ಹಚ್ಚ ಹಸಿರ ನಾಗರಹೊಳೆ ಅರಣ್ಯದಲ್ಲಿ ವನ್ಯ ಪ್ರಾಣಿಗಳ ನಲಿದಾಟ
ಮೈಸೂರು, ಜುಲೈ 7: ಮುಂಗಾರು ಮಳೆಯಲ್ಲಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಮಿಂದೇಳುತ್ತಿದೆ. ಮುಂಗಾರು ಮಳೆ ಸುರಿಯಿತೆಂದರೆ ಸಸ್ಯ ಸಂಕುಲಕ್ಕೆ ಮರುಹುಟ್ಟು, ವನ್ಯ ಪ್ರಾಣಿಗಳಿಗೆ ಸಡಗರ. ಬಿಸಿಲ ಹೊಡೆತಕ್ಕೆ ಸಿಲುಕಿ ನಲುಗಿ ಹೋದ ನದಿ, ಹೊಳೆ, ಝರಿಗಳಲ್ಲಿ ಧುಮ್ಮಿಕ್ಕಿ ಹರಿಯುವ ನೀರಿನ ಅವಸರ ಎದ್ದು ಕಾಣುತ್ತದೆ.
ಕೊಡಗು ಮತ್ತು ಮೈಸೂರಿಗೆ ಹೊಂದಿಕೊಂಡಂತಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ 643 ಚ.ಕಿ.ಮೀ ವ್ಯಾಪ್ತಿ ಹೊಂದಿದ್ದು, ವನ್ಯ ಪ್ರಾಣಿಗಳ ಆಹಾರ ಮತ್ತು ಕಾಡಿನ ರಕ್ಷಣೆ ದೃಷ್ಠಿಯಿಂದ ನಾಗರಹೊಳೆ, ಕಲ್ಲಹಳ್ಳ, ವೀರನಹೊಸಹಳ್ಳಿ, ಹುಣಸೂರು, ಆನೆಚೌಕೂರು, ಅಂತರಸಂತೆ, ಡಿ.ಬಿ.ಕುಪ್ಪೆ, ಮೇಟಿಕುಪ್ಪೆ ಹೀಗೆ ಎಂಟು ವಲಯಗಳಾಗಿ ವಿಂಗಡಣೆಗೊಂಡಿದ್ದು, ಈ ಅರಣ್ಯದಲ್ಲಿ ಮುಂಗಾರು ಮಳೆಯ ಲೀಲೆಗೆ ಹತ್ತಾರು ಸುಂದರ ದೃಶ್ಯಗಳು ಸೃಷ್ಠಿಯಾಗಿವೆ.
ಕಣ್ಮನ ತಣಿಸುವ ಹಸಿರ ವನಸಿರಿ
ಹಸಿರ ವನಸಿರಿ ಕಣ್ಮನ ತಣಿಸುತ್ತಿದ್ದರೆ, ಅದರ ನಡುವೆ ಹಿಂಡು ಹಿಂಡಾಗಿ ಕಾಣುವ ಅಚ್ಚರಿಯ ನೋಟ ಬೀರುವ ಜಿಂಕೆಗಳ ದಂಡು, ಕಾಡುಕೋಣ, ಕಾಡಾನೆ, ನಿರ್ಭಯವಾಗಿ ಹೆಜ್ಜೆಹಾಕುವ ಹುಲಿ. ಇದಲ್ಲದೆ ಹತ್ತಾರು ಸಣ್ಣಪುಟ್ಟ ಪ್ರಾಣಿಗಳು ಎಲ್ಲೆಂದರಲ್ಲಿ ಅರಣ್ಯದಲ್ಲಿ ಹುರುಪಿನಿಂದ ಓಡಾಡುತ್ತಿವೆ. ಈ ಬಾರಿ ಜನವರಿಯಿಂದ ಇಲ್ಲಿಯವರೆಗೆ ಉತ್ತಮವಾಗಿ ಮಳೆಯಾಗಿದ್ದು, ಅದರಲ್ಲೂ ನಡು ಬೇಸಿಗೆಯಲ್ಲಿ ಸುರಿದ ಮಳೆಗೆ ಸಸ್ಯ ಸಂಕುಲ ಒಣಗಿ ಕಾಡ್ಗಿಚ್ಚಿಗೆ ಬಲಿಯಾಗದಿರುವುದೇ ಈ ಬಾರಿ ಎಲ್ಲ ಅರಣ್ಯಗಳು ಹಸಿರಿನಿಂದ ನಳನಳಿಸಲು ಕಾರಣವಾಗಿದೆ.
ಕಬಿನಿ ಹಿನ್ನೀರಿನ ಕಪ್ಪು ಚಿರತೆಯ ಹಳೇ ಫೋಟೊ ವೈರಲ್
ರಸ್ತೆ ಬದಿಯಲ್ಲಿ ಕಾಡಿನರಾಜನ ದರ್ಶನ
ಅದರಲ್ಲೂ ಲಾಕ್ ಡೌನ್ ಹಿನ್ನೆಲೆಯಲ್ಲಿ ಅರಣ್ಯದ ನಡುವೆ ಹಾದು ಹೋಗಿದ್ದ ಹೆದ್ದಾರಿಗಳನ್ನು ಬಂದ್ ಮಾಡಲಾಗಿತ್ತು. ಪ್ರವಾಸಿಗಳಾಗಲಿ, ಜನರಾಗಲೀ ಈ ಕಡೆ ಧಾವಿಸಿರಲಿಲ್ಲ. ಇದರಿಂದ ಅರಣ್ಯಕ್ಕೂ ಯಾವುದೇ ಹಾನಿ ಸಂಭವಿಸಿಲ್ಲ.
