ಆರೆಸ್ಸೆಸ್ ಕಾರ್ಯಕರ್ತನ ಹುಟ್ಟುಹಬ್ಬದಲ್ಲಿ ಮುಸ್ಲಿಂ ಮಹಿಳೆಯರ ರಕ್ತದಾನ!
ಮೈಸೂರು, ಆಗಸ್ಟ್ 29: ಆರ್ಎಸ್ಎಸ್ ಕಾರ್ಯಕರ್ತ ಕ್ಯಾತಮಾರನಹಳ್ಳಿ ರಾಜು ಹುಟ್ಟುಹಬ್ಬದ ಹಿನ್ನಲೆಯಲ್ಲಿ ಅವರ ಸ್ನೇಹಿತರು ಇಂದು(ಆಗಸ್ಟ್ 29) ರಕ್ತದಾನ ಮಾಡುವ ಮೂಲಕ ಗೆಳೆಯನನ್ನು ಸ್ಮರಿಸಿಕೊಂಡರು. ಈ ಪೈಕಿ ಇಬ್ಬರು ಮುಸ್ಲಿಂ ಮಹಿಳೆಯರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿರುವುದು ವಿಶೇಷ.
ಜನವಸತಿ ಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಾಣವಾಗುತ್ತಿದ್ದ ಕಟ್ಟಡವೊಂದರ ವಿರುದ್ಧ ಹೋರಾಟ ಮಾಡಿದ್ದ ರಾಜುವನ್ನು ಸಂಘಟನೆಯೊಂದರಲ್ಲಿ ಗುರುತಿಸಿಕೊಂಡಿದ್ದ ಯುವಕನೊಬ್ಬ 2016 ಮಾರ್ಚ್ 13ರಂದು ಹತ್ಯೆಗೈದು ತಲೆ ಮರೆಸಿಕೊಂಡಿದ್ದ.

ರಾಜುವಿನ ಹತ್ಯೆ ಮೈಸೂರಿನಲ್ಲಿ ಸಂಚಲನವನ್ನುಂಟು ಮಾಡಿತ್ತು. ಕೊನೆಗೂ ಆರೋಪಿಯನ್ನು ಹಿಡಿಯುವಲ್ಲಿ ಮೈಸೂರು ಪೊಲೀಸರು ಯಶಸ್ವಿಯಾಗಿದ್ದರು.
ಒಂದೆರಡು ದಿನಗಳ ಕಾಲ ರಾಜು ವಾಸವಿದ್ದ ಏರಿಯಾದಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿತ್ತು. ಈ ಬಾರಿ ಆತನ ಗೆಳೆಯರು ಸೇರಿ ಹುಟ್ಟು ಹಬ್ಬವನ್ನು ಮಂಗಳವಾರ ಆಚರಿಸಿದ್ದು, ಈ ಪ್ರಯುಕ್ತ ರಕ್ತದಾನ ಕಾರ್ಯಕ್ರಮವನ್ನು ಉದಯಗಿರಿಯ ಗಣಪತಿ ದೇವಾಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು.

ರಕ್ತದಾನ ಕಾರ್ಯಕ್ರಮದಲ್ಲಿ ಒಟ್ಟು 33 ಮಂದಿ ರಕ್ತದಾನ ಮಾಡಿದರು, ಈ ಪೈಕಿ ಇಬ್ಬರು ಮುಸ್ಲಿಂ ಮಹಿಳೆಯರು ಸ್ವಯಂ-ಪ್ರೇರಿತವಾಗಿ ರಕ್ತದಾನ ಮಾಡಿದ್ದು ವಿಶೇಷವಾಗಿದೆ.
ಇದೇ ವೇಳೆ ಹಿಂದೂ ಸಂಘಟನೆಗಳ ಒಕ್ಕೂಟದ ಸಂಚಾಲಕ ಮೈ.ಕಾ.ಪ್ರೇಮ್ ಕುಮಾರ್, ಶ್ರೀರಾಮಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂಜಯ್, ಬಿಜೆಪಿ ಅಲ್ಪಸಂಖ್ಯಾತ ಘಟಕದ ವಿನೋದ್ ಖಾಬ್ರಿಯಾ, ರಾಜು ಸ್ನೇಹಿತರಾದ ಬಾಲು, ಗಣೇಶ, ಸಂತೋಷ, ದಿನೇಶ ಸೇರಿದಂತೆ ಹಲವರು ಭಾಗಿಯಾಗಿದ್ದರು.












Click it and Unblock the Notifications