ಮೈಸೂರು ಜೆಡಿಎಸ್ನಲ್ಲಿ ಮತ್ತೆ ಸ್ಫೋಟಗೊಂಡ ಭಿನ್ನಮತ!
ಮೈಸೂರು, ಜುಲೈ 10: ಮೊನ್ನೆಯಷ್ಟೇ ಜೆಡಿಎಸ್ ಮುಖಂಡ ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಬಹಿರಂಗವಾಗಿಯೇ ಜೆಡಿಎಸ್ ವಿರುದ್ಧ ಅಪಸ್ವರ ಎತ್ತಿದ ಪ್ರಕರಣ ತಣ್ಣಗಾಗಿದ್ದು, ಈಗ ಮತ್ತೊಂದು ಮೈಸೂರು ಜೆಡಿಎಸ್ನಲ್ಲಿ ಭಿನ್ನಮತ ಪ್ರಕರಣ ತಲೆದೂರಿದೆ.
ದೇವೇಗೌಡರೇ ಫೈನಲ್, ಮಗನ ಮಾತಿಗೆ ಮಹತ್ವ ಇಲ್ಲ ಎಂದ ರೇವಣ್ಣ
ಮೈಸೂರು ವಿಶ್ವ ವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ. ರಂಗಪ್ಪ ಇಂದು(ಜುಲೈ 10) ಅಧಿಕೃತವಾಗಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿರುವುದು ಈ ಭಿನ್ನಮತ ಸ್ಫೋಟಕ್ಕೆ ಕಾರಣವಾಗಿದೆ. ಮೈಸೂರು ನಗರದ ಜೆಡಿಎಸ್ ಅಧ್ಯಕ್ಷ ಹರೀಶ್ ಗೌಡ ರಂಗಪ್ಪ ಜೆಡಿಎಸ್ ಸೇರ್ಪಡೆಯ ಬಗ್ಗೆ ಅಪಸ್ವರ ಎತ್ತಿದ್ದಾರೆ.
ಮೈಸೂರಿನ ಚಾಮರಾಜ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಹರೀಶ್ ಗೌಡ ಅವರು ಹಲವಾರು ತಿಂಗಳುಗಳಿಂದ ಈ ಕ್ಷೇತ್ರದಲ್ಲಿ ಸಂಚರಿಸಿ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುತ್ತಿದ್ದಾರೆ. ತಮಗೆ ಈ ಕ್ಷೇತ್ರದಿಂದ ಟಿಕೆಟ್ ಸಿಗುತ್ತದೆ ಎಂಬ ಹಿನ್ನೆಲೆಯಲ್ಲಿ ಹಲವಾರು ಜನಪರ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದರು.
ಆದರೆ ಇತ್ತೀಚಿಗೆ ಜೆಡಿಎಸ್ನಲ್ಲಾದ ರಾಜಕೀಯ ಬೆಳವಣಿಗೆಯಿಂದ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿರುವ ಪ್ರೊ.ರಂಗಪ್ಪ ಅವರಿಗೆ ಚಾಮರಾಜ ಕ್ಷೇತ್ರದಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಬಹುತೇಕ ಖಚಿತವಾಗಿದೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಮೈಸೂರು ಜೆಡಿಎಸ್ನಲ್ಲಿ ಭಿನ್ನಮತ ಸ್ಫೋಟಗೊಂಡಿದೆ.
ಇಂದು ನಡೆಯುತ್ತಿರುವ ಪ್ರೊ.ರಂಗಪ್ಪನವರ ಪಕ್ಷಸೇರ್ಪಡೆ ಕಾರ್ಯಕ್ರಮವನ್ನು ಬಹಿಷ್ಕರಿಸಿ ಹರೀಶ್ ಗೌಡ ಕೇರಳದ ದೇಗುಲಗಳಿಗೆ ಬೇಟಿ ನೀಡಿದ್ದಾರೆ, ಇನ್ನು ಜೆಡಿಎಸ್ ನಾಯಕರು ಈ ಭಿನ್ನಮತವನ್ನ ಯಾವ ರೀತಿ ಶಮನಗೊಳಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.