Get Updates
Get notified of breaking news, exclusive insights, and must-see stories!

ವನ್ಯಪ್ರಾಣಿ- ಮಾನವ ಸಂಘರ್ಷ ನಿಲ್ಲದಿರುವುದಕ್ಕೆ ಕಾರಣ ಯಾರು ಗೊತ್ತಾ?

ಮೈಸೂರು, ಮಾರ್ಚ್‌ 12: ನಮ್ಮನ್ನಾಳಿದ ಸರ್ಕಾರಗಳು ಮನಸ್ಸು ಮಾಡಿದ್ದರೆ ಇಷ್ಟರಲ್ಲೇ ಅರಣ್ಯದಿಂದ ವನ್ಯಪ್ರಾಣಿಗಳು ನಾಡಿಗೆ ಬರದಂತೆ ತಡೆಯಬಹುದಿತ್ತು. ಅಷ್ಟೇ ಅಲ್ಲದೆ ಮಾನವ ಮತ್ತು ವನ್ಯ ಪ್ರಾಣಿ ಸಂಘರ್ಷಕ್ಕೂ ತಡೆಯೊಡ್ಡಬಹುದಿತ್ತು. ಆದರೆ ಗಂಭೀರವಾದ ಕ್ರಮಗಳನ್ನು ಕೈಗೊಳ್ಳದೆ ಹೋಗಿದ್ದರಿಂದಾಗಿ ಇವತ್ತು ವನ್ಯಪ್ರಾಣಿಗಳು ನಾಡಿಗೆ ಬರುತ್ತಿದ್ದು ಅರಣ್ಯದಂಚಿನಲ್ಲಿ ಬದುಕು ಕಟ್ಟಿಕೊಂಡಿರುವ ಜನರು ಅವುಗಳೊಂದಿಗೆ ಹೋರಾಡುತ್ತಾ, ಪ್ರಾಣ ತ್ಯಾಗ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ಪ್ರತಿದಿನವೂ ಒಂದಲ್ಲ ಒಂದು ಕಡೆ ವನ್ಯ ಪ್ರಾಣಿಗಳ ದಾಳಿಗೆ ಸಿಕ್ಕಿ ಜನ ಸಾವನ್ನಪ್ಪುತ್ತಿರುವ ಸುದ್ದಿಗಳು ಬರುತ್ತಿದ್ದು, ಇಲ್ಲಿ ಅಮಾಯಕರು ಬಲಿಯಾಗುತ್ತಿದ್ದಾರೆ. ಅರಣ್ಯದಂಚಿನಲ್ಲಿ ಕೃಷಿ ಮಾಡಿಕೊಂಡು ಜೀವನ ಮಾಡುತ್ತಿರುವ ರೈತರು ತಲಾಂತರದಿಂದ ಬಂದಿರುವ ಕೃಷಿ ಭೂಮಿಯನ್ನು ಬಿಟ್ಟು ಹೊರ ಬರಲಾರದ ಸ್ಥಿತಿಯಲ್ಲಿದ್ದಾರೆ. ಅವರಿಗೆ ಕೃಷಿಯೇ ಬದುಕಾಗಿರುವುದರಿಂದ ಅದನ್ನು ಮಾಡದಿದ್ದರೆ ಜೀವನ ನಡೆಯುವುದಿಲ್ಲ. ಹೀಗಾಗಿ ಹೊಲಗದ್ದೆಗಳಲ್ಲಿ ದುಡಿಯಲೇ ಬೇಕಾಗಿದೆ. ಇಂತಹ ಸಂದರ್ಭಗಳಲ್ಲಿ ಅವರು ವನ್ಯ ಪ್ರಾಣಿಗಳಿಗೆ ಸಿಕ್ಕಿ ಜೀವ ಕಳೆದುಕೊಳ್ಳುವ ಪರಿಸ್ಥಿತಿ ಉದ್ಭವಿಸುತ್ತಿದೆ.

