"ಜನ ಬಡಿಗೇಲಿ ಯಾರಿಗೆ ಹೊಡೀತಾರೆ ಆರು ತಿಂಗಳಲ್ಲಿ ಗೊತ್ತಾಗುತ್ತೆ"
Recommended Video

ಮೈಸೂರು, ಫೆಬ್ರವರಿ 21: "ಹಲವು ದಿನಗಳಿಂದ ನನೆಗುದಿಗೆ ಬಿದ್ದಿದ್ದ ಕಳಸಾ ಬಂಡೂರಿ ಯೋಜನೆಯ ಸಮಸ್ಯೆ ಬಗೆ ಹರಿದಿರುವುದು ಸಂತಸ ತಂದಿದೆ. ಅದಕ್ಕೆ ಈ ಬಜೆಟ್ ನಲ್ಲಿ ಹಣ ತೆಗೆದಿಟ್ಟು, ಆದಷ್ಟು ಬೇಗ ನೀರಾವರಿ ಯೋಜನೆ ಚಾಲನೆ ಮಾಡಲಾಗುವುದು. ಅದೇ ನನ್ನ ಮೊದಲ ಆದ್ಯತೆ" ಎಂದು ತಿಳಿಸಿದ್ದಾರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ.
ಇಂದು ಮೈಸೂರಿಗೆ ಖಾಸಗಿ ಕಾರ್ಯ ನಿಮಿತ್ತ ಬಂದಿದ್ದ ಅವರು, ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜತೆ ಮಾತನಾಡಿದರು. ಇದೇ ಸಂದರ್ಭ ಬಜೆಟ್ ಕುರಿತೂ ಮಾಹಿತಿ ಹಂಚಿಕೊಂಡರು. "ಮಾರ್ಚ್ 5ರಂದು ಬಜೆಟ್ ಮಂಡನೆ ಮಾಡುತ್ತಿದ್ದೇವೆ. ಈಗಾಗಲೇ ಅದರ ಸಿದ್ಧತೆ ನಡೆದಿದೆ. ಮಾರ್ಚ್ 3ನೇ ತಾರೀಕಿನ ಒಳಗೆ ಅದಕ್ಕೊಂದು ರೂಪ ಕೊಡುವ ಪ್ರಯತ್ನ ಆಗಲಿದೆ" ಎಂದರು. ಇದೇ ಸಂದರ್ಭದಲ್ಲಿ ಹಲವು ವಿಷಯಗಳ ಕುರಿತು ಮಾತನಾಡಿದರು.

"ಇನ್ನು 6 ತಿಂಗಳಲ್ಲಿ ಅಭಿವೃದ್ಧಿ ಕಾರ್ಯ"
"ಸರ್ಕಾರ ರಚನೆಯಾಗಿ ಏಳು ತಿಂಗಳಾಗಿದೆ. ರಾಜ್ಯದ ಜನರಿಗೆ ನಮ್ಮ ಅಭಿವೃದ್ಧಿ ಕಾರ್ಯಕ್ರಮ ತಿಳಿಯಲು ಇನ್ನೂ ಐದಾರು ತಿಂಗಳು ಬೇಕಾಗಲಿದೆ. ಇನ್ನು 6 ತಿಂಗಳಲ್ಲಿ ಜನ ಮೆಚ್ಚುವ ಅಭಿವೃದ್ಧಿ ಕಾರ್ಯ ಮಾಡುವ ವಿಶ್ವಾಸ ಇದೆ. ನೆರೆ ಸಂತ್ರಸ್ತರಿಗೆ ಏನೇನು ಮಾಡಬೇಕೋ ನಮ್ಮ ಶಕ್ತಿಮೀರಿ ಮಾಡಿದ್ದೇವೆ. ಅಲ್ಲಿ ಇಲ್ಲಿ ಕೊರತೆ ಆಗಿದ್ದರೆ ಅದನ್ನು ಸರಿಪಡಿಸಲಾಗುತ್ತದೆ" ಎಂದು ಹೇಳಿದರು.

