ಪ್ರವಾಹ ಹಿನ್ನೆಲೆ, ಹೊಗೇನಕಲ್ ಪ್ರವೇಶಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಮೈಸೂರು, ಆಗಸ್ಟ್ 16: ಕಬಿನಿ ಮತ್ತು ಕೆಆರ್ಎಸ್ ಜಲಾಶಯದಿಂದ ಸುಮಾರು ಎರಡು ಲಕ್ಷ ಕ್ಯೂಸೆಕ್ ನೀರು ಹೊರ ಬರುತ್ತಿರುವುದರಿಂದ ಇದೀಗ ಜಲಾಶಯವಿರುವ ತಗ್ಗುಪ್ರದೇಶಗಳು ಜಲಾವೃತವಾಗಿದ್ದು, ಜನರೆಲ್ಲರೂ ಭಯಭೀತರಾಗಿರುವ ಬೆನ್ನಲ್ಲೇ ಪ್ರವಾಸಿಗರ ನೆಚ್ಚಿನ ತಾಣ ಹೊಗೇನಕಲ್ ಪ್ರದೇಶದಲ್ಲಿ ಕಾವೇರಿ ರೌದ್ರತೆಯನ್ನು ಮರೆಯುತ್ತಿದ್ದು ಕಣ್ಣು ಹಾಯಿಸಿದಲ್ಲೆಲ್ಲ ಜಲರಾಶಿ ಹೊರತುಪಡಿಸಿ ಮತ್ತೇನು ಕಾಣುತ್ತಿಲ್ಲ.
ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ತಗ್ಗು ಪ್ರದೇಶಗಳು ಜಲಾವೃತವಾಗಿದ್ದು ಪ್ರವಾಹದ ಅಪಾಯ ಎದುರಾಗಿದೆ. ಕಪಿಲಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಊಟಿ - ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಪರ್ಕ ಕಡಿತಗೊಂಡಿದೆ. ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದು ಬದಲಿ ಮಾರ್ಗದ ಮೂಲಕ ವಾಹನ ಸವಾರರನ್ನು ಕಳುಹಿಸುತ್ತಿದ್ದಾರೆ.
ಮಳೆಗೆ ಹೆದ್ದಾರಿಗಳು ಬಂದ್: ಬೆಂಗಳೂರು,ಮಂಗಳೂರು ವಿಮಾನ ದರ ದುಪ್ಪಟ್ಟು!
ಕಬಿನಿ ಜಲಾಶಯದಿಂದ 74 ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡಲಾಗಿದ್ದು ನದಿ ಪಾತ್ರದ ಪ್ರದೇಶಗಳು ಜಲಾವೃತವಾಗಿದೆ. ಅಣೆಕಟ್ಟೆ ನಿರ್ಮಾಣವಾದ ಜಲಾಶಯದ ಇತಿಹಾಸದಲ್ಲೇ 75 ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡಲಾಗಿದೆ ಎಂದು ಜಲಾಶಯದ ಕಾರ್ಯಪಾಲಕ ಅಭಿಯಂತರ ಜಗದೀಶ್ ತಿಳಿಸಿದ್ದಾರೆ.
ಸೂತ್ತೂರು ಕ್ಷೇತ್ರಕ್ಕೆ ಸಂಪರ್ಕಿಸುವ ಸೇತುವೆಯೂ ಮುಳುಗಡೆಯಾಗಿದ್ದು, ಜನರು , ಮಠಕ್ಕಾಗಮಿಸುವವರು,ಹೊಲಗಳಿಗೆ ತೆರಳುವಾಗ ರೈತರು ಎಚ್ಚರ ವಹಿಸಲು ಸುತ್ತೂರು ಶ್ರೀಗಳು ಮನವಿ ಮಾಡಿದ್ದಾರೆ.
