ಮೈಸೂರಿಗೆ ಸಿದ್ದು ಮಾಡಿದ್ದೇನು? ಪ್ರತಾಪ್ ಸಿಂಹ ಬೆಂಬಲಿಗನ ಪ್ರಶ್ನೆ
ಮೈಸೂರು, ಮಾರ್ಚ್ 16 : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿ, ಜೆಡಿಎಸ್ ಅಭ್ಯರ್ಥಿ ಜಿ.ಟಿ. ದೇವೇಗೌಡರ ಎದುರು ಸೋಲು ಕಾಣುವ ಮೂಲಕ ತವರು ಕ್ಷೇತ್ರದಲ್ಲಿಯೇ ಮುಖಭಂಗ ಅನುಭವಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈ ಬಾರಿ ಹೇಗಾದರೂ ಮಾಡಿ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲೇಬೇಕೆಂಬ ಪಣ ತೊಟ್ಟಿದ್ದಾರೆ.
ಈಗಾಗಲೇ ತಮ್ಮ ಕುಲಬಾಂಧವ ಮತ್ತು ಆಪ್ತರೂ ಆಗಿರುವ ಸಿ.ಎಚ್. ವಿಜಯಶಂಕರ್ ಅವರಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ಸು ಕಂಡಿದ್ದು, ಮುಂದಿನ ದಿನಗಳಲ್ಲಿ ಗೆಲುವಿಗೆ ಏನೆಲ್ಲ ತಂತ್ರ ಮಾಡಬೇಕೋ ಅದನ್ನೆಲ್ಲ ಮಾಡಲು ಟೊಂಕ ಕಟ್ಟಿ ನಿಂತಿದ್ದಾರೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿರುವ ವಿಜಯಶಂಕರ್ ಅವರನ್ನು ಗೆಲ್ಲಿಸಬೇಕಾದರೆ ಹಾಲಿ ಸಂಸದ ಪ್ರತಾಪ್ ಸಿಂಹ ಅವರನ್ನು ಹೀಗಳೆಯುವುದು ಅನಿವಾರ್ಯವಾಗಿದ್ದು, ಪ್ರತಾಪ್ ಸಿಂಹ ವಿರುದ್ಧ ಆರೋಪದ ಸುರಿಮಳೆಗೆರೆಯುತ್ತಿದ್ದಾರೆ. ಮೈಸೂರಿಗೆ ಐದು ವರ್ಷದಲ್ಲಿ ಸಂಸದರಾಗಿ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ಇದು ಈಗ ಪ್ರತಾಪ್ ಸಿಂಹ ಅವರ ಬೆಂಬಲಿಗರನ್ನು ಕೆಣಕುವಂತೆ ಮಾಡಿದೆ. ಹೀಗಾಗಿ ಕೆಲವರು ಆಕ್ರೋಶಗೊಂಡಿದ್ದಾರೆ. ಇಂತಹ ಬೆಂಬಲಿಗರ ಪೈಕಿ ಒಬ್ಬರಾದ ಸಂದೇಶ್ ಪವಾರ್ ಎಂಬುವರು ಸಂಸದ ಪ್ರತಾಪ್ ಸಿಂಹ ಅವರ ಕೊಡುಗೆ ಏನು ಎಂದು ಕೇಳಿರುವ ಸಿದ್ದರಾಮಯ್ಯ ಅವರಿಗೆ ಸಂಸದ ಪ್ರತಾಪ್ ಸಿಂಹ ಅವರ 5 ವರ್ಷಗಳ ಸಾಧನೆಯ ಕಿರು ಹೊತ್ತಿಗೆಯನ್ನು ಅವರ ಅಧಿಕೃತ ನಿವಾಸ ವರುಣ ಹಾಗೂ ವಿಧಾನಸೌಧದ ಕಚೇರಿಗೆ ಅಂಚೆ ಮೂಲಕ ರವಾನಿಸಿ ಮನಸ್ಸನ್ನು ತಣಿಸಿಕೊಂಡಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಂದೇಶ್ರವರು, ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮೈಸೂರಿಗೆ 5 ವರ್ಷಗಳಲ್ಲಿ ಕೊಟ್ಟ ಕೊಡುಗೆ ಹಾಗೂ ಮೈಸೂರು-ಕೊಡಗು ಸಂಸದರಾಗಿ ಪ್ರತಾಪ್ ಸಿಂಹ ಅವರು 5 ವರ್ಷಗಳಲ್ಲಿ ಕೊಟ್ಟ ಕೊಡುಗೆ ಬಗ್ಗೆ ಬಹಿರಂಗವಾಗಿ ಚರ್ಚಿಸಲು ಸಿದ್ಧರಿದ್ದು, ಚರ್ಚೆಗೆ ಆಗಮಿಸುವಂತೆ ಆಹ್ವಾನ ನೀಡಿದ್ದಾರೆ. ಈಗಾಗಲೇ ಚಾಮುಂಡೇಶ್ವರಿ ಕ್ಷೇತ್ರದ ಜನರು ಅವರ ಕಾರ್ಯವೈಖರಿಗೆ ತಕ್ಕ ಪಾಠ ಕಲಿಸಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿಯೂ ತಕ್ಕಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ರಾಜಕೀಯ ನಾಯಕರು ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿಸಿಕೊಂಡಿದ್ದು, ದಿನಕಳೆದಂತೆ ಇವರ ಮಾತಿನ ಮತ್ತು ಕಾರ್ಯವೈಖರಿ ಯಾವ ಮಟ್ಟಕ್ಕೆ ಹೋಗಬಹುದೋ ಗೊತ್ತಿಲ್ಲ. ರಾಜಕೀಯ ನಾಯಕರು ಏನೇ ಹೇಳಿಕೆಗಳನ್ನು ನೀಡಿದರೂ, ಮತದಾರರನ್ನು ಓಲೈಸುವ ತಂತ್ರಗಾರಿಕೆಗಳನ್ನು ಮಾಡಿದರೂ ಅಂತಿಮವಾಗಿ ತೀರ್ಮಾನ ಮಾಡುವವರು ಮತದಾರರೇ ಎಂಬುದನ್ನು ನಮ್ಮ ರಾಜಕೀಯ ನಾಯಕರು ಅರಿತುಕೊಳ್ಳಬೇಕಾಗಿದೆ.












Click it and Unblock the Notifications