ಮೈಸೂರು ದಸರಾ ಕವಿಗೋಷ್ಠಿಯಿಂದ ಪ್ರೊ.ಭಗವಾನ್ಗೆ ಕೊಕ್, ಯಾಕೆ ಗೊತ್ತಾ?, ಇಲ್ಲಿದೆ ಮಾಹಿತಿ
ಮೈಸೂರು, ಅಕ್ಟೋಬರ್, 16: ಒಕ್ಕಲಿಗರ ವಿರುದ್ಧ ಪ್ರೊ.ಭಗವಾನ್ ನೀಡಿದ್ದ ಹೇಳಿಕೆ ದಿನಕ್ಕೊಂದು ವಿವಾದ ಪಡೆದುಕೊಳ್ಳುತ್ತಿದ್ದು, ಇದೀಗ ಖಾಸಗಿಯಾಗಿ ಮೈಸೂರಿನಲ್ಲಿ ಆಯೋಜನೆಗೊಂಡಿದ್ದ ದಸರಾ ಯುವ ಕವಿಗೋಷ್ಠಿಯಿಂದ ಭಗವಾನ್ಗೆ ಕೊಕ್ ನೀಡಲಾಗಿದೆ.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸ್ಪಂದನ ಸಾಂಸ್ಕೃತಿಕ ಪರಿಷತ್ ವತಿಯಿಂದ ವಿಜಯನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಇಂದು (ಅಕ್ಟೋಬರ್ 16ರಂದು) 'ದಸರಾ ಯುವ ಕವಿಗೋಷ್ಠಿ'ಯ ಉದ್ಘಾಟನೆಯನ್ನು ವಿಚಾರವಾದಿ ಕೆ.ಎಸ್.ಭಗವಾನ್ ಅವರ ಬದಲಿಗೆ ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ವಿಶ್ರಾಂತ ನಿರ್ದೇಶಕ ಹಾಗೂ ಸಾಹಿತಿ ಡಾ. ಡಿ.ಕೆ.ರಾಜೇಂದ್ರ ಉದ್ಘಾಟಿಸಿದ್ದಾರೆ.

ಪ್ರೊ.ಕೆ.ಎಸ್.ಭಗವಾನ್ ಅವರು ಇತ್ತೀಚಿಗೆ ನಡೆದ ಮಹಿಷ ದಸರಾ ಸಮಾರಂಭದಲ್ಲಿ ಒಕ್ಕಲಿಗ ಸಮುದಾಯದ ಕುರಿತು ಅವಹೇಳನ ಮಾಡಿದ ಕಾರಣ ಅವರ ವಿರುದ್ಧ ಒಕ್ಕಲಿಗ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಜೊತೆಗೆ ಅಕ್ಟೋಬರ್ 16ರಂದು ನಡೆಯಲಿರುವ ದಸರಾ ಯುವ ಕವಿಗೋಷ್ಠಿಯ ಉದ್ಘಾಟನೆಗೆ ಆಗಮಿಸಲಿದ್ದ ಪ್ರೊ. ಕೆ.ಎಸ್. ಭಗವಾನ್ ವಿರುದ್ಧ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಭವನಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸುವ ನಿರ್ಧಾರ ಕೈಗೊಂಡಿದ್ದರು.
ಈ ಹಿನ್ನೆಲೆ ಪ್ರೊ. ಭಗವಾನ್ ಅವರ ಸುರಕ್ಷತೆ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಂಗಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದು ಎಂಬ ಉದ್ದೇಶದಿಂದ ಪ್ರೊ.ಕೆ.ಎಸ್.ಭಗವಾನ್ ಅವರ ನಿವಾಸಕ್ಕೆ ಭಾನುವಾರ ತೆರಳಿ, ಅವರ ಜೊತೆ ಚರ್ಚೆ ಮಾಡಿ ಉದ್ಘಾಟಕರನ್ನು ಬದಲಾಯಿಸಲಾಗಿದೆ ಎಂದು ಸ್ಪಂದನ ಸಾಂಸ್ಕೃತಿಕ ಪರಿಷತ್ ಅಧ್ಯಕ್ಷ ಸತೀಶ್ ಜವರೇಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications