ಎಚ್.ಡಿ.ಕೋಟೆ ತಾಲೂಕಿನಲ್ಲಿ ಹುಲಿ ದಾಳಿಗೆ ಮೂರನೇ ಬಲಿ : ಕಂಡಲ್ಲಿ ಗುಂಡಿಕ್ಕಲು ಆದೇಶ
ಮೈಸೂರು, ಫೆಬ್ರವರಿ 1 : ಹೆಗ್ಗಡೆ ದೇವನ ಕೋಟೆ ತಾಲೂಕಿನ ನಾಗರಹೊಳೆ ಅಭಯಾರಣ್ಯದ ಡಿ.ಬಿ. ಕುಪ್ಪೆ ವ್ಯಾಪ್ತಿಯಲ್ಲಿ ನರಭಕ್ಷಕ ಹುಲಿ ಮತ್ತೊಬ್ಬ ಗಿರಿಜನ ವ್ಯಕ್ತಿಯ ಮೇಲೆ ದಾಳಿ ನಡೆಸಿ ಬಲಿ ತೆಗೆದುಕೊಂಡಿದ್ದು, ಗಡಿ ಭಾಗದ ಜನರಲ್ಲಿ ಆತಂಕ ಮನೆ ಮಾಡಿದೆ.
ಅರಣ್ಯಇಲಾಖೆ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಇಲ್ಲಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಚ್ಚೂರು ಹೊಸೂರು ಹಾಡಿಯ ವೇಲು ಉರ್ಫ್ ಕೆಂಚ (55) ಈ ನರಭಕ್ಷಕ ಹುಲಿ ದಾಳಿಗೆ ಬಲಿಯಾದ ಮೂರನೇ ವ್ಯಕ್ತಿಯಾಗಿದ್ದಾನೆ.
ಗುರುವಾರ ಸಂಜೆ 4 ಗಂಟೆ ಸಮಯದಲ್ಲಿ ವೇಲು ಮತ್ತು ಸುಂದರ ಎಂಬುವವರು ಹೊಸೂರು ಗೇಟ್ ನ ಮೈಸೂರು - ಮಾನಂದವಾಡಿ ಹೆದ್ದಾರಿ ಸಮೀಪದಲ್ಲಿ ಮೇಕೆಗಳನ್ನು ಮೇಯಿಸುತ್ತಿದ್ದಾಗ ಈ ನರಭಕ್ಷಕ ಹುಲಿ ದಾಳಿ ನಡೆಸಿದೆ. ಆಗ ಜೀವ ಭಯದಿಂದ ಸುಂದರ ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡಿನಿಂದ ಹುಲಿಯನ್ನು ಹೊಡೆದಿದ್ದಾನೆ. ಸ್ವಲ್ಪ ಹೊತ್ತಿನ ನಂತರ ವೇಲು ಮೇಲೆ ದಾಳಿ ನಡೆಸಿದ ಹುಲಿ ಅವನ ಕತ್ತನ್ನು ಕಚ್ಚಿ ಹಿಡಿದು ಕಾಡಿನೊಳಕ್ಕೆ ಹಿಡಿದುಕೊಂಡು ಹೋಗಿದೆ.
ಇದಾದ ಬಳಿಕ ಸುಂದರ ಕಿರುಚಾಡಿ ಅಕ್ಕಪಕ್ಕದಲ್ಲಿ ಇದ್ದವರನ್ನೆಲ್ಲ ಕರೆದುಕೊಂಡು ಕಾಡಿಗೆ ಹೋಗುತ್ತಿದ್ದಂತೆ 100ಮೀಟರ್ ದೂರದಲ್ಲಿ ಹುಲಿ ವೇಲು ಬಿಟ್ಟು ಪರಾರಿಯಾಗಿದೆ. ಆ ವೇಳೆಗೆ ವೇಲು ಕತ್ತು ಮತ್ತು ತಲೆ ಭಾಗಗಳಿಗೆ ಗಾಯಗಳಾಗಿ ರಕ್ತಸ್ರಾವದಿಂದ ಸ್ಥಳದಲ್ಲೇ ಆತ ಮೃತಪಟ್ಟಿದ್ದಾನೆ.

ಮುಖ್ಯ ರಸ್ತೆ ಬಂದ್
ನರಭಕ್ಷಕ ಹುಲಿ ದಾಳಿಗೆ ಮೂರನೇ ವ್ಯಕ್ತಿ ಬಲಿಯಾದ ವಿಚಾರ ತಿಳಿಯುತ್ತಿದ್ದಂತೆ ಗಡಿ ಭಾಗದ ಅನೇಕ ಹಾಡಿ ಮತ್ತು ಗ್ರಾಮಗಳಿಂದ ಜನರು ತಂಡೋಪತಂಡವಾಗಿ ಘಟನಾ ಸ್ಥಳಕ್ಕೆ ಆಗಮಿಸತೊಡಗಿದರು. ಹೀಗಾಗಿ ಪೊಲೀಸರು ಮುಖ್ಯ ರಸ್ತೆ ಬಂದ್ ಮಾಡಿದರು.

ಅರಣ್ಯ ಇಲಾಖೆಯವರು ಕಾಲ್ಕಿತ್ತರು
ಹುಲಿ ದಾಳಿಯ ಹಿನ್ನೆಲೆಯಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಘಟನಾ ಸ್ಥಳದಲ್ಲಿದ್ದ ಕೆಲವೇ ಕೆಲವು ಮಂದಿ ಅರಣ್ಯ ಇಲಾಖೆಯವರು ಅಲ್ಲಿಂದ ಕಾಲ್ಕಿತ್ತರು. ಪೊಲೀಸರು ಜನರನ್ನು ನಿಯಂತ್ರಿಸಲು ಎಷ್ಟೇ ಪ್ರಯತ್ನಪಟ್ಟರೂ ಆಕ್ರೋಶ ಭರಿತ ಜನರನ್ನು ಸಮಾಧಾನಪಡಿಸಲು ಸಾಧ್ಯವಾಗಲೇ ಇಲ್ಲ.

ಬಿಗಿ ಬಂದೋಬಸ್ತ್
ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋಗಬಹುದೆಂಬ ಹಿನ್ನೆಲೆಯಲ್ಲಿ ಮೈಸೂರು ಮತ್ತಿತರ ತಾಲೂಕುಗಳಿಂದ ಅನೇಕ ಪೊಲೀಸ್ ಸಿಬ್ಬಂದಿಯನ್ನು ಬರಮಾಡಿಕೊಂಡು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.

ಹುಲಿ ಕಂಡಲ್ಲಿ ಗುಂಡು
ಈ ನರಭಕ್ಷಕ ಹುಲಿ ಮೂರು ಜನರನ್ನು ಬಲಿ ತೆಗೆದುಕೊಂಡ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಮುಖ್ಯ ಅಧಿಕಾರಿಗಳು ಹುಲಿ ಕಂಡಲ್ಲಿ ಗುಂಡು ಹಾರಿಸಲು ಈ ಭಾಗದ ಅರಣ್ಯ ಇಲಾಖೆಗಳಿಗೆ ಆದೇಶ ನೀಡಿದ್ದಾರೆ.












Click it and Unblock the Notifications