ತ್ಯಾಜ್ಯಕ್ಕೆ ಬೆಂಕಿ ಹಚ್ಚಿದರೆ 22 ಕಾಯಿಲೆಗಳು ಬರುವುದು ಗ್ಯಾರಂಟಿ!
ಮೈಸೂರು, ಜನವರಿ 17: ಇತ್ತೀಚಿನ ವರ್ಷಗಳಲ್ಲಿ ಕಂಡು ಕೇಳರಿಯದಂತಹ ಚಳಿ ಎಲ್ಲರನ್ನೂ ಕಾಡುತ್ತಿದೆ. ಶೀತಗಾಳಿ, ಮಂಜು ಮುಸುಕಿದ ವಾತಾವರಣ ಬೆಳಗ್ಗೆ 8 ಗಂಟೆಯವರೆಗೂ ಇರುತ್ತದೆ. ಹೀಗಾಗಿ ಅಲ್ಲಲ್ಲಿ ಬೆಂಕಿ ಕಾಯಿಸಿಕೊಳ್ಳುವುದು ಸಾಮಾನ್ಯವಾಗಿ ಕಂಡುಬರುತ್ತಿದೆ.
ಬೆಂಕಿ ಕಾಯಿಸಿಕೊಳ್ಳಲು ಮರದ ಎಲೆಗಳನ್ನು, ತ್ಯಾಜ್ಯವನ್ನು ಮೈಸೂರಿನ ಸುತ್ತಮುತ್ತ ಬಳಸುತ್ತಿದ್ದಾರೆ. ರಸ್ತೆ ಬದಿಯಲ್ಲಿ ಗುಡ್ಡೆ ಮಾಡಿರುವ ಕಸ, ಪೇಪರ್, ರಟ್ಟು ಮುಂತಾದವು ಬೆಂಕಿಗೆ ಆಹುತಿಯಾಗುತ್ತಿವೆ. ಇದರಿಂದ ಇಂಗಾಲದ ಆಮ್ಲ ಹೆಚ್ಚಾಗಿ ಹೊರಸೂಸುತ್ತಿದ್ದು, ಬೂದಿ ಹಾರಾಡುತ್ತಿರುತ್ತವೆ. ರಸ್ತೆಯಲ್ಲಿ ಮನೆಗಳ ಮುಂದೆ ಬೂದಿ ಹಾರಿಬಂದು ಬೀಳುತ್ತಿರುತ್ತವೆ.
ತ್ಯಾಜ್ಯವನ್ನು ಸುಟ್ಟು ಅದರಿಂದ ಬರುವ ಹೊಗೆ ಸೇವನೆಯಿಂದ ಎಷ್ಟು ರೋಗಗಳು ಬರಬಹುದು ಎಂದು ಊಹಿಸಲೂ ಸಾಧ್ಯವಿಲ್ಲ. ಯುಎಸ್ ಪಬ್ಲಿಕ್ ಹೆಲ್ತ್ ಸರ್ವೀಸ್ ನಡೆಸಿದ ಸಮೀಕ್ಷೆ ಪ್ರಕಾರ ಆ ಹೊಗೆಯಿಂದ 22 ರೋಗಗಳು ಬರುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗಿದೆ. ಇದರ ಜತೆಗೆ ಅಲ್ಲಲ್ಲಿ ತ್ಯಾಜ್ಯಗಳಿಗೆ ಬೆಂಕಿ ಹಚ್ಚುವ ಕಾರ್ಯವೂ ನಡೆಯುತ್ತಿದೆ.

ಮೈಸೂರಿನಲ್ಲಿ ಇತ್ತೀಚೆಗೆ ತ್ಯಾಜ್ಯಕ್ಕೆ ಬೆಂಕಿ ಬಿದ್ದು ದೊಡ್ಡ ಮಟ್ಟದಲ್ಲಿ ಹೊಗೆ ಆವರಿಸಿತ್ತು. ಮೈಸೂರು ಸೇರಿದಂತೆ ದೊಡ್ಡ ನಗರಗಳಲ್ಲಿ ದಿನನಿತ್ಯ ನೂರಾರು ಟನ್ ತ್ಯಾಜ್ಯ ಶೇಖರಣೆಯಾಗುತ್ತಿದೆ. ಒಂದಷ್ಟು ಟನ್ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಹೋದರೆ, ಇನ್ನು ಕೆಲವು ನಿರ್ಜನ ಪ್ರದೇಶಗಳಿಗೆ ಹೋಗುತ್ತವೆ.
ಅಂದಹಾಗೆ ತ್ಯಾಜ್ಯಗಳಿಂದ ಅಸ್ತಮಾ, ಹಾರ್ಟ್ಅಟ್ಯಾಕ್, ಎಂಪಿಸೆಮಾ ಹೀಗೆ 22ಕ್ಕೂ ಹೆಚ್ಚು ರೋಗಗಳು ಬರುವ ಸಾಧ್ಯತೆ ಇರುತ್ತದೆ. ಶ್ವಾಸಕೋಶದಲ್ಲಿರುವ ಗಾಳಿಯನ್ನು ಫಿಲ್ಟರ್ ಮಾಡಬಲ್ಲಂತಹ ಯಂತ್ರದಲ್ಲಿ ಪರ್ಟಿಕ್ಯುಲೇಟ್ ಮ್ಯಾಟರ್ಸ್ 2.5 ಮೆಟೀರಿಯಲ್ ಗಿಂತ ಹೆಚ್ಚು ಧೂಳಿನ ಕಣಗಳು ಸೇರಿಕೊಂಡರೆ ಅದು ರಕ್ತನಾಳಕ್ಕೆ ಸೇರಿ ರಕ್ತವನ್ನು ಅಲ್ಲೇ ಹೆಪ್ಪುಗಟ್ಟುವಂತೆ ಮಾಡುತ್ತದೆ. ಇದು ಹೃದಯಾಘಾತಕ್ಕೆ ಕಾರಣವಾಗಬಲ್ಲದು.

ರಸ್ತೆ ಬದಿಯಲ್ಲಿ ಕಸಕ್ಕೆ ಬೆಂಕಿ ಹಚ್ಚುವುದು ಕಾನೂನು ಬಾಹಿರ. ಹಾಗೆ ಮಾಡಿದರೆ ದಂಡ ವಿಧಿಸುತ್ತೇವೆ ಎಂದು ನಗರಪಾಲಿಕೆ ಅಧಿಕಾರಿಗಳು ಬರಿ ಬಾಯಿ ಮಾತಿನಲ್ಲಷ್ಟೇ ಹೇಳುತ್ತಿದ್ದಾರೆ. ಆದರೆ, ಇದುವರೆಗೂ ಯಾರಿಗೂ ದಂಡ ಹಾಕಿಲ್ಲ ಎನ್ನುವುದು ಖಚಿತವಾಗಿದೆ.












Click it and Unblock the Notifications