ತ್ರಿಷಿಕಾ-ಯದುವೀರ ದಂಪತಿ ಕುಡಿಗೆ 3 ತಿಂಗಳೊಳಗೆ ಅರಮನೆಯಲ್ಲಿ ನಾಮಕರಣ
ಮೈಸೂರು, ಜನವರಿ 4 : ಮೈಸೂರಿನ ರಾಜ ವಂಶಸ್ಥರಲ್ಲಿ ಸಂಭ್ರಮ ಮನೆ ಮಾಡಿದೆ. ತ್ರಿಷಿಕಾ- ಯದುವೀರ್ ದಂಪತಿಯ ಮಗು ಕುಟುಂಬದಲ್ಲಿ ಸಂಭ್ರಮ ತಂದಿದೆ. ಈ ವಿಚಾರವನ್ನು ಮಾಧ್ಯಮದವರ ಜತೆಗೆ ಹಂಚಿಕೊಂಡ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಇನ್ನು ಮೂರು ತಿಂಗಳೊಳಗಾಗಿ ಮಗುವಿನ ನಾಮಕರಣ ಮಾಡುತ್ತೇವೆ ಎಂದು ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲವು ವರ್ಷಗಳ ಬಳಿಕ ಅರಮನೆಯಲ್ಲಿ ಮಗು ಇಂಥ ಸಂಭ್ರಮ ತಂದಿದೆ. ಮಗುವಿಗೆ ನಾಮಕರಣ ಮಾಡಲು ಹೆಸರು ಹುಡುಕುತ್ತಿದ್ದೇವೆ. ಮೂರು ತಿಂಗಳೊಳಗೆ ಹೆಸರು ಇಡುತ್ತೇವೆ ಎಂದ ಅವರು, ಹೊಸ ವರ್ಷವನ್ನು ಮಗುವಿನೊಂದಿಗೆ ಕಳೆದೆ ಎಂದು ತಿಳಿಸಿದರು.

ನಾಮಕರಣಕ್ಕೆ ಕುಟುಂಬ ವರ್ಗದವರು, ದೇಶದ ವಿವಿಧ ರಾಜಮನೆತನದವರಿಗೆ ಆಹ್ವಾನ ನೀಡಲಾಗುವುದು. ಈ ಶುಭ ಕಾರ್ಯವನ್ನು ಮೈಸೂರಿನ ಅರಮನೆಯಲ್ಲಿ ಏರ್ಪಾಡು ಮಾಡಬೇಕೆಂಬ ಉದ್ದೇಶವಿದೆ. ಆದರೆ ಆಗಿನ ಸನ್ನಿವೇಶವನ್ನು ನೋಡಿಕೊಂಡು ನಿರ್ಧಾರ ಕೈಗೊಳ್ಳಲಾಗುವುದು. ನಮ್ಮ ಕುಟುಂಬಕ್ಕೆ ಸಾರ್ವಜನಿಕರು ತೋರಿಸುತ್ತಿರುವ ಪ್ರೀತಿ ನೋಡಿ, ಸಂತಸವಾಗಿದೆ ಎಂದು ಹೇಳಿದರು
ಸದ್ಯಕ್ಕಿಲ್ಲ ರಾಜಕೀಯ ಪ್ರವೇಶ:
ಕೆಲ ತಿಂಗಳಲ್ಲಿ ರಾಜ್ಯದಲ್ಲಿ ಚುನಾವಣೆ ಎದುರಾಗಲಿದೆ. ಆದರೆ ನನಗೆ ರಾಜಕೀಯ ಪ್ರವೇಶ ಮಾಡಬೇಕೆಂಬ ಇಚ್ಛೆ ಸದ್ಯಕ್ಕೆ ಇಲ್ಲ. ರಾಜಕೀಯ ಪಕ್ಷ ಸೇರಬೇಕೆಂಬ ಆಲೋಚನೆ ಕೂಡ ಮನಸ್ಸಿನಲ್ಲಿ ಇಲ್ಲ. ಅಲ್ಲದೇ ಯಾವುದೇ ರಾಜಕೀಯ ಪಕ್ಷದವರು ಇದುವರೆಗೆ ಆಮಂತ್ರಣ ನೀಡಿಲ್ಲ. ರಾಜಕೀಯಕ್ಕೆ ಬರಬೇಕು ಅಂತ ಜನತೆ ಒತ್ತಾಯಿಸಿದರೆ ಬರುತ್ತೇನೆ. ಬಂದರೆ ಒಳ್ಳೆಯ ಕೆಲಸ ಮಾಡಬೇಕೆಂಬ ಹಂಬಲ ಇದೆ ಎಂದು ತಿಳಿಸಿದರು.












Click it and Unblock the Notifications