ಪ್ರತಿವರ್ಷವೂ ಒಂದಲ್ಲ ಒಂದು ಕಾರಣಕ್ಕೆ ಅರಣ್ಯವು ಅಗ್ನಿಗೆ ಆಹುತಿಯಾಗುತ್ತಿತ್ತು. ಆದರೆ ಈ ಬಾರಿ ಅರಣ್ಯ ಇಲಾಖೆಯ ಮುಂಜಾಗ್ರತೆ ಜತೆಗೆ ಲಾಕ್ ಡೌನ್ ನಿಂದ ಕಿಡಿಗೇಡಿಗಳು ಇತ್ತ ಬಾರದಿರುವುದು ಅರಣ್ಯಗಳು ಸುರಕ್ಷಿತವಾಗಿರಲು ಸಾಧ್ಯವಾಯಿತು. ಇದೀಗ ಈ ವ್ಯಾಪ್ತಿಯಲ್ಲಿ ಮಳೆ ಸುರಿಯುತ್ತಿರುವ ಕಾರಣದಿಂದಾಗಿ ಕೆರೆ-ಕಟ್ಟೆಗಳು ತುಂಬುತ್ತಿದ್ದು, ಅರಣ್ಯ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ.
ಅರಣ್ಯಕ್ಕೆ ಜೀವ ತುಂಬಿದ ಬಿದಿರು ಮೆಳೆಗಳು
ಹೂ ಬಿಟ್ಟು ಅಳಿದು ಹೋಗಿ ಬೋಳಾಗಿದ್ದ ಅರಣ್ಯಕ್ಕೆ ಬಿದಿರು ಮೆಳೆಗಳು ಮತ್ತೆ ಜೀವ ತುಂಬಿವೆ. ಕೆಲವೆಡೆ ಈ ಹಿಂದೆ ಸಂಭವಿಸಿದ ಅಗ್ನಿ ಅನಾಹುತದಿಂದಾಗಿ ಕಾಡು ಮರಗಳಿಲ್ಲದೆ ಬೋಳಾಗಿದ್ದರೂ ಬಿದಿರು ಮೆಳೆ ಕುರುಚಲು ಕಾಡುಗಳಿಂದ ಮತ್ತೆ ಹಸಿರು ಕಾಣಿಸಿಕೊಂಡಿದೆ. ಇದರ ನಡುವೆ ಸಸ್ಯಹಾರಿ ಪ್ರಾಣಿಗಳು ಖುಷಿಯಾಗಿ ಓಡಾಡುತ್ತಿವೆ. ಇನ್ನೊಂದೆಡೆ ಅರಣ್ಯದಲ್ಲಿ ಹರಿಯುವ ಜೀವನದಿ ಲಕ್ಷ್ಮಣ ತೀರ್ಥದಲ್ಲಿ ನೀರಿನ ಪ್ರಮಾಣವೂ ಹೆಚ್ಚಾಗುತ್ತಿದೆ. ಇದರ ನಡುವೆ ಕಾಡಾನೆ, ಕಾಡುಕೋಣ, ಜಿಂಕೆಗಳ ಓಡಾಟಗಳು ಎಲ್ಲೆಂದರಲ್ಲಿ ಕಂಡು ಬರುತ್ತದೆ. ಅಪರೂಪಕ್ಕೆ ರಸ್ತೆ ಬದಿಯಲ್ಲಿ ಹುಲಿಯ ದರ್ಶನವೂ ಆಗುತ್ತಿದೆ.
ಸಾರ್ವಜನಿಕ ರಸ್ತೆಗೆ ವಿಮೆ ಮಾಡಿಸಿದ ಮೈಸೂರಿನ ಕ್ಯಾಬ್ ಚಾಲಕ
ಆಹಾರಕ್ಕಾಗಿ ನಾಡಿಗೆ ಬರುವುದು ತಪ್ಪಲಿದೆ
ಇನ್ನು ಚನ್ನಮ್ಮನ ಕಟ್ಟೆ, ಎರೆಕಟ್ಟೆ, ಮಂಟಳ್ಳಿಕೆರೆ, ಮಾದಳ್ಳಿಕಟ್ಟೆ ಮುದಗನೂರುಕೆರೆ, ಬಿಲ್ಲೆನಹೊಸಹಳ್ಳಿಕೆರೆ, ಭೀಮನಕಟ್ಟಿ, ಬಾಣೇರಿಕೆರೆ ಸೇರಿದಂತೆ ಹಲವು ಕೆರೆ-ಕಟ್ಟೆಗಳು ಈ ಬಾರಿ ಬತ್ತಿಲ್ಲ. ಜತೆಗೆ ಇವುಗಳಲ್ಲಿ ನೀರಿನ ಸಂಗ್ರಹವೂ ಹೆಚ್ಚಾಗುತ್ತಿದೆ. ಒಟ್ಟಾರೆಯಾಗಿ ಈ ಬಾರಿಯ ಮುಂಗಾರು ಆರಂಭದಲ್ಲಿಯೇ ಒಂದಷ್ಟು ನೆಮ್ಮದಿ ಮತ್ತು ಸಮೃದ್ಧಿಯನ್ನು ತಂದಿದ್ದು, ಇದರಿಂದ ಅರಣ್ಯದಲ್ಲಿಯೇ ವನ್ಯಪ್ರಾಣಿಗಳಿಗೆ ಸಾಕಷ್ಟು ಮೇವು ಸಿಗುವಂತಾದರೆ ಆಹಾರಕ್ಕಾಗಿ ನಾಡಿಗೆ ಬರುವುದು ತಪ್ಪಲಿದೆ. ರೈತರು ನೆಮ್ಮದಿಯಾಗಿ ಬೆಳೆ ಬೆಳೆಯಲು ಸಾಧ್ಯವಾಗಲಿದೆ.