'ಬಿಜೆಪಿಯ ಹಿರಿಯ ನಾಯಕರುಗಳೇ ಮೋದಿ ವಿರುದ್ಧ ತಿರುಗಿ ಬಿದ್ದಿದ್ದಾರೆ'
Recommended Video

ಮೈಸೂರು, ಜನವರಿ 25: ನಮಗೆ ಸಮನ್ವಯ ಸಮಿತಿಗೆ ಪ್ರವೇಶ ಮಾಡಲು ಸಿದ್ದರಾಮಯ್ಯ ಅವರೇ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಬೇಸರ ವ್ಯಕ್ತಪಡಿಸಿದರು.
ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 18 ರಲ್ಲಿ 8 ಉಳಿಸಿಕೊಳ್ಳೋಕೆ ಸಾಧ್ಯವಿಲ್ಲ. ಜೆಡಿಎಸ್-ಕಾಂಗ್ರೆಸ್ ಗಂಡ - ಹೆಂಡತಿ ಇದ್ದ ಹಾಗೆ. ಕ್ಷೇತ್ರ ಹಂಚಿಕೆ ಸಮಸ್ಯೆ ನಾವೇ ಕುಳಿತು ಬಗೆಹರಿಸಿಕೊಳ್ಳುತ್ತೇವೆ. ಆದರೆ ಸಮನ್ವಯ ಸಮಿತಿ ಸಭೆಗೆ ಸಿದ್ದರಾಮಯ್ಯ ನಮ್ಮನ್ನು ಮತ್ತು ದಿನೇಶ್ ಗುಂಡೂರಾವ್ ಅವರನ್ನು ಒಳಗೆ ಬಿಟ್ಟುಕೊಳ್ಳುತ್ತಿಲ್ಲ ಎಂದರು.
ಮೈತ್ರಿ ಸರ್ಕಾರ ಯಾವುದೇ ಕಾರಣಕ್ಕೂ ಬೀಳುವುದಿಲ್ಲ. ಮಂತ್ರಿಗಳು ಶಾಸಕರು ರೆಸಾರ್ಟ್ ರಾಜಕಾರಣ ಮಾಡಿದ್ದು ಸಾಕು. ನಾನು ಈ ಬಗ್ಗೆ ನಮ್ಮ ಮಂತ್ರಿಗಳು - ಶಾಸಕರಿಗೆ ಪತ್ರ ಬರೆಯುತ್ತಿದ್ದೇನೆ. ಜನ - ಜಾನುವಾರುಗಳು, ನೀರು , ಮೇವು ಇಲ್ಲದೆ ನರಳುವ ಪರಿಸ್ಥಿತಿ ಎದುರಾಗಿದೆ. ಈ ಕೂಡಲೇ ಎಲ್ಲಾ ಸಚಿವರು, ಶಾಸಕರು ತಮ್ಮ ಸ್ವಕ್ಷೇತ್ರಕ್ಕೆ ಮರಳುವಂತೆ ಪತ್ರದಲ್ಲಿ ಮನವಿ ಮಾಡುತ್ತೇನೆ. ಕ್ಷೇತ್ರದ ಸಮಸ್ಯೆಗಳ ಬಗ್ಗೆ ತಲೆಕೆಡಿಸಿಕೊಳ್ಳಿ. ಸರ್ಕಾರದ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಎಂದು ಸಲಹೆ ನೀಡಿದರು.

ಯಡಿಯೂರಪ್ಪಗೆ ಆಪರೇಷನ್ ಮೇಲೆ ಆಸಕ್ತಿ
ಯಡಿಯೂರಪ್ಪಗೆ ಏಕೆ ಆಪರೇಷನ್ ಮೇಲೆ ಇಷ್ಟೊಂದು ಆಸಕ್ತಿ ಗೊತ್ತಿಲ್ಲ. ಆಪರೇಷನ್ ಮೇಲೆ ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಟೀಂ ಹೆಚ್ಚು ತಲೆ ಕೆಡಿಸಿಕೊಂಡಿದೆ. ಯಡಿಯೂರಪ್ಪ- ಶೋಭಾ ಟೀಮ್ ಗೆ ಬಿಟ್ಟು ಮತ್ತ್ಯಾರಿಗೂ ಆಪರೇಷನ್ ಮೇಲೆ ಆಸಕ್ತಿಯೇ ಇಲ್ಲ ಎಂದು ವಿಶ್ವನಾಥ್ ಟೀಕಿಸಿದರು.

ಮೋದಿಯವರ ಭರವಸೆಗಳು ಹುಸಿಯಾಗಿವೆ
ನರೇಂದ್ರ ಮೋದಿ ಸರ್ಕಾರದ ಮೌಲ್ಯಮಾಪನ ಪ್ರಾರಂಭವಾಗಿದೆ ಎಂದ ವಿಶ್ವನಾಥ್, ಮೋದಿಯವರ ಭರವಸೆಗಳು ಹುಸಿಯಾಗಿವೆ. ಜನರನ್ನು ನಂಬಿಸಿ ಅವರು ಮೋಸ ಮಾಡಿದ್ದಾರೆ. ಚುನಾವಣೆಗಾಗಿ ರಾಮಮಂದಿರ ಹಾಗೆ ರಿಸರ್ವೇಷನ್ ಆಶ್ವಾಸನೆ ಸೇರಿದಂತೆ ಮತ್ತಿತರ ಯೋಜನೆಗಳನ್ನು ಕೊಡಲು ಪ್ರಾರಂಭಿಸಿದ್ದಾರೆ. ಜನರನ್ನು ನಂಬಿಸಲು ಇದು ಸುಳ್ಳಿನ ಕಂತೆಯೊಂದನ್ನು ತಾವೇ ಸೃಷ್ಟಿಸುತ್ತಿದ್ದಾರೆ. ನೋಟಿನ ಜೊತೆ ಮೋದಿ ಅಲೆಯೂ ಕೂಡ ಕೊಚ್ಚಿ ಹೋಗಿದೆ ಎಂದರು.

ಸುಳ್ಳಿನ ಭರವಸೆಯನ್ನು ನೀಡಿದ್ದಾರೆ
ಮೋದಿಯವರು ನಾಲ್ಕೂವರೆ ವರ್ಷದಿಂದ ಸುಳ್ಳಿನ ಭರವಸೆಯನ್ನು ನೀಡಿದ್ದಾರೆ. ನೋಟು ಅಮಾನ್ಯೀಕರಣದಿಂದ ಮೋದಿ ಅಲೆ ಕೊಚ್ಚಿ ಹೋಗಿಲ್ಲ. ಬದಲಾಗಿ ಜನರ ಮುಂದೆ ನಗೆಪಾಟಲಿಗೀಡಾಗಿದ್ದಾರೆ. ಬಿಜೆಪಿಯ ಹಿರಿಯ ನಾಯಕರುಗಳೇ ಇಂದು ಮೋದಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ಮಂಡಲ್ ವರದಿಯನ್ನು ಜಾರಿಗೆ ತಂದವರು ಯಾರು ಎಂದು ವಿಶ್ವನಾಥ್ ಪ್ರಶ್ನಿಸಿದರು.

ವಿರೋಧ ಪಕ್ಷವಾಗಿ ಬಿಜೆಪಿ ವಿಫಲ
ಕರ್ನಾಟಕದಲ್ಲಿ ಒಂದು ವಿರೋಧ ಪಕ್ಷವಾಗಿ ಬಿಜೆಪಿ ವಿಫಲವಾಗಿದೆ. ಪ್ರತಿ ಶಾಸಕರು ರೆಸಾರ್ಟ್ ಬಿಟ್ಟು ತಮ್ಮ ತಮ್ಮ ಸ್ವ ಕ್ಷೇತ್ರಗಳಿಗೆ ತೆರಳಬೇಕು. ಅದರಿಂದ ಯಾವ ಸರ್ಕಾರವೂ ಬೀಳುವುದಿಲ್ಲ. ಲೋಕಸಭಾ ಚುನಾವಣೆಗೆ ತಯಾರಿ ನಡೆಯುತ್ತಿದೆ. ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಜನ ಯೋಚಿಸುತ್ತಿದ್ದಾರೆ. ಮೋದಿಯವರ ಮೌಲ್ಯಮಾಪನ ಕೂಡ ನಡೆಯುತ್ತಿದೆ. ಅದಲ್ಲದೇ ಹೊಸ ಹೊಸ ಆಶ್ವಾಸನೆ ಕೊಡುತ್ತಿದ್ದಾರೆ. ರಾಮಮಂದಿರ ನಿರ್ಮಾಣ ಮಾಡುವುದಕ್ಕೆ ಮುಂದಾಗಿದ್ದಾರೆ. ಮುಂಚೆಯೇ ರಾಮಮಂದಿರ ನಿರ್ಮಾಣಕ್ಕೆ ಮುಂದಾಗಲಿಲ್ಲ ಏಕೆ ? ಎಂದು ಎಚ್ ವಿಶ್ವನಾಥ್ ನೇರವಾಗಿ ಪ್ರಶ್ನಿಸಿದರು












Click it and Unblock the Notifications