ಮೈಸೂರಿನ ಪ್ರವಾಸಿತಾಣಗಳಿಗೆ ಇನ್ಮುಂದೆ ಏಕರೂಪ ಟಿಕೆಟ್
ಮೈಸೂರು, ಆಗಸ್ಟ್ 26 : ಸಾಂಸ್ಕೃತಿಕ ನಗರಿಯ ಪ್ರಮುಖ ಐದು ಪ್ರವಾಸಿ ತಾಣಗಳ ವೀಕ್ಷಣೆಗೆ ಏಕ ರೂಪ ಟಿಕೆಟ್ ವ್ಯವಸ್ಥೆ ಜಾರಿಗೆ ತರಲು ಮೈಸೂರು ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ನಿರ್ಧರಿಸಿದೆ.
ಪ್ರವಾಸಿಗರು ಆನ್ಲೈನ್ನಲ್ಲಿ ಒಂದು ಟಿಕೆಟ್ ಖರೀದಿಸಿ ವಿಶ್ವವಿಖ್ಯಾತ ಅಂಬಾವಿಲಾಸ ಅರಮನೆ, ಚಾಮರಾಜೇಂದ್ರ ಮೃಗಾಲಯ, ಕಾರಂಜಿ ಕೆರೆ, ಚಾಮುಂಡಿಬೆಟ್ಟ, ಕೆಆರ್ ಎಸ್ ಜಲಾಶಯಕ್ಕೆ ಭೇಟಿ ನೀಡಬಹುದು. ಬೇಸಿಗೆ ರಜೆ, ವಾರಾಂತ್ಯ ಹಾಗೂ ಸರ್ಕಾರಿ ರಜೆ ಸಮಯದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಹಾಗೂ ವಿದೇಶಿ ಪ್ರವಾಸಿಗರ ಬೇಡಿಕೆಯಿಂದ ಈ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಿದೆ.

ಟಿಕೆಟ್ ಪಡೆಯುವುದು ಹೇಗೆ ?
ಬುಕ್ಮೈಶೋ (BookMyShow) ಕಂಪನಿ ಸಹಯೋಗದಲ್ಲಿ ಈ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಸದ್ಯ ರಾಜ್ಯದಲ್ಲಿ ಇಂಥ ವ್ಯವಸ್ಥೆ ಎಲ್ಲೂ ಇಲ್ಲ. ದಸರಾ ವೆಬ್ಸೈಟ್ ಹಾಗೂ ಪ್ರವಾಸಿ ತಾಣಗಳ ವೆಬ್ಸೈಟ್ ಮೂಲಕ ಆನ್ಲೈನ್ನಲ್ಲಿ ಟಿಕೆಟ್ ಖರೀದಿಸಬಹುದು. ಇದಕ್ಕಾಗಿ ಆಪ್ ಕೂಡ ಇರಲಿದೆ. ಇ-ಮೇಲ್ಗೆ ಟಿಕೆಟ್ ರವಾನಿಸಲಾಗುತ್ತದೆ.
ಕೇಂದ್ರೀಕೃತ ಟಿಕೆಟ್ ವ್ಯವಸ್ಥೆ ಜಾರಿಗೆ ತರಲು ರೂಪುರೇಷೆ ಸಿದ್ಧಪಡಿಸಲಾಗಿದೆ. ದಸರಾ ಮಹೋತ್ಸವದೊಳಗೆ ಇದು ಜಾರಿಗೆ ಬರಲಿದೆ. ಪ್ರವಾಸಿಗರು ಸರತಿ ಸಾಲಿನಲ್ಲಿ ನಿಲ್ಲುವುದು ತಪ್ಪುತ್ತದೆ. ನಿಗದಿತ ಶುಲ್ಕ ಪಾವತಿಸಿ ಆನ್ಲೈನ್ನಲ್ಲಿ ಟಿಕೆಟ್ ಖರೀದಿಸಬಹುದು ಎನ್ನುತ್ತಾರೆ ಜಿಲ್ಲಾಧಿಕಾರಿ ಡಿ.ರಂದೀಪ್.
ಈಗಾಗಲೇ ಚಾಮುಂಡೇಶ್ವರಿ ದೇಗುಲ, ಅರಮನೆ, ಮೃಗಾಲಯ, ಕಾರಂಜಿಕೆರೆ ವೀಕ್ಷಣೆಗೆ ಆನ್ಲೈನ್ನಲ್ಲಿ ಪ್ರತ್ಯೇಕವಾಗಿ ಟಿಕೆಟ್ ಖರೀದಿಸುವ ವ್ಯವಸ್ಥೆ ಜಾರಿಗೆ ತರಲಾಗಿದೆ.
ಅವೆಲ್ಲವನ್ನೂ ಈಗ ಕೇಂದ್ರೀಕರಿಸಲಾಗುತ್ತಿದೆ. ಮೈಸೂರಿಗೆ ವರ್ಷಕ್ಕೆ ಸುಮಾರು 35 ಲಕ್ಷ ಪ್ರವಾಸಿಗರು ಭೇಟಿ ನೀಡುತ್ತಿದ್ದು, ಈ ಹಿನ್ನೆಲೆ ಈ ಯೋಜನೆ ಹೊರತರಲಾಗಿದೆ.












Click it and Unblock the Notifications