ಭಿಕ್ಷುಕನನ್ನು ಗ್ರಾ.ಪಂ ಚುನಾವಣೆಗೆ ನಿಲ್ಲಿಸಿದ ಬೊಕ್ಕಹಳ್ಳಿ ಯುವಕರು
ಮೈಸೂರು, ಡಿಸೆಂಬರ್ 21: ನಿಮಗೆ ದಿ.ಡಾ.ವಿಷ್ಣುವರ್ಧನ್ ಅಭಿನಯದ "ಸಿಂಹಾದ್ರಿಯ ಸಿಂಹ' ಚಲನಚಿತ್ರ ನೆನಪಿರಬಹುದು. ಅದರಲ್ಲಿ ವಿಷ್ಣುವರ್ಧನ್ ಒಬ್ಬ ದಾರಿಹೋಕ ಭಿಕ್ಷುಕನನ್ನು ಎಂಎಲ್ಎ ಮಾಡುತ್ತಾನೆ.
ಅದೇ ಸಿನಿಮೀಯ ರೀತಿಯಲ್ಲಿ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಬೊಕ್ಕಹಳ್ಳಿ ಗ್ರಾಮದ ಯುವಕರು ಈ ಬಾರಿ ವಿನೂತನ ಪ್ರಯತ್ನಕ್ಕೆ ಕೈ ಹಾಕಿದ್ದು, ನಿರ್ಗತಿಕ ವ್ಯಕ್ತಿಯೊಬ್ಬನನ್ನು ಗ್ರಾಮ ಪಂಚಾಯತಿ ಚುನಾವಣೆಗೆ ನಿಲ್ಲಿಸಿದ್ದಾರೆ.
ಗ್ರಾ.ಪಂ ಚುನಾವಣೆ: ತಂಬೂರಿ ಕಲಾವಿದನ ವಿಶಿಷ್ಟ ಶೈಲಿಯ ಮತಯಾಚನೆ
ಇದು ನಂಜನಗೂಡಿನ ಹುಳಿಮಾವು ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸೇರಿರುವ ಗ್ರಾಮವಾಗಿದ್ದು, ಬೊಕ್ಕಹಳ್ಳಿ ಗ್ರಾಮದ ನಿವಾಸಿ ಅಂಕನಾಯಕ ಎಂಬುವರಿಂದ ನಾಮಪತ್ರ ಸಲ್ಲಿಕೆ ಮಾಡಿಸಿದ್ದಾರೆ. ಯುವಕರ ಈ ನಿರ್ಧಾರಕ್ಕೆ ದಿವಂಗತ ಡಾ.ವಿಷ್ಣುವರ್ಧನ್ ಅವರ "ಸಿಂಹಾದ್ರಿಯ ಸಿಂಹ' ಚಲನಚಿತ್ರ ಪ್ರೇರಣೆಯಾಗಿದೆ.
ಊರೂರು ತಿರುಗುತ್ತಾ, ಒಂದೊತ್ತಿನ ಊಟಕ್ಕೂ ಅಲೆಯುತ್ತಿರುವ ಭಿಕ್ಷುಕ ಅಂಕನಾಯಕ ಈಗ ಗ್ರಾಮ ಪಂಚಾಯತಿ ಚುನಾವಣೆಯ ಅಭ್ಯರ್ಥಿ. ಈತ ನಿರ್ಗತಿಕನಾಗಿದ್ದು, ಗ್ರಾಮದ ಬಸ್ ನಿಲ್ದಾಣ ಮತ್ತು ಅಲ್ಲಲ್ಲಿ ವಾಸ ಮಾಡುತ್ತಿದ್ದ ಅಂಕನಾಯಕ ಈಗ ಅಭ್ಯರ್ಥಿಯಾಗಿ ಮತ ಕೇಳುತ್ತಿದ್ದಾನೆ.
ಅಂಕನಾಯಕನನ್ನು ಗ್ರಾಮದ ಯುವಕರು ಯಾವ ರೀತಿ ತಯಾರು ಮಾಡಿದ್ದಾರೆ ಅಂದರೆ ಶ್ವೇತ ವರ್ಣದ ಶರ್ಟ್ ಧರಿಸಿ, ಕೂಲಿಂಗ್ ಗ್ಲಾಸ್ ಹಾಕಿಕೊಂಡು ಊರಲ್ಲೆಲ್ಲಾ ಕಾರಿನಲ್ಲಿ ಓಡಾಡುತ್ತಾ ಓಟ್ ಕೇಳುತ್ತಿದ್ದಾನೆ.
ಅಂಕನಾಯಕ ವಿಶೇಷ ಚೇತನರಾಗಿದ್ದು, ಹಲವಾರು ವರ್ಷಗಳಿಂದ ಭಿಕ್ಷೆ ಬೇಡುತ್ತಾ ಜೀವನ ಸಾಗಿಸುತ್ತಿದ್ದಾನೆ. ಮೊದಲೆಲ್ಲ ನಿತ್ಯವೂ ಒಂದು ಹೊತ್ತಿನ ಊಟಕ್ಕೆ ಹತ್ತು ಮನೆ ತಿರುಗುತ್ತಿದ್ದ ಈತನಿಗೆ ಈಗ ನಿತ್ಯ ಕನಿಷ್ಟ ಊಟವಂತೂ ದೊರೆಯುತ್ತಿದೆ. ಗ್ರಾಮದ ಯುವಕರ ಈ ನಿರ್ಧಾರಕ್ಕೆ ಕಾರಣವೇನೆಂದರೆ ಈ ಹಿಂದೆಲ್ಲ ಚುನಾಯಿಸಿ ಕಳಿಸಿದ್ದ ಗ್ರಾಮ ಪಂಚಾಯತಿ ಸದಸ್ಯರು ಗ್ರಾಮದ ಅಭಿವೃದ್ಧಿಗೆ ಯಾವುದೇ ಕೆಲಸ ಮಾಡದಿರುವುದು.
ಕೆಲಸ ಮಾಡದಿದ್ದರೂ ಹಣ ನೀಡಿ ಚುನಾವಣೆ ಗೆಲ್ಲುತ್ತಿದ್ದರು. ಹಾಗಾಗಿ ಈ ಬಾರಿ ಹಣ ನೀಡಿ ಮತ ಪಡೆಯಲು ಸಾಧ್ಯವಿಲ್ಲದ ಭಿಕ್ಷುಕನನ್ನು ಚುನಾವಣೆಗೆ ನಿಲ್ಲಿಸಿ ನಾವೂ ಹಣ ಪಡೆಯದೆ ಇವರನ್ನೇ ಗೆಲ್ಲಿಸಲು ಪ್ರಯತ್ನ ನಡೆಸಿದ್ದೇವೆ ಎಂದು ಯುವಕರು ತಿಳಿಸಿದ್ದಾರೆ.
ಅಂಕನಾಯಕರಿಗೆ ಪ್ರತಿಸ್ಪರ್ಧಿಯಾಗಿ ಮತ್ತೊಬ್ಬರು ಸ್ಪರ್ಧೆ ಮಾಡಿದ್ದಾರೆ. ಇದೇ ಡಿಸೆಂಬರ್ 27 ರಂದು ಹುಳಿಮಾವು ಗ್ರಾಮ ಪಂಚಾಯಿತಿಗೆ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಯಾರಿಗೆ ಗೆಲುವು ಸಿಗಲಿದೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.