ಅಯ್ಯೋ.. ನಮ್ಮ ಮಠಾಧೀಶರನ್ನು ಆ ದೇವರೇ ಕಾಪಾಡಬೇಕು!
ಮೈಸೂರು, ಜುಲೈ 21: ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪನವರನ್ನು ಕೆಳಗಿಳಿಸಬಾರದು ಎಂದು ನಾಡಿನ ವಿವಿಧ ಮಠಾಧೀಪತಿಗಳು ಒತ್ತಾಯಿಸುತ್ತಿರುವುದಕ್ಕೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಲೇವಡಿ ಮಾಡಿದ್ದಾರೆ.
"ಅಯ್ಯೋ.. ಆ ಮಠಾಧೀಶರನ್ನು ದೇವರೇ ಕಾಪಾಡಬೇಕು. ನನಗೆ ಮಠಗಳು ಮತ್ತು ಮಠಾಧೀಶರ ಬಗ್ಗೆ ಗೌರವವಿದೆ. ನಮ್ಮ ಮಠಗಳಿಗೆ ಐತಿಹಾಸಿಕ ಪರಂಪರೆ ಅನ್ನೋದು ಇದೆ"ಎಂದು ವಾಟಾಳ್ ನಾಗರಾಜ್ ಅಭಿಪ್ರಾಯ ಪಟ್ಟಿದ್ದಾರೆ.
"ಮಠಾಧೀಪತಿಗಳು ಬೀದಿಗೆ ಬಂದ ಉದಾಹರಣೆಗಳು ಕಮ್ಮಿ, ಅದಕ್ಕೆ ಅವರ ಆತ್ಮಸಾಕ್ಷಿ ಅನ್ನೋದು ಒಪ್ಪುವುದಿಲ್ಲ. ಜನರು ಮಠಗಳಿಗೆ ಹೋಗಿ, ಸ್ವಾಮೀಜಿಗಳ ದರ್ಶನ ಪಡೆದು, ಅವರ ಆಶೀರ್ವಾದ ಪಡೆಯುವುದು ನಮ್ಮ ಕರ್ತವ್ಯ"ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ.

"ಆದರೆ ಯಡಿಯೂರಪ್ಪನವರ ಆಡಳಿತದಲ್ಲಿ ಮಠಗಳನ್ನು ಅಪವಿತ್ರ ಮಾಡಲಾಗಿದೆ. ವೀರಶೈವ ಲಿಂಗಾಯತ ಸಮುದಾಯ ವಿಶ್ವದಲ್ಲೇ ಅದ್ಭುತವಾದ ಸಮಾಜ. ಬಸವಣ್ಣನವರ ಸಿದ್ದಾಂತ ವಿಶ್ವಕ್ಕೆ ದಾರಿದೀಪ, ಇಂತಹ ಸಮಾಜವನ್ನು ಮುಖ್ಯಮಂತ್ರಿಗಳು ಕತ್ತಲಲ್ಲಿ ಇಡುತ್ತಿದ್ದಾರೆ"ಎಂದು ವಾಟಾಳ್ ಆರೋಪಿಸಿದ್ದಾರೆ.
"ನಿಜಲಿಂಗಪ್ಪ, ಜತ್ತಿ, ವೀರೇಂದ್ರ ಪಾಟೀಲ್ ಅಧಿಕಾರ ನಡೆಸಿದರು, ಯಾವತ್ತೂ ಇವರುಗಳೆಲ್ಲಾ ಮಠಗಳನ್ನು ಬಳಸಿಕೊಳ್ಳಲಿಲ್ಲ. ಪಾಟೀಲರು ಅಧಿಕಾರವನ್ನು ಕಳೆದುಕೊಂಡಾಗ, ಯಾವ ಮಠಾಧೀಶರೂ ಬೀದಿಗೆ ಬಂದಿರಲಿಲ್ಲ"ಎಂದು ವಾಟಾಳ್ ನಾಗರಾಜ್ ಅಂದಿನ ಘಟನೆಯನ್ನು ಮೆಲುಕು ಹಾಕಿಕೊಂಡರು.
"ಕೇವಲ ಒಂದು ಮತಗಳ ಅಂತರವಿತ್ತು ಎನ್ನುವ ಕಾರಣಕ್ಕಾಗಿ ವೀರೇಂದ್ರ ಪಾಟೀಲರು ರಾಜೀನಾಮೆಯನ್ನು ನೀಡಿದ್ದರು. ಅಂತಹ ಆದರ್ಶ ಮುಖ್ಯಮಂತ್ರಿಗಳನ್ನು ನಾವು ನೋಡಿದ್ದೇವೆ"ಎಂದು ವಾಟಾಳ್ ನಾಗರಾಜ್ ಹೇಳಿದರು.












Click it and Unblock the Notifications