾಕಿ ಸಿಡಿಸಿ ಮತ್ತು ತಮಟೆಯ ಶಬ್ದ ಮಾಡಿ ಪೊದೆಯಿಂದ ಕಾಡಾನೆಗಳನ್ನು ಕಾಡಿನತ್ತ ಓಡಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಹರಸಾಹಸ ಪಡುವಂತಾಗಿದೆ.

ಭಯ ಮಾತ್ರ ದೂರವಾಗಿಲ್ಲ
ಇನ್ನೊಂದೆಡೆ ಎಚ್.ಡಿ.ಕೋಟೆ ತಾಲೂಕಿನ ನುಗು ಪ್ರವಾಸಿ ಮಂದಿರ ವ್ಯಾಪ್ತಿಯಲ್ಲಿ ಬಂಡೀಪುರ ಅಭಯಾರಣ್ಯ ವ್ಯಾಪ್ತಿಯಿಂದ ಸುಮಾರು ಇಪ್ಪತ್ತು ಕಾಡಾನೆಗಳ ಹಿಂಡು ವಾಸ್ತವ್ಯ ಹೂಡಿದ್ದವು. ಸದ್ಯ ಇವುಗಳನ್ನು ಅರಣ್ಯಾಧಿಕಾರಿಗಳು ಅಭಯಾರಣ್ಯಕ್ಕೆ ವಾಪಸ್ ಅಟ್ಟಿದ್ದಾರೆ ಆದರೆ ರೈತರಿಗೀಗ ಭಯ ಮಾತ್ರ ದೂರವಾಗಿಲ್ಲ.

ವಾಸ್ತವ್ಯ ಹೂಡಿದ ಆನೆಗಳು
ಬೀರುವಾಲು ಗ್ರಾಮದ ಬಳಿ ನುಗು ಜಲಾಶಯದ ಹಿನ್ನೀರಿನ ನೀರು ಕುಡಿದು ನದಿಯಲ್ಲಿ ಈಜಾಡಿ ಕೆಲ ಕಾಲ ಸಮಯ ಕಳೆದ ಕಾಡಾನೆಗಳು ಕಾಡಿಗೆ ಹೋಗದೆ ಸಮೀಪದಲ್ಲಿದ್ದ ನುಗು ಪ್ರವಾಸಿ ಮಂದಿರದ ಸಮೀಪಕ್ಕೆ ಬಂದು ಅಲ್ಲಿಯೇ ವಾಸ್ತವ್ಯ ಹೂಡಿದ್ದವು.

ಕಾಡುತಲಿದೆ ಭಯ
ಇದನ್ನು ನೋಡಿದ ಜನ ಭಯಭೀತರಾಗಿದ್ದು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಆರ್ಎಫ್ಓ ಮಂಜುನಾಥ್ ಸೇರಿದಂತೆ ಸಿಬ್ಬಂದಿ ಆಗಮಿಸಿ ಹರಸಾಹಸ ಪಟ್ಟು ಮುಳ್ಳೂರು ಅಭಯಾರಣ್ಯ ವಲಯಕ್ಕೆ ಓಡಿಸಿದ್ದಾರೆ. ಆದರೆ ಯಾವಾಗ ಹಿಂತಿರುಗಿ ಬಂದು ಬಿಡುತ್ತವೆಯೋ ಎಂಬ ಭಯ ಕಾಡಂಚಿನ ಗ್ರಾಮದ ಜನರನ್ನು ಕಾಡುತ್ತಲೇ ಇದೆ.












Click it and Unblock the Notifications