ಶಾಸಕರಿಗೆ ಜಿ ಕೆಟಗರಿ ಸೈಟು ಸಾಲ ತೀರಿಸಲು : ಎಚ್ಡಿಕೆ
ಮೈಸೂರು, ಫೆ.7 : ಜನಪ್ರತಿನಿಧಿಗಳಿಗೆ ಬೆಂಗಳೂರಿನಲ್ಲಿ ಜಿ ಕೆಟಗರಿ ನಿವೇಶನ ಏಕೆ ಬೇಕು? ಎಂಬ ಜನರ ಪ್ರಶ್ನೆಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಉತ್ತರ ನೀಡಿದ್ದಾರೆ. ಶಾಸಕರು ಚುನಾವಣೆ ಸಂದರ್ಭದಲ್ಲಿ ಮಾಡಿದ ಸಾಲವನ್ನು ತೀರಿಸಲು ನಿವೇಶನ ಪಡೆಯುತ್ತಾರೆ ಎಂದು ಎಚ್ಡಿಕೆ ವಿವರಣೆ ನೀಡಿದ್ದಾರೆ.
ಶುಕ್ರವಾರ ಮೈಸೂರಿನಲ್ಲಿ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ, ಬೆಂಗಳೂರಿನಲ್ಲಿ ಶಾಸಕರು ಜಿ ಕೆಟಗರಿ ಸೈಟು ಪಡೆದು ಮನೆ ಕಟ್ಟುವುದಿಲ್ಲ. ಬದಲಾಗಿ ಚುನಾವಣೆ ಸಮಯದಲ್ಲಿ ಮಾಡಿದ ಸಾಲ ತೀರಿಸಲು ಅವರಿಗೆ ನಿವೇಶನದ ಅವಶ್ಯಕತೆ ಇದೆ ಎಂದು ಹೇಳಿದರು.

ಮುಖ್ಯಮಂತ್ರಿಗಳ ವಿವೇಚನಾ ಕೋಟಾದಡಿ ನಿವೇಶನ ಪಡೆಯುವ ಶಾಸಕರು, ನಂತರ ಅದನ್ನು ಮಾರಾಟ ಮಾಡಿ ತಮ್ಮ ಚುನಾವಣೆ ಸಮಯದಲ್ಲಿ ಮಾಡಿದ ಸಾಲವನ್ನು ತೀರಿಸುತ್ತಾರೆ. ನಿವೇಶನ ಪಡೆಯುವುದು ಸಾಲ ತೀರಿಸಲು ಮಾತ್ರ ಎಂದು ಕುಮಾರಸ್ವಾಮಿ ವಿಶ್ಲೇಷಿಸಿದರು. [ಅಕ್ರಮವಾಗಿ ಕೊಂಡ ಜಿಕೆಟಗರಿ ಸೈಟು ವಾಪಸ್]
ಕೆಲವು ದಿನಗಳ ಹಿಂದೆ ಖಾಸಗಿ ವಾಹಿನಿಯೊಂದು ಜಿ ಕೆಟಗರಿ ನಿವೇಶನ ಹಂಚಿಕೆಯಲ್ಲಿ ಆಗಿರುವ ಅಕ್ರಮಗಳ ಬಗ್ಗೆ ವರದಿ ಪ್ರಸಾರ ಮಾಡಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ಭೂ ಹಗರಣಗಳ ಕುರಿತು ಸಿಬಿಐ ತನಿಖೆ ನಡೆಸುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ. ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. [ಕೈ ತಪ್ಪಲಿಗೆ ಜಿ ಕೆಟಗರಿ ನಿವೇಶನ]
ಮುಖ್ಯಮಂತ್ರಿಗಳ ಕೋಟಾದಡಿ ನೀಡುವ ಜಿ-ಕೆಟಗರಿ ನಿವೇಶನಗಳ ಹಂಚಿಕೆಯಲ್ಲಿ ಅಕ್ರಮ ನಡೆದಿದ್ದು, ಆ ನಿವೇಶನಗಳನ್ನು ವಾಪಸ್ ಪಡೆಯುವಂತೆ ಹೈಕೋರ್ಟ್ ಬಿಡಿಎಗೆ ಕೆಲವು ದಿನಗಳ ಹಿಂದೆ ಆದೇಶ ನೀಡಿತ್ತು. ಈ ಕುರಿತು ರಾಜ್ಯ ಸರ್ಕಾರ ಇದುವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ.
ಧರ್ಮಸಿಂಗ್, ಕುಮಾರಸ್ವಾಮಿ ಹಾಗೂ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ 300ಕ್ಕು ಹೆಚ್ಚು ಮಂದಿಗೆ ಜಿ-ಕೆಟಗರಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿತ್ತು. ಇದರಲ್ಲಿ ಬಹುತೇಕ ಫಲಾನುಭಿಗಳು ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಶಾಸಕರು ಮತ್ತು ಸಂಸದರಾಗಿದ್ದಾರೆ. ಆದ್ದರಿಂದ ಕುಮಾರಸ್ವಾಮಿ ನೀಡಿರುವ ಹೇಳಿಕೆ ವಿವಾದ ಹುಟ್ಟುಹಾಕುವ ಸಾಧ್ಯತೆ ಇದೆ.












Click it and Unblock the Notifications