ಎಲ್ಲೆಂದರಲ್ಲಿ ಜಲರಾಶಿಯ ವೈಭವ
ಸಾಮಾನ್ಯವಾಗಿ ಇಲ್ಲಿಗೆ ತೆರಳಿದವರಿಗೆ ಕರ್ರಗಿನ ಹೆಬ್ಬಂಡೆಗಳ ನಡುವೆ ಭೋರ್ಗರೆಯುವ, ಬಳಕುವ ಕಾವೇರಿಯ ಸುಂದರ ರಮ್ಯ ನೋಟ ಲಭ್ಯವಾಗುತ್ತಿತ್ತು. ಆದರೆ ಈಗ ಹಾಗಿಲ್ಲ. ಕಾವೇರಿಯ ರೌದ್ರತೆಗೆ ಹೆಬ್ಬಂಡೆಗಳು ಗಿಡ ಮರಗಳು ಮುಳುಗಿ ಹೋಗಿದ್ದು ಅಪಾರ ಪ್ರಮಾಣದ ಜಲರಾಶಿಯ ನಡುವೆ ಅಲ್ಲೊಂದು ಇಲ್ಲೊಂದು ಎಂಬಂತೆ ಮರಗಳು ಕಾಣಿಸುತ್ತಿವೆಯಾದರೂ ಉಳಿದ ಎಲ್ಲ ನೋಟಗಳು ಕಾವೇರಿಯಲ್ಲಿ ಲೀನವಾಗಿ ಬರೀ ಜಲರಾಶಿಯಷ್ಟೆ ಕಣ್ಣಿಗೆ ರಾಚುತ್ತಿದೆ.
ಇತರೆ ದಿನಗಳಲ್ಲಿ ಇತರೆ ದಿನಗಳಲ್ಲಿ ತೆಪ್ಪದಲ್ಲಿ ತೆರಳಿ, ದೊಡ್ಡ ಗಾತ್ರದ ಬಂಡೆಗಳ ಮಧ್ಯದಿಂದ ಧುಮ್ಮಿಕ್ಕುವ ಕಾವೇರಿಯ ಚೆಲುವನ್ನು ಆಸ್ವಾದಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಆದರೆ ಈಗ ಕಾವೇರಿ ಅಪಾಯ ಮಟ್ಟವನ್ನು ಮೀರಿ ಹರಿಯುತ್ತಿರುವುದರಿಂದ ಅತ್ತ ಹೋದರೆ ಕಥೆ ಮುಗಿದಂತೆಯೇ ಹೀಗಾಗಿ ಅಲ್ಲಿಗೆ ಪ್ರವೇಶ ನಿರ್ಬಂಧಿಲಾಗಿದೆ.
ಮಲೆನಾಡಲ್ಲಿ ನಿಲ್ಲದ ಮಳೆ ಅಬ್ಬರ, ನಾಲ್ಕೈದು ಕಡೆ ಬಿರುಕುಬಿಟ್ಟ ರಸ್ತೆ
ಕರ್ನಾಟಕ-ತಮಿಳುನಾಡಿಗೆ ಸೇರಿದ ಹೊಗೇನಕಲ್
ಹಾಗೆನೋಡಿದರೆ ಹೊಗೇನಕಲ್ ಕರ್ನಾಟಕ ಹಾಗೂ ತಮಿಳುನಾಡಿಗೆ ಗಡಿ ಭಾಗದಲಿದ್ದು, ಈ ಜಲಪಾತ ಪ್ರದೇಶದ ಒಂದು ಭಾಗ ಕರ್ನಾಟಕಕ್ಕೂ, ಮತ್ತೊಂದು ಭಾಗ ತಮಿಳುನಾಡಿಗೆ ಸೇರಿದೆ. ಇವೆರಡು ಪ್ರದೇಶಗಳಲ್ಲೂ ಕಾವೇರಿ ಮೈದುಂಬಿ ಬಂಡೆಗಳ ಮೇಲೆ ಮತ್ತು ನಡುವೆ ಧುಮ್ಮಿಕ್ಕುತ್ತಾಳೆ. ಹೀಗಾಗಿ ಈ ಸುಂದರ ದೃಶ್ಯವನ್ನು ನೋಡಲು ಸಾವಿರಾರು ಪ್ರವಾಸಿಗರು ಬರುತ್ತಾರೆ. ಆದರೆ ಇದೀಗ ಇಲ್ಲಿ ನಿರ್ಬಂಧ ಹೇರಲಾಗಿತ್ತು. ಪ್ರವಾಹ ಪರಿಸ್ಥಿತಿ ತಹಬದಿಗೆ ಬರೋ ತನಕ ಪ್ರವಾಸಿಗರು ಇತ್ತ ತೆರಳದಿರುವುದು ಕ್ಷೇಮ.
