ದಸರೆಗೆ 15 ಲಕ್ಷ ಜನ ಸೇರುವ ನಿರೀಕ್ಷೆ; ಸಜ್ಜಾಗುತ್ತಿದೆ ಖಾಕಿ ಪಡೆ
ಮೈಸೂರು, ಸೆಪ್ಟೆಂಬರ್ 7: ಸೆ.30ರಿಂದ ಅ.8ವರೆಗೆ ನಡೆಯಲಿರುವ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಬಿಗಿ ಬಂದೋಬಸ್ತ್ ಒದಗಿಸಲು ಖಾಕಿ ಪಡೆ ಸಜ್ಜಾಗಿದೆ. ಈ ಬಾರಿ ಜಂಬೂಸವಾರಿ ವೀಕ್ಷಣೆಗೆ ಅಂದಾಜು 15 ಲಕ್ಷ ಜನ ಸೇರುವ ನಿರೀಕ್ಷೆಯಿರುವುದಾಗಿ ಮೈಸೂರು ನಗರ ಪೊಲೀಸ್ ಕಮಿಷನರ್ ಕೆ.ಟಿ.ಬಾಲಕೃಷ್ಣ ತಿಳಿಸಿದ್ದಾರೆ.
ದಸರಾ ಉದ್ಘಾಟನೆ ವೇಳೆ ದಿನನಿತ್ಯವೂ ಜಿಲ್ಲೆಗೆ ಒಂದು ಲಕ್ಷಕ್ಕೂ ಹೆಚ್ಚು ಪೊಲೀಸರು ಆಗಮಿಸಲಿದ್ದಾರೆ. ಅರಮನೆಯಿಂದ ಬನ್ನಿಮಂಟಪದವರೆಗೆ ಜಂಬೂಸವಾರಿ ಸಾಗುವ ಹಾದಿಯುದ್ದಕ್ಕೂ ಭದ್ರತೆಯ ದೃಷ್ಟಿಯಿಂದ ಹೆಚ್ಚುವರಿಯಾಗಿ 190 ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ಈಗಾಗಲೇ ಪೊಲೀಸ್ ಚೀತಾಗಳ ಮೂಲಕ ರಸ್ತೆಯ ಎರಡೂ ಬದಿಯ ವಸತಿ, ವಾಣಿಜ್ಯ ಕಟ್ಟಡಗಳ ಸರ್ವೇ ನಡೆಸಿದ್ದು, ಸೂಕ್ತ ಭದ್ರತೆ ಆಯೋಜಿಸುವ ಕೆಲಸ ಬಿರುಸಿನಿಂದ ನಡೆದಿದೆ.

ದಸರಾಗೆ ಮುನ್ನವಾಗಿ ಈಗಾಗಲೇ ಹೋಟೆಲ್ ಬುಕ್ಕಿಂಗ್ ಆರಂಭವಾಗಿದೆ. ಸಹಜವಾಗಿಯೇ ಹೈ ಅಲರ್ಟ್ನಡಿ ಭದ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ. 500 ಜನರ ದಟ್ಟಣೆಯಿರುವ ಸ್ಥಳಗಳಲ್ಲಿ ಸಿ.ಸಿ.ಟಿವಿ ಕ್ಯಾಮೆರಾಗಳನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ಈ ಹಿಂದೆಯೇ ಸೂಚಿಸಲಾಗಿತ್ತು. ಅದರಂತೆ ಶಾಲಾ-ಕಾಲೇಜು, ಶಾಪಿಂಗ್ ಕಾಂಪ್ಲೆಕ್ಸ್ ಸೇರಿದಂತೆ ಇನ್ನಿತರೆಡೆ ಖಾಸಗಿಯಾಗೇ 14,500 ಸಿ.ಸಿ.ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ದಸರಾಗೆ ಹೊರ ಜಿಲ್ಲೆಗಳಿಂದ ಹೆಚ್ಚುವರಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಕರೆಸಿಕೊಳ್ಳುವ ಬಗ್ಗೆ ಶೀಘ್ರ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕೆ.ಟಿ.ಬಾಲಕೃಷ್ಣ ತಿಳಿಸಿದ್ದಾರೆ.












Click it and Unblock the Notifications