ಸರ್ವರ ಸಂಕಷ್ಟ ನಿವಾರಿಸುವ ಹಜರತ್ ಸೈದಾನಿ ಬಿ ದರ್ಗಾ: ಇರುವುದೆಲ್ಲಿ? ತಲುಪುವುದು ಹೇಗೆ..?
ಮೈಸೂರು, ಸೆಪ್ಟೆಂಬರ್ 21: ಇಂದಿಗೂ ಬಹಳಷ್ಟು ಸ್ಥಳಗಳು ಭಾವೈಕ್ಯತೆಯ ಕೇಂದ್ರವಾಗಿ ಉಳಿದಿದ್ದು ಅಲ್ಲಿ ಜಾತಿ ಧರ್ಮವನ್ನು ಮೀರಿ ಎಲ್ಲರೂ ಆಗಮಿಸಿ ತನ್ನ ಸಂಕಷ್ಟಗಳಿಗೆ ಪರಿಹಾರ ಕಂಡು ಕೊಳ್ಳುತ್ತಾರೆ. ಇಂತಹ ಸ್ಥಳಗಳ ಪೈಕಿ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಮುಖ್ಯರಸ್ತೆಯ ಬೆಳಲೆ ಗ್ರಾಮದ ಹಜರತ್ ಸೈದಾನಿ ಬಿ ದರ್ಗಾವು ಒಂದಾಗಿದ್ದು, ಇಲ್ಲಿ ಮುಸ್ಲಿಂ ಮಾತ್ರವಲ್ಲದೆ, ಹಿಂದೂ ಧರ್ಮದ ಹಲವರು ಭೇಟಿ ನೀಡಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಂಡಿರುವುದು ವಿಶೇಷವಾಗಿದೆ.
ಈಗಾಗಲೇ ರಾಜ್ಯದಲ್ಲಿ ಕೆಲವೆಡೆ ಕೋಮು ಗಲಭೆಗಳು ನಡೆಯುತ್ತಿದ್ದರೆ ಮತ್ತೆ ಕೆಲವೆಡೆ ಎಲ್ಲವನ್ನು ಮೀರಿ ಒಗ್ಗಟ್ಟಾಗಿ ಹಬ್ಬಾಚರಣೆ ಮಾಡುತ್ತಿದ್ದಾರೆ. ಇದರ ನಡುವೆ ಹಿಂದಿನಿಂದಲೂ ಹಿಂದೂ ಸಮುದಾಯದವರು ಬೆಳಲೆ ಗ್ರಾಮದಲ್ಲಿರುವ ದರ್ಗಾಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಹರಕೆ ಹೊತ್ತು ಬರುವುದು ಮತ್ತು ಹರಕೆ ತೀರಿಸುವುದು ನಡೆಯುತ್ತಲೇ ಬರುತ್ತಿದೆ. ಇಲ್ಲಿನ ದರ್ಗಾದ ವಿಶೇಷತೆಯನ್ನು ಅರಿತ ಜನರು ಇಲ್ಲಿಗೆ ತೆರಳಿ ತಮ್ಮ ಸಂಕಷ್ಟ ನಿವಾರಿಸುವಂತೆ ಬೇಡಿಕೊಳ್ಳುವುದು ನಡೆಯುತ್ತಲೇ ಬಂದಿದೆ.

ನಮ್ಮಲ್ಲಿ ನಂಬಿಕೆಯಂತು ಇದ್ದೇ ಇದೆ. ಹಲವು ಚಿಕಿತ್ಸೆಗಳಿಂದ ವಾಸಿಯಾಗದ ರೋಗಗಳು ದೇವಸ್ಥಾನ, ದರ್ಗಾಗಳಿಂದ ಆಗಿರುವ ಪವಾಡಗಳಿವೆ. ಇಂತಹ ಪವಾಡ ಮತ್ತು ಭಕ್ತಿಯ ಕ್ಷೇತ್ರಗಳಿಗೆ ಜನರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಹೋಗುತ್ತಾರೆ. ಅಷ್ಟೇ ಅಲ್ಲದೆ ಅಲ್ಲಿನ ಪವಾಡಗಳ ಕುರಿತಂತೆ ಮಾಹಿತಿಗಳು ಬಾಯಿಂದ ಬಾಯಿಗೆ ಹರಡಿ ಸಂಕಷ್ಟದಲ್ಲಿರುವವರು ತಮ್ಮ ಸಂಕಷ್ಟ ನಿವಾರಣೆಗಾಗಿ ಮೊರೆ ಹೋಗುವುದು ಮಾಮೂಲಿಯಾಗಿದ್ದು ಅದರಂತೆ ಬೆಳಲೆ ಗ್ರಾಮದ ಹಜರತ್ ಸೈದಾನಿ ಬಿ ದರ್ಗಾಕ್ಕೂ ಭಕ್ತರು ರಾಜ್ಯದ ವಿವಿಧೆಯಿಂದ ಆಗಮಿಸುತ್ತಾರೆ.
ಭಾವೈಕ್ಯತೆ ಸಾರುವ ದರ್ಗಾ ಎಲ್ಲಿದೆ?
ಸದ್ಯ ಭಾವೈಕ್ಯತೆಯ ತಾಣವಾಗಿ, ಸಂಕಷ್ಟ ನಿವಾರಣೆ ಮಾಡುವ ಹಜರತ್ ಸೈದಾನಿ ಬಿ ದರ್ಗಾವು ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಮುಖ್ಯರಸ್ತೆಯ ಬೆಳಲೆ ಗ್ರಾಮದಲ್ಲಿದೆ. ಇಲ್ಲಿ ನೂರಾರು ವರ್ಷಗಳಿಂದ ಜನರ ಕಷ್ಟ ಕಾರ್ಪಣ್ಯಗಳಿಗೆ ನಿವಾರಣೆ ದೊರೆತಿದ್ದು, ಇದೊಂದು ಪವಾಡ ಪುರುಷರ ಪುಣ್ಯ ಧಾಮವಾಗಿ ಗಮನಸೆಳೆಯುತ್ತಿದೆ. ಹೀಗಾಗಿ ಸ್ಥಳೀಯರು ಮಾತ್ರವಲ್ಲದೆ, ರಾಜ್ಯದ ಮೂಲೆ ಮೂಲೆಗಳಿಂದಲೂ ತಮ್ಮ ಸಂಕಷ್ಟ ನಿವಾರಣೆ ಮಾಡುವಂತೆ ಬೇಡಿಕೊಂಡು ಜನರು ಬರುತ್ತಾರೆ.