ದ್ವೀಪದಂತಾದ ಕುಕ್ಕೆ ಸುಬ್ರಹ್ಮಣ್ಯ, ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆ
ಬಿಳಿಗುಂಡ್ಲುನಲ್ಲಿ ನೀರ ಮಾಪನ
ಇನ್ನು ಕರ್ನಾಟಕದಿಂದ ಬಿಡುವ ನೀರನ್ನು ಅಳತೆ ಮಾಡುವ ಮಾಪಕ ಇದೇ ಪ್ರದೇಶದಲ್ಲಿದೆ. ಇಲ್ಲಿನ ಬಿಳಿಗುಂಡ್ಲು ಎಂಬಲ್ಲಿ ರಾಜ್ಯದಿಂದ ತಮಿಳುನಾಡಿಗೆ ಹರಿಯುವ ನೀರಿನ ಪ್ರಮಾಣವನ್ನು ಅಳತೆ ಮಾಡಿಕೊಳ್ಳುವ ಮಾಪನವಿರಿಸಿದ್ದು, ಇಲ್ಲಿ ಮಾಪನವಾದ ಬಳಿಕ ಕಾವೇರಿ ಮುಂದೆ ಹರಿಯುತ್ತಾಳೆ. ಇದೀಗ ಕಾವೇರಿ ಜಲಾನಯನ ಪ್ರದೇಶದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಯ ಹೊಡೆತ ಕರ್ನಾಟಕ ಮಾತ್ರವಲ್ಲದೆ, ತಮಿಳುನಾಡಿಗೂ ತಟ್ಟುವ ಸಾಧ್ಯತೆಯಿದೆ.
ಹೋಗೆನಕಲ್ನತ್ತ ತೆರಳದಂತೆ ಸೂಚನೆ
ಸಾಮಾನ್ಯವಾಗಿ ಮಲೆಮಹದೇಶ್ವರ ಬೆಟ್ಟಕ್ಕೆ ಬಂದ ಪ್ರವಾಸಿಗರು ಹೊಗೇನಕಲ್ಗೂ ಭೇಟಿ ನೀಡುವ ಆಸಕ್ತಿ ತೋರುತ್ತಾರೆ ಆದರೆ ಇದೀಗ ಬೆಟ್ಟದ ಚೆಕ್ಪೋಸ್ಟ್ನಲ್ಲಿಯೇ ಅತ್ತ ತೆರಳದಂತೆ ಮಾಹಿತಿ ನೀಡಲಾಗುತ್ತಿದೆ. ಇದಲ್ಲದೆ, ಪಾಲಾರ್, ಕೊಕ್ಕರೆ ಚೆಕ್ಪೋಸ್ಟ್ಗಳಲ್ಲಿಯೂ ಹೊಗೆನಕಲ್ ಕಡೆಗೆ ಹೋಗದಂತೆ ಮಾಹಿತಿ ನೀಡಲಾಗುತ್ತದೆ. ಅಪಾಯಕಾರಿ ಪರಿಸ್ಥಿತಿ ಎದುರಾಗಿರುವಾಗ ಪ್ರವಾಸಿಗರು ಕೂಡ ಅತ್ತ ತೆರಳದಿರುವುದು ಒಳಿತು.