Understanding Human-Wildlife Conflict Causes and Solutions

ಅರಣ್ಯದಿಂದ ವನ್ಯಪ್ರಾಣಿಗಳು ಹೊರಹೋಗದಂತೆ ತಡೆಯುವ ಸಲುವಾಗಿ ಆನೆ ಕಂದಕ, ಸೋಲಾರ್ ಬೇಲಿ, ರೈಲ್ವೆ ಬ್ಯಾರಿಕೇಡ್ ಮುಂತಾದವುಗಳನ್ನು ಅರಣ್ಯದ ಸುತ್ತಲೂ ನಿರ್ಮಿಸುವ ಯೋಜನೆಗಳು ಹಿಂದಿನಿಂದಲೂ ಇವೆ. ಆದರೆ ಅವು ಯಾವುದೂ ಪರಿಪೂರ್ಣವಾಗದಿರುವುದು ಜತೆಗೆ ಕೈಗೊಂಡ ಕಾಮಗಾರಿಗಳನ್ನು ಮುಗಿಸಿದ ಬಳಿಕ ಅವುಗಳ ನಿರ್ವಹಣೆ ಮಾಡದೆ ಇರುವುದರಿಂದಾಗಿ ಇವತ್ತು ಕಾಡಾನೆ, ಹುಲಿ, ಚಿರತೆ ಸೇರಿದಂತೆ ವನ್ಯಪ್ರಾಣಿಗಳು ಸರಾಗವಾಗಿ ನಾಡಿಗೆ ಸಾಧ್ಯವಾಗುತ್ತಿವೆ.

ಅನುದಾನದ ಕೊರತೆಯಿಂದ ಸಮಸ್ಯೆ ಉಲ್ಬಣ

ಇಲ್ಲಿವರೆಗೆ ಅರಣ್ಯ ಇಲಾಖೆ ವನ್ಯ ಪ್ರಾಣಿಗಳು ಕಾಡಿನಿಂದ ನಾಡಿನತ್ತ ಸುಳಿಯದಂತೆ ಹಲವು ರೀತಿಯ ವಿನೂತನ ಕ್ರಮಗಳನ್ನು ಕೈಗೊಂಡರೂ ಮಾನವ ಮತ್ತು ಪ್ರಾಣಿಗಳ ಸಂಘರ್ಷ ನಿಂತಂತೆ ಕಾಣುತ್ತಿಲ್ಲವೇಕೆ? ಎನ್ನುವುದೇ ಜನ ಕೇಳಿಕೊಳ್ಳುತ್ತಿರುವ ಪ್ರಶ್ನೆಯಾಗಿದೆ. ಆದರೆ ಇಲ್ಲಿ ಬಹುಮುಖ್ಯ ವಿಚಾರ ಏನೆಂದರೆ ಜನ ಅರಣ್ಯ ಇಲಾಖೆಯತ್ತ ಬೊಟ್ಟು ಮಾಡಿ ಆಕ್ರೋಶ ವ್ಯಕ್ತಪಡಿತ್ತಾರೆ. ಆದರೆ ಅರಣ್ಯ ಇಲಾಖೆ ಅನುದಾನದ ಕೊರತೆಯನ್ನು ಎದುರಿಸುತ್ತಿದ್ದು, ಆರ್ಥಿಕ ಕೊರತೆ ಸಮಸ್ಯೆಗಳನ್ನು ಹುಟ್ಟುಹಾಕುತ್ತಾ ಹೋಗುತ್ತಿದೆ ಎನ್ನುವುದನ್ನು ಒಪ್ಪಿಕೊಳ್ಳಲೇ ಬೇಕಾಗುತ್ತದೆ.

ಅರಣ್ಯ ಇಲಾಖೆ ಅಧಿಕಾರಿಗಳು ನಮಗೆ ಅನುದಾನ ಕೊರತೆಯಾಗಿದೆ ಹೀಗಾಗಿ ಅಂದುಕೊಂಡಂತೆ ಕೆಲಸವನ್ನು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಆದರೆ ನಾವೇ ಆಯ್ಕೆ ಮಾಡಿ ಕಳಿಸಿದ ಜನಪ್ರತಿನಿಧಿಗಳು ಅದರಲ್ಲೂ ಅರಣ್ಯ ಸಚಿವರಾದವರು ಈ ಬಗ್ಗೆ ಆಸಕ್ತಿ ವಹಿಸಿ ಒಂದೊಳ್ಳೆಯ ಯೋಜನೆಗಳನ್ನು ಅಥವಾ ಈಗಾಗಲೇ ಮಾಡಿರುವ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದರೂ ಸಾಕು. ಜತೆಗೆ ಸೋಲಾರ್ ಬೇಲಿ, ಆನೆ ಕಂದಕ, ರೈಲ್ವೆ ಬ್ಯಾರಿಕೇಡ್ ಮೊದಲಾದವುಗಳನ್ನು ನಿರ್ವಹಣೆ ಮಾಡುವ ಕೆಲಸ ಮಾಡಿದರೂ ಒಂದಷ್ಟು ಮಟ್ಟಿಗೆ ವನ್ಯಪ್ರಾಣಿಗಳು ಕಾಡಿಗೆ ಬರುವುದನ್ನು ತಡೆಯಲು ಸಾಧ್ಯವಾಗಬಹುದೇನೋ?