ಇಲ್ಲಿಗೆ ಎಂತಹ ಸಮಸ್ಯೆಗಳನ್ನು ಅನುಭವಿಸುತ್ತಿರುವವರು ಬರುತ್ತಾರೆ ಎಂಬುದನ್ನು ನೋಡಿದ್ದೇ ಆದರೆ ವಿವಿಧ ಕಾಯಿಲೆಗಳಿಂದ ಬಳಲುವವರು, ಮಾಟ ಮಂತ್ರ, ಹಣಕಾಸಿನ ತೊಂದರೆ, ಭೂತ ಚೇಷ್ಟೆ ಹೀಗೆ ಹತ್ತು ಹಲವು ಸಮಸ್ಯೆಗಳಿಂದ ಬಳಲುವವರು ಇಲ್ಲಿಗೆ ಬಂದು ಸೇವೆ ಮಾಡಿದರೆ, ಎಲ್ಲ ಸಮಸ್ಯೆಗಳಿಗೆ ಮುಕ್ತಿ ಸಿಗುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಹೀಗಾಗಿಯೇ ತಿಂಗಳ ಪ್ರತಿ ಗುರುವಾರ, ಹುಣ್ಣಿಮೆ ಮತ್ತು ಅಮಾವಾಸ್ಯೆಯಂದು ಇಲ್ಲಿಗೆ ಜನರು ಬರುವುದು ಮಾಮೂಲಿಯಾಗಿದೆ.
ರಾಜ್ಯಕ್ಕೆ ಮಾದರಿಯಾದ ಈ ದರ್ಗಾ
ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೂ ವಾಸಿಯಾಗದ ಕಾಯಿಲೆಗಳು ಈ ದರ್ಗಾಕ್ಕೆ ಬಂದು ಹರಸಿಕೊಂಡ ಬಳಿಕ ಪವಾಡ ಎಂಬಂತೆ ವಾಸಿಯಾಗಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ. ವರ್ಷಕ್ಕೊಮ್ಮೆ ನಡೆಯುವ ಉರೂಸ್ ನಲ್ಲಿ ಲಕ್ಷಾಂತರ ಜನರು ಪಾಲ್ಗೊಳ್ಳುತ್ತಾರೆ. ಇಲ್ಲಿನ ಮತ್ತೊಂದು ವಿಶೇಷ ಏನೆಂದರೆ ಕನ್ನಡದಲ್ಲಿಯೇ ಪ್ರಾರ್ಥನೆ ಮತ್ತು ಪೂಜಾ ಕೈಂಕರ್ಯಗಳು ನಡೆಯುವುದಾಗಿದೆ. ಇನ್ನು ಹಲವು ನಾಯಕರು ಇಲ್ಲಿಗೆ ಭೇಟಿ ನೀಡಿ ಯಶಸ್ಸು ಕಂಡಿದ್ದಾರೆ. ದೂರದಿಂದ ಬರುವ ಭಕ್ತರ ಅನುಕೂಲಕ್ಕಾಗಿ ದಾಸೋಹದ ವ್ಯವಸ್ಥೆಯೂ ಇಲ್ಲಿದೆ.
ಒಟ್ಟಾರೆಯಾಗಿ ಹೇಳಬೇಕೆಂದರೆ ನಂಜನಗೂಡು ತಾಲೂಕಿನ ಬೆಳಲೆ ಗ್ರಾಮದಲ್ಲಿರುವ ಹಜರತ್ ಸೈದಾನಿ ಬಿ ದರ್ಗಾವು ತನ್ನದೇ ಆದ ವಿಶೇಷತೆ ಹೊಂದಿದ್ದು ಪವಾಡಗಳ ಮೂಲಕ ದರ್ಗಾಕ್ಕೆ ಸಂಕಷ್ಟವನ್ನು ಹೊತ್ತು ಬರುವ ಭಕ್ತರನ್ನು ಸಂಕಷ್ಟದಿಂದ ಪಾರು ಮಾಡಿ ಅವರಲ್ಲಿ ನೆಮ್ಮದಿ ತರುವುದರೊಂದಿಗೆ ಮಾನವ ಧರ್ಮ ಒಂದೇ ಎಂಬುದನ್ನು ಸಾರುತ್ತಾ ರಾಜ್ಯಕ್ಕೆ ಮಾದರಿಯಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.












Click it and Unblock the Notifications