ಮಾಜಿ ಸಿಎಂಗಳಿಗೆ ಬಿಎಸ್ ವೈ ಚಾಟಿ
ಜನ ಬಿಜೆಪಿ ಸರ್ಕಾರದ ಮಂದಿಗೆ ಬಡಿಗೆ ತೆಗೆದು ಹೊಡೆಯುತ್ತಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ ಯಡಿಯೂರಪ್ಪ, "ಸಿದ್ದರಾಮಯ್ಯ 6 ತಿಂಗಳು ಕಾಯಲಿ.
ಅವರ ಬಣ್ಣ ಬಯಲು ಮಾಡಲು ನಾನು ಸಿದ್ಧನಿದ್ದೇನೆ. ಅಲ್ಲಿವರೆಗೆ ತಾಳ್ಮೆಯಿಂದ ಕಾಯಲಿ" ಎಂದು ತಿರುಗೇಟು ನೀಡಿದರು. ಸಿದ್ದರಾಮಯ್ಯ 5 ವರ್ಷ ಮುಖ್ಯಮಂತ್ರಿ ಆಗಿದ್ದಿರು. ಕುಮಾರಸ್ವಾಮಿ 1.5 ವರ್ಷ ಸಿಎಂ ಆಗಿದ್ದಿರಿ. ಇಬ್ಬರೂ ಏನು ಮಾಡಿದ್ರಿ ಎಂದು ಪ್ರಶ್ನಿಸಿದರು.

"ಜನರು ಯಾರಿಗೆ ಹೊಡೀತಾರೆ ಗೊತ್ತಾಗುತ್ತೆ"
"ನೀವು ನಿಮ್ಮ ಸರ್ಕಾರ ಇದ್ದಾಗ ಏನು ಮಾಡಿದಿರಿ? ನಮ್ಮ ಸರ್ಕಾರ ಬಂದು 6 ತಿಂಗಳಾಗಿಲ್ಲ, ನಮ್ಮನ್ನು ಪ್ರಶ್ನೆ ಮಾಡುತ್ತಿದ್ದೀರಿ. ಒಮ್ಮೆ ನೀವು ಮಾಡಿದ ಕೆಲಸ ಮೆಲುಕು ಹಾಕಿದರೆ, ಜನರು ಯಾರಿಗೆ ಬಡಿಗೆ ತೆಗೆದುಕೊಂಡು ಹೊಡೀತಾರೆ ಗೊತ್ತಾಗುತ್ತೆ" ಎಂದು ಎಚ್ಚರಿಕೆ ನೀಡಿದರು.

ಬಜೆಟ್ ನಲ್ಲಿ ಕೃಷಿಗೆ ಆದ್ಯತೆ
ಈ ಬಾರಿ ಬಜೆಟ್ ರೈತರ ಹಾಗೂ ಕೃಷಿಗೆ ಆದ್ಯತೆ ನೀಡಿದ ಬಜೆಟ್ ಆಗಲಿದೆ. ರೈತರಿಗೆ ಹೆಚ್ಚಿನ ಆದ್ಯತೆ ಕೊಡುತ್ತೇವೆ. ನೆರೆ ಸಂತ್ರಸ್ತರಿಗೆ ನಾವು ಎಲ್ಲ ಸಹಾಯ ಮಾಡಿದ್ದೇವೆ. ಎಲ್ಲೆಲ್ಲಿ ಅವಶ್ಯವಿದೆಯೋ ಅಲ್ಲಿ ಕಾರ್ಯವನ್ನು ಸರಿಪಡಿಸಿಕೊಳ್ಳುತ್ತೇವೆ. ಕೇಂದ್ರದಿಂದ ರಾಜ್ಯಕ್ಕೆ ಬರುವ ಅನುದಾನದಲ್ಲಿ ಎಷ್ಟು ಖೋತಾ ಆಗಿದೆ ಎಂಬುದನ್ನು ಲೆಕ್ಕ ಹಾಕುತ್ತಿದ್ದೇವೆ. ಅದನ್ನೆಲ್ಲ ಸರಿದೂಗಿಸಿ ಬಜೆಟ್ ಮಾಡುತ್ತೇವೆ ಎಂದರು.












Click it and Unblock the Notifications