Understanding Human-Wildlife Conflict Causes and Solutions

ಮಾನವ ವನ್ಯ ಪ್ರಾಣಿಗಳ ಸಂಘರ್ಷಕ್ಕಿಲ್ಲ ವಿರಾಮ

ಬೇಸಿಗೆಯ ದಿನಗಳಲ್ಲಂತೂ ಕಾಡಾನೆಗಳು ಸೇರಿದಂತೆ ಇತರೆ ಪ್ರಾಣಿಗಳು ಆಹಾರ ಮತ್ತು ನೀರು ಅರಸಿ ನಾಡಿನತ್ತ ಬರುವುದು ಸಾಮಾನ್ಯವಾಗಿದೆ. ಅದರಲ್ಲೂ ಇನ್ನು ಮುಂದೆ ಹಲಸು ಹಣ್ಣಾಗುವ ಸಮಯವಾಗಿರುವುದರಿಂದ ಅದನ್ನು ಅರಸಿಕೊಂಡು ಕಾಡಾನೆಗಳು ಅರಣ್ಯವನ್ನು ದಾಟಿ ಹೋಗುವುದು ಮಾಮೂಲಿಯಾಗಿದೆ. ಹೀಗೆ ಕಾಡು ದಾಟಿ ಹೋಗುವ ಕಾಡಾನೆಗಳು ನೇರವಾಗಿ ರೈತರ ಜಮೀನಿಗೆ ಲಗ್ಗೆಯಿಡುತ್ತವೆಯಲ್ಲದೆ, ಎದುರಿಗೆ ಸಿಕ್ಕವರ ಮೇಲೆ ದಾಳಿ ಮಾಡುತ್ತವೆ. ವನ್ಯಪ್ರಾಣಿಗಳಿಂದ ರೈತರು ಅಥವಾ ಜನಸಾಮಾನ್ಯರ ಪ್ರಾಣಹಾನಿ ಸಂಭವಿಸಿದರೆ ಅರಣ್ಯ ಇಲಾಖೆಯೇ ಪರಿಹಾರ ನೀಡಬೇಕಾಗುತ್ತದೆ.

ಹಾಗೆನೋಡಿದರೆ ಮಾನವ ಮತ್ತು ವನ್ಯ ಪ್ರಾಣಿಗಳ ಸಂಘರ್ಷ ಇವತ್ತು ನಿನ್ನೆಯದಲ್ಲ. ಹಿಂದಿನ ಕಾಲದಿಂದ ನಡೆದುಕೊಂಡೇ ಬಂದಿದೆ. ಇದುವರೆಗೆ ಸಾವಿರಾರು ಜನ ವನ್ಯ ಪ್ರಾಣಿಗಳ ದಾಳಿಗೆ ಸಿಕ್ಕಿ ಸಾವನ್ನಪ್ಪಿದ್ದಾರೆ. ರೈತರು ಕಷ್ಟಪಟ್ಟು ಬೆಳೆದ ಫಸಲು ನಾಶವಾಗಿದೆ. ಇದನ್ನು ತಡೆಯಲು ಸರ್ಕಾರ ಹಲವು ರೀತಿಯ ಕ್ರಮಗಳನ್ನು ಕೈಗೊಂಡಿದ್ದರೂ ಅದನ್ನು ಮೀರಿದ ಘಟನೆಗಳು ನಡೆಯುತ್ತಲೇ ಇರುತ್ತದೆ. ಅದರಲ್ಲೂ ಹುಲಿಸಂರಕ್ಷಿತ ಪ್ರದೇಶವಾಗಿರುವ ಬಂಡೀಪುರ ಸುತ್ತಮುತ್ತ ಆಗಾಗ್ಗೆ ಕಾಡುಪ್ರಾಣಿಗಳು ನಾಡಿಗೆ ನುಗ್ಗಿ ಫಸಲು ನಾಶ ಮಾಡುವುದರೊಂದಿಗೆ ಕೆಲವೊಮ್ಮೆ ಜನ ಜಾನುವಾರುಗಳ ಪ್ರಾಣ ಹಾನಿಗೂ ಕಾರಣವಾಗುತ್ತಿವೆ

ಇನ್ನಾದರೂ ಸರ್ಕಾರ ಅರಣ್ಯದತ್ತ ಗಮನಹರಿಸಲಿ

ಈ ಸಂಘರ್ಷ ತಡೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರವು ಪ್ರಯತ್ನ ಮಾಡುತ್ತಿದ್ದರೂ ಕೂಡ ಅನುದಾನದ ಕೊರತೆಯಿಂದ ನಿರೀಕ್ಷೆ ಮಾಡಿದಷ್ಟು ಗುರಿ ಸಾಧಿಸಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ತಳ್ಳಿಹಾಕಲಾಗದು. ಮೊದಲೆಲ್ಲ ಕಾಡಾನೆಗಳು ಅರಣ್ಯ ದಾಟಿ ಬಾರದಂತೆ ಆನೆಕಂದಕ ನಿರ್ಮಿಸಲಾಗುತ್ತಿತ್ತು. ತದನಂತರ ಸೋಲಾರ್ ಬೇಲಿ ಅಳವಡಿಕೆ ಮಾಡಲಾಯಿತು. ಇತ್ತೀಚೆಗಿನ ವರ್ಷಗಳಲ್ಲಿ ಅರಣ್ಯ ಇಲಾಖೆ ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡುತ್ತಿರುವುದು ಕಂಡು ಬರುತ್ತಿದೆ. ಇದಕ್ಕೆ ತಗಲುವ ವೆಚ್ಚವೂ ಜಾಸ್ತಿಯಾಗುತ್ತಿದೆ. ಪ್ರತಿ ಕಿ.ಮೀ. ಗೆ ಸುಮಾರು ಒಂದೂವರೆ ಕೋಟಿಯಷ್ಟಾದರೂ ಹಣ ಬೇಕಾಗುತ್ತದೆ. ಹೀಗಾಗಿ ಅರಣ್ಯದ ಸುತ್ತ ಇದನ್ನು ಅಳವಡಿಸುವುದು ಕನಸಿನ ಮಾತಾಗಿದೆ.

Understanding Human-Wildlife Conflict Causes and Solutions

ಕೆಲವೇ ಕೆಲವು ಕಡೆಗಳಲ್ಲಿ ಮಾತ್ರ ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡಲಾಗಿದ್ದು, ಈ ಬ್ಯಾರಿಕೇಡ್ ಗಳಿಗೆ ಆನೆಗಳು ಸಿಕ್ಕಿ ಹಾಕಿಕೊಳ್ಳುತ್ತಿರುವ ಪ್ರಕರಣಗಳು ಕಂಡು ಬರುತ್ತಿವೆ. ಯಾವುದೇ ಸರ್ಕಾರ ಬಂದರೂ ಇದರ ಬಗ್ಗೆ ಗಂಭೀರವಾಗಿ ತೆಗೆದುಕೊಳ್ಳದೆ ಇರುವುದರಿಂದ ಮತ್ತು ಅರಣ್ಯ ಇಲಾಖೆಗೆ ಹೆಚ್ಚಿನ ಅನುದಾನಗಳನ್ನು ನೀಡದೆ ಇರುವುದರಿಂದ, ಸಿಬ್ಬಂದಿಗಳ ಕೊರತೆ, ಹೀಗೆ ಹತ್ತಾರು ಕಾರಣಗಳಿಂದಾಗಿ ಅರಣ್ಯದಿಂದ ಕಾಡುಪ್ರಾಣಿಗಳು ನಾಡಿಗೆ ಬರುವುದನ್ನು ತಡೆಯುವಲ್ಲಿ ಅರಣ್ಯ ಇಲಾಖೆ ವಿಫಲವಾಗುತ್ತಿದೆ. ಇದರ ಪರಿಣಾಮವನ್ನು ಜನ ಸಾಮಾನ್ಯರು ಅನುಭವಿಸಬೇಕಾಗಿದೆ. ಸರ್ಕಾರಗಳು ಎಲ್ಲಿವರೆಗೆ ಗಂಭೀರವಾಗಿ ಪರಿಗಣಿಸುವುದಿಲ್ಲವೋ ಅಲ್ಲಿವರೆಗೆ ಮಾನವ ಮತ್ತು ವನ್ಯಪ್ರಾಣಿಗಳ ಸಂಘರ್ಷ ನಿಲ್ಲುವುದಿಲ